ಅಡಿಕೆಯಲ್ಲಿ ಎಲೆಚುಕ್ಕೆ ರೋಗ; ಹತೋಟಿಗೆ ರೈತರಿಗೆ ಸಲಹೆಗಳು
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ಫಲಸು ನೀಡುವ ಅಡಿಕೆ ಮರಗಳು ರೋಗದಿಂದಾಗಿ ಒಣಗುತ್ತಿವೆ, ರೋಗ ಹತೋಟಿ ಮಾಡುವುದು ಹೇಗೆ? ಎಂದು ರೈತರು ಚಿಂತಿಸುತ್ತಿದ್ದಾರೆ.
ಅಡಿಕೆಯಲ್ಲಿ ಎಲೆ ಚುಕ್ಕೆರೋಗ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಅಡಿಕೆ ಕೃಷಿಕರಿಗೆ ತೋಟದಲ್ಲಿ ಈ ರೋಗ ಅರಿವಿಗೆ ಬರುವುದು ತಡವಾಗುತ್ತಿದೆ. ಇದರಿಂದ ಅಡಿಕೆ ಫಸಲಿನ ಮೇಲೆ ಪರಿಣಾಮವಾಗುತ್ತಿದೆ.
ಎಲ್ಲಾ ಅಡಿಕೆ ಬೆಳೆಗಾರರು ಸಾಮೂಹಿಕವಾಗಿ ಮುಂಜಾಗೃತಾ ಕ್ರಮಕೈಗೊಂಡು ಸೂಕ್ತ ಔಷಧ ಸಿಂಪರಣೆ ಮಾಡುವುದು ಅಗತ್ಯ ಎಂದು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳಾದ ಡಾ. ನಿರಂಜನ್ ಕೆ. ಎಸ್. ಹೇಳಿದರು.

ಮಾಸ್ತಿಕಟ್ಟೆ ಗ್ರಾಮ ಪಂಚಾಯಿತಿ ಕೆ.ವಿ.ಕೆ., ಶಿವಮೊಗ್ಗ, ಹೊಸನಗರದ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಮಾತನಾಡಿದರು, ಎಲೆಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದರು.
"ಮಲೆನಾಡಿನ ಪ್ರಮುಖ ಪ್ರದೇಶಗಳಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಶುರುವಾದ ಮಳೆ ಈಗಲೂ ಮುಂದುವರೆದಿದೆ. ಅಡಿಕೆಗೆ ಅಗತ್ಯವಿರುವ ಪ್ರಮಾಣದ ಬಿಸಿಲು ಸಿಗುತ್ತಿಲ್ಲ, ಹೀಗಾಗಿ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ಎಲೆಚುಕ್ಕೆ ರೋಗಕ್ಕೆ ಪ್ರಮುಖ ಕಾರಣ" ಎಂದು ತಿಳಿಸಿದರು.
ಈ ರೋಗ ಹರಡಲು ಪ್ರಮುಖವಾದ ಮೂರು ಶಿಲೀಂಧ್ರಗಳು ಕೊಲೆಟೋಟ್ರೈಕಮ್, ಫಿಲೋಸ್ಟಿಕ್ಟಾ ಅರೆಕಾ ಮತ್ತು ಪೆಸ್ಟಲೋಸಿಯಾ. ಇವುಗಳ ತೀವ್ರತೆಯ ಬಗ್ಗೆ ರೈತರಿಗೆ ವಿಜ್ಞಾನಿಗಳು ವಿವರಿಸಿದರು.
ತಜ್ಞ ವಿಜ್ಞಾನಿಗಳು ಸೋಂಕು ಬಾಧಿತ ಕೃಷಿಕರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಸಲಹೆ ನೀಡಿದರು. ರೈತರಿಗೆ ರೋಗದ ಲಕ್ಷಣಗಳನ್ನು ರೈತರಿಗೆ ತಿಳಿಸಿದರು. ರೋಗ ಹತೋಟಿ ಮಾಡಲು ಸಲಹೆಗಳನ್ನು ನೀಡಿದರು.

ರೈತರಿಗೆ ಸಲಹೆಗಳು; ಎಲೆಚುಕ್ಕೆರೋಗ ಬಾಧಿತ ಗಿಡದ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಸೋಗೆಗಳನ್ನು ಆವರಿಸುತ್ತದೆ. ನಂತರ ಸೋಗೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಸೋಗೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.
ಶಿಲೀಂಧ್ರ ನಾಶಕಗಳಾದ ಸಾಫ್ (SAAF) (2 ಗ್ರಾಂ/1 ಲೀಟರ್ ನೀರಿಗೆ) ಅಥವಾ ಹೆಕ್ಸಾಕೊನಜೋಲ್ (1 ಮಿ.ಲೀ./ 1 ಲೀಟರ್ ನೀರಿಗೆ) ಅಥವಾ ಪ್ರೊಪಿಯೊಕೊನಾಜೋಲ್ (1 ಮಿ.ಲೀ./1 ಲೀಟರ್ ನೀರಿಗೆ) ಇವುಗಳಲ್ಲಿ ಯಾವುದಾದರೂ ಒಂದನ್ನು ಸಿಂಪರಣೆ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಸಾಮೂಹಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ; ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ಇದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ರಾಜ್ಯದ ನಾಯಕರ ನಿಯೋಗ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಮುಂತಾದವರು ಇದ್ದರು.
ಕಳೆದ ವಾರ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಡಿಕೆ ಬೆಳೆಗಾರರು ಎಲೆಚುಕ್ಕಿ, ಕೊಳೆರೋಗ ಮತ್ತು ಇತರೆ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದ್ದು, ಒಟ್ಟು ಪ್ರದೇಶದ ಶೇ 68 ಮತ್ತು ದೇಶದ ಒಟ್ಟು ಅಡಿಕೆ ಉತ್ಪಾದನೆಯ ಶೇ 80 ಕೊಡುಗೆ ನೀಡುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಅಡಿಕೆಯನ್ನು 5.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 5 ದಶಲಕ್ಷಕ್ಕೂ ಹೆಚ್ಚು ಜನರು ಅಡಿಕೆ ಕೃಷಿಯ ಮೇಲೆ ಅವಲಂಬಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿಗೆ ಹೆಚ್ಚಿನ ಹಾನಿಯಾಗುತ್ತಿದೆ. ಜೈವಿಕ ಮತ್ತು ಅಜೈವಿಕ ಅಂಶಗಳು ರೈತರಿಗೆ ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿವೆ. ಇದಲ್ಲದೆ, ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳು ಎಲೆಚುಕ್ಕೆ, ಹಣ್ಣಿನಂತಹ ರೋಗಗಳಿಗೆ ಅನುಕೂಲಕರವಾಗಿದ್ದು, ಕೊಳೆರೋಗ, ಗ್ಯಾನೊಡೆರಾಮಾ ಕೊಳೆ ರೋಗ ಇತ್ಯಾದಿಗಳು ಇಳುವರಿಯಲ್ಲಿ ಸಾಕಷ್ಟು ನಷ್ಟವನ್ನು ಮಾಡಿವೆ.
ಅಡಿಕೆ ಇಳುವರಿ ನಷ್ಟದಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುರಿತು ಕೇಂದ್ರ ಸಚಿವರಿಗೆ ಮನವಿ ಪತ್ರದಲ್ಲಿ ವಿವರಣೆ ನೀಡಲಾಗಿದೆ.
ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕರ್ನಾಟಕ ಸರ್ಕಾರ ಈಗಾಗಲೇ ರೋಗ ನಿರ್ವಹಣೆಗಾಗಿ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಒದಗಿಸುತ್ತಿದ್ದರೂ ರೈತರಿಗೆ ಉಂಟಾದ ನಷ್ಟವನ್ನು ಸರಿದೂಗಿಸಲು ಇದು ಸಾಕಾಗುತ್ತಿಲ್ಲ. ಆದ್ದರಿಂದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕ್ರಮಗಳನ್ನು ಅಳವಡಿಸಿಕೊಳ್ಳಲು ಕೇಂದ್ರದ ಸಹಕಾರ ಕೇಳಲಾಗಿದೆ.











Click it and Unblock the Notifications