ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ...
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಜಾರಿಯಲ್ಲಿದೆ "ಲಾಕ್ ಡೌನ್". ಇಂದು ಮೇ 17ರವರೆಗೂ ಮತ್ತೆ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ. ಲಾಕ್ ಡೌನ್ ನಂತರ ಕೆಲವು ಕಡೆ ಸಡಿಲವಾದರೆ, ಮತ್ತೆ ಕೆಲವು ಕಡೆ ಯಥಾಸ್ಥಿತಿ ಮುಂದುವರಿಯಲಿದೆ.
ಒಂದು ತಿಂಗಳ ಹಿಂದೆ ಇಂಥದೊಂದು ದಿಢೀರ್ ಬೆಳವಣಿಗೆ ಅನೇಕರಿಗೆ ಬರಸಿಡಿಲು ಬಡಿದಂತಾದದ್ದು ಸುಳ್ಳಲ್ಲ. ಲಕ್ಷಾಂತರ ಕೂಲಿ ಕಾರ್ಮಿಕರು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರಿಗೆ "ಲಾಕ್ ಡೌನ್" ಶಬ್ದ ದಿಕ್ಕು ತೋಚದ ಸ್ಥಿತಿಗೆ ತಂದು ಕೂರಿಸಿತ್ತು. ಅವರ ಸಂಕಟಗಳ ಬಗ್ಗೆ, ನೂರಾರು ಮೈಲಿ ನಡೆದು ಊರು ಸೇರುವ ಅವರ ದುಸ್ಸಾಹಸ ಹಾಗೂ ಅನಿವಾರ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ನಮ್ಮನ್ನೆಲ್ಲಾ ನಡುಗಿಸಿದ್ದವು. ಕಾರ್ಮಿಕರ ದಿನವಾದ ಇಂದು "ಭವಿಷ್ಯದಲ್ಲಿ ಕಾರ್ಮಿಕರಿಗೆ ಒಳಿತಾಗಲಿ" ಎಂದಷ್ಟೇ ಬಯಸಿ ಮತ್ತೇನೂ ಮಾಡಲಾಗದ ಕೋಟ್ಯಂತರ ಮಧ್ಯಮ ವರ್ಗದವರಂತೆ ದೈನೇಸಿ ಸ್ಥಿತಿಯಲ್ಲಿ ಈ ಪುಟ್ಟ ಬರಹ ಮಾಡಲು ಕುಳಿತಿದ್ದೇನೆ...

ಸ್ವಚ್ಛಂದವಾಗಿ ಕಾಡುಗಳಲ್ಲಿ ಬದುಕಿದ್ದ ಆದಿವಾಸಿಗಳ ಕಥೆಯೇನು?
ಇಂದು ಬೆಳಿಗ್ಗೆ ಏಕಾಏಕಿ ಕೊರೊನಾ ವೈರಸ್ ಕಾರಣಕ್ಕೆ ಹೆಚ್ಚು ಪ್ರಸಿದ್ಧಿ ಪಡೆದ ಪದಗಳಾದ ಕ್ವಾರಂಟೈನ್ (ದಿಗ್ಭಂದನ, ಪ್ರತೇಕವಾಗಿಡುವುದು) ಮತ್ತು social distance - ಸಾಮಾಜಿಕ ಅಂತರದ ಬಗ್ಗೆ ಯೋಚಿಸುತ್ತಿದ್ದಾಗ ಆದಿವಾಸಿಗಳು ನೆನಪಾದರು. ಅವರು ನಗರ ಪಟ್ಟಣಗಳೆಂಬ ಗೋಜಲೇ ಇಲ್ಲದೆ ಸ್ವಚ್ಛಂದವಾಗಿ ಕಾಡುಗಳಲ್ಲಿ ಬದುಕಿದ್ದವರು. ಆಧುನಿಕ ಪ್ರಪಂಚದಿಂದ ನಿಜಾರ್ಥದಲ್ಲಿ ಕ್ವಾರಂಟೈನ್ ನಲ್ಲಿದ್ದವರು (ಪ್ರತ್ಯೇಕವಾಗಿದ್ದವರು). ಸದ್ಯದ ಅವರ ಪರಿಸ್ಥಿತಿಯ ಬಗ್ಗೆ ತಿಳಿಯುವ ಆಸಕ್ತಿಯಿಂದ ಕಳೆದ ಮೂರ್ನಾಲ್ಕು ದಶಕಗಳಿಂದ ಆದಿವಾಸಿಗಳ ಶ್ರೇಯಕ್ಕಾಗಿ ಕೆಲಸ ಮಾಡುತ್ತಿರುವ ಮೈಸೂರು ಜಿಲ್ಲೆಯ DEED ಸಂಸ್ಥೆಯ ಮುಖ್ಯಸ್ಥರಾದ ಶ್ರೀಕಾಂತ್ ಅವರನ್ನು ಮಾತನಾಡಿಸಿದೆ. ಆಗ ಕೆಲವು ಸಂಗತಿಗಳು ತಿಳಿದುಬಂದವು.

ಆದಿವಾಸಿಗಳಿಗೆ ಕೂಲಿಯೇ ಗಟ್ಟಿ, ಆದರೆ ಈಗ ಅದೂ ಇಲ್ಲ...
"ನಿಮಗೆ ಗೊತ್ತೇ ಇದೆ, ನಮ್ಮ ಆದಿವಾಸಿಗಳಿಗೆ ನಿಶ್ಚಿತ ಆದಾಯದ ಮೂಲವಿಲ್ಲ. ಕೂಲಿಯೇ ಗಟ್ಟಿ. ಇದೀಗ ಕೂಲಿಯೂ ಸಿಗುತ್ತಿಲ್ಲ. ಹಾಗಾಗಿ ಪ್ರತಿ ಆದಿವಾಸಿ ಕುಟುಂಬಗಳಿಗೆ ಮುಂದಿನ ಐದಾರು ತಿಂಗಳು ಕನಿಷ್ಠ 50 ಕೆ.ಜಿ ದಿನಸಿ ಕೊಡಬೇಕು. (ಈಗ ಸರ್ಕಾರದ ಎಲ್ಲ ಮೂಲಗಳಿಂದ ಬರುತ್ತಿರುವ ದಿನಸಿ ಹತ್ತದಿನೈದು ದಿನಕ್ಕೆ ಮಾತ್ರ ಸಾಕಾಗುತ್ತಿದೆ). ಕುಟುಂಬವೊಂದಕ್ಕೆ ನರೇಗಾ ವತಿಯಿಂದ 200 ರೂಪಾಯಿ ಕೊಡಬೇಕು. ಮಾಸ್ಕ್ ಒದಗಿಸಬೇಕು. ಎಲ್ಲರಿಗೂ ಆರೋಗ್ಯ ತಪಾಸಣೆ ಆಗಬೇಕು. ಅದಾಗ ಆದಿವಾಸಿಗಳ ಪ್ರಸ್ತುತ ಸಮಸ್ಯೆಗೊಂದಿಷ್ಟು ತಾತ್ಕಾಲಿಕ ಪರಿಹಾರವಾಗಬಹುದು. ಆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ". ತೀರಾ ದುಬಾರಿಯೂ ಅನಿಸದ, ಅಸಾಧ್ಯವೂ ಅಲ್ಲದ ಇಂಥ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬಹುದೆಂದು ಯಾರಿಗಾದರೂ ಅನಿಸದೆ ಇರದು. ಅಂದಹಾಗೆ ಆದಿವಾಸಿಗಳ ಬಗ್ಗೆ ಒಂದಿಷ್ಟು ಮಾಹಿತಿ ಒನ್ ಇಂಡಿಯಾ ಓದುಗರಿಗಾಗಿ ಇಲ್ಲಿ ನೀಡಲಾಗಿದೆ...

ಆದಿವಾಸಿಗಳು ಏನು ಎಂತು?
ಸ್ವಾತಂತ್ರ್ಯಾನಂತರ "ಅಭಿವೃದ್ಧಿ'ಯ ಹೆಸರಿನಲ್ಲಿ ನಮ್ಮ ಪ್ರಭುತ್ವ ಸ್ವಾವಲಂಬಿಗಳು, ಸ್ವತಂತ್ರಪ್ರಿಯರೂ ಆಗಿದ್ದ ಕಾಡಿನ ಮಕ್ಕಳನ್ನು ಕಾಡಿನಿಂದ ಒಕ್ಕಲೆಬ್ಬಿಸಿದ್ದು ಇದೀಗ ಇತಿಹಾಸ. "ನಂಗ ಕಾಡು, ನಂಗ ಭೂಮಿ, ನಂಗಾವೇ ಆಳಾಕು" (ನಮ್ಮ ಕಾಡು, ನಮ್ಮ ಭೂಮಿ, ನಾವೇ ಆಳುವವರು) ಎಂಬ ನೈಜ ಕಾಳಜಿಯಲ್ಲಿಯೇ ಈ ದೇಶದ ಆದಿವಾಸಿ ಜನ ಬದುಕಿದ್ದರು. ಪಕೃತಿಯ ಆರಾಧಕರಿವರು. ಜೀವಸೃಷ್ಠಿಯ ಬಗ್ಗೆ ಭಾವನಾತ್ಮಕ ಸಂಬಂಧ ಉಳ್ಳವರು. ದೇಶಾದ್ಯಂತ ಇವರನ್ನು ಕಾಡುಜನ, ಗುಡ್ಡಗಾಡು ಜನ, ಗಿರಿಜನ, ಮೂಲ ನಿವಾಸಿಗಳು, ಆದಿವಾಸಿಗಳು, ಬುಡಕಟ್ಟು ಜನಾಂಗ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಇದೀಗ ಇವರೆಲ್ಲರೂ ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಂಡು ಕಾಡಲ್ಲೂ ಸಲ್ಲದೆ ನಾಡಿಗೂ ಒಗ್ಗದೆ ಎಡಬಿಡಂಗಿ ಸ್ಥಿತಿಯಲ್ಲಿ ಕೈಗೆ ಸಿಕ್ಕ ಕೂಲಿ ಕೆಲಸಗಳನ್ನು ಮಾಡುತ್ತಾ ಬದುಕುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅರಣ್ಯ ಹಿನ್ನೆಲೆಯ 70,000 ಆದಿವಾಸಿ ಕುಟುಂಬಗಳಿವೆ. ಈ ಕುಟುಂಬಗಳು 9 ಜಿಲ್ಲೆಗಳ 32 ತಾಲ್ಲೂಕುಗಳ, 1500 ಹಾಡಿಗಳಲ್ಲಿ ಚದುರಿ ಹೋಗಿದ್ದಾರೆ. ಅಂದಾಜು ಜನಸಂಖ್ಯೆ 4 ಲಕ್ಷ.

ಅರ್ಧ ಹೊಟ್ಟೆ ತುಂಬಿಸಿರುವ ಸರ್ಕಾರ ಇದನ್ನು ಗಮನಿಸಲಿ
ಮೈಸೂರು ಜಿಲ್ಲೆಯ ಉದಾಹರಣೆ ನೋಡೋಣ... ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ, ಸರಗೂರು, ನಂಜನಗೂಡು ತಾಲ್ಲೂಕುಗಳಲ್ಲಿ ಸುಮಾರು 10,000 ಆದಿವಾಸಿ ಕುಟುಂಬಗಳಿವೆ. ಅಂದಾಜು ಜನಸಂಖ್ಯೆ 45,000. ಇನ್ನೇನು ಲಾಕ್ ಡೌನ್ ಅವಧಿ ಸಡಿಲವಾಗುತ್ತದೆ, ಕೆಲಸ ಆರಂಭಿಸಬಹುದೆನ್ನುವುದಕ್ಕೆ ಇವರ ಕೆಲಸ ಇತರೆ ಫ್ಯಾಕ್ಟರಿಗಳಂತಾಗುವುದಿಲ್ಲ. ಮಳೆ ಬರಬೇಕು, ಕೃಷಿ ಚಟುವಟಿಕೆಗಳು ಗರಿಗೆದರಬೇಕು. ಕಾಡಿನ ಸುತ್ತಣ ಕೃಷಿಕರು/ಜಮೀನ್ದಾರರು ಇವರನ್ನು ಕೂಲಿಗೆ ಕರೆಯಬೇಕು. ಒಪ್ಪತ್ತು ಊಟ, ಕಾಫಿ ಕೊಟ್ಟು ದಿನಗೂಲಿ ಕೊಡಬೇಕು. ಅದೆಲ್ಲಾ ಆಗಬೇಕಂದರೆ ಇನ್ನೂ ಒಂದೆರಡು ತಿಂಗಳು ಬೇಕಾದೀತು. ಈವರೆಗೆ ಸರ್ಕಾರ ಇವರಿಗೆ ನೀಡಿರುವ ಸವಲತ್ತು (ದವಸ ಧಾನ್ಯ) ಇಡೀ ತಿಂಗಳು ಮನೆ ತೂಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅರ್ಧ ಹೊಟ್ಟೆ ತುಂಬಿಸಿರುವ ಸರ್ಕಾರ ಇವರಿಗೆ ಮುಂದಿನ ಕೆಲ ತಿಂಗಳುಗಳ ಕಾಲ ಹೊಟ್ಟೆ ತುಂಬಾ ಊಟ ಕೊಡುವಂತಾಗಲಿ ಎಂಬುದು ಆದಿವಾಸಿಗಳ ನಡುವೆ ಕೆಲಸ ಮಾಡುವವರ ಒತ್ತಾಯವಾಗಿದೆ.
-
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್












Click it and Unblock the Notifications