ಅಡಿಕೆಗೆ ಎಲೆಚುಕ್ಕಿ ರೋಗ, ಬೆಳೆಗಾರರಿಗೆ ಸರ್ಕಾರದಿಂದ ನೆರವು
ಶಿವಮೊಗ್ಗ, ನವೆಂಬರ್ 17; ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಡಾ. ಎಸ್. ಸೆಲ್ವಕುಮಾರ್ ಹೇಳಿದರು.
ಶುಕ್ರವಾರ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಹಾಗೂ ಕೆಡಿಪಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ; ಮುಂದಿನ ವಾರ ಕೇಂದ್ರ ತಂಡ ಆಗಮನ
"ಜಿಲ್ಲೆಯಲ್ಲಿ ಅಡಿಕೆ ಮರಗಳಲ್ಲಿ ಕಂಡು ಬಂದಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ರೈತರಿಗೆ ಉಚಿತವಾಗಿ ಔಷಧಿ ವಿತರಿಸಲು ಈಗಾಗಲೇ 1.5ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಅಡಿಕೆ ಬೆಳೆಗಾರರಿಗೆ ಎಲ್ಲಾ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ" ಡಾ. ಎಸ್. ಸೆಲ್ವಕುಮಾರ್ ಸೂಚಿಸಿದರು.
ಚೀನಾಗೆ ತೊಂದರೆ ಕೊಡಲು ಅಡಿಕೆ ಆಮದು: ಆರಗ ಜ್ಞಾನೇಂದ್ರ ಹೇಳಿಕೆಗೆ ಎಎಪಿ ಕಿಡಿ
ಅಡಿಕೆ ತೋಟಗಳಿಗೆ ಹಾನಿ; ಶಿವಮೊಗ್ಗ ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗದಿಂದಾಗಿ ಆಗುಂಬೆ ಹಾಗೂ ನಗರ ಹೋಬಳಿಗಳಲ್ಲಿ ಸುಮಾರು 6395 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ಹಾನಿ ಉಂಟಾಗಿದೆ. ಈ ರೋಗದಿಂದಾಗಿ ಶೇ.20 ರಿಂದ 25ರಷ್ಟು ಇಳುವರಿ ಹಾಗೂ ಮರಗಳಿಗೆ ಹಾನಿ ಉಂಟಾಗಿದ್ದು, ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ; ರೈತರಿಗೆ ಉಚಿತವಾಗಿ ಔಷಧಿ
ಎಲೆ ಚುಕ್ಕಿ ರೋಗದಿಂದ ಆಗಿರುವ ಹಾನಿ ಕುರಿತು ಸಮೀಕ್ಷೆ ನಡೆಸಲು ಕೇಂದ್ರ ತಂಡ ಸದ್ಯಲ್ಲಿಯೇ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದೆ. ಶಿವಮೊಗ್ಗ 250 ಹೆಕ್ಟೇರ್, ಭದ್ರಾವತಿ 87 ಹೆಕ್ಟೇರ್, ಶಿಕಾರಿಪುರ 188 ಹೆಕ್ಟೇರ್, ಸೊರಬ 200 ಹೆಕ್ಟೇರ್, ಸಾಗರ 1820 ಹೆಕ್ಟೇರ್, ಹೊಸನಗರ 1850 ಹೆಕ್ಟೇರ್ ಹಾಗೂ ತೀರ್ಥಹಳ್ಳಿಯಲ್ಲಿ 2ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಕಂಡು ಬಂದಿದ್ದು, ಜಿಲ್ಲೆಗೆ ಸರ್ಕಾರ ಪ್ರಥಮ ಹಂತದಲ್ಲಿ 1.21 ಕೋಟಿ ರೂ. ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ.
ಜಾನುವಾರುಗಳಿಗೆ ಚರ್ಮಗಂಟು ರೋಗ; ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ಭಾಗದಲ್ಲಿ ಕಾಣಿಸಿಕೊಂಡಿದ್ದ ಜಾನುವಾರುಗಳ ಚರ್ಮಗಂಟು ರೋಗ ಬಹುತೇಕ ನಿಯಂತ್ರಣದಲ್ಲಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.
ಚರ್ಮಗಂಟು ರೋಗದಿಂದಾಗಿ ಸುಮಾರು 100 ಜಾನುವಾರುಗಳು ಸಾವಿಗೀಡಾಗಿದ್ದು, ಜಾನುವಾರುಗಳ ಸಾಗಾಣಿಕೆ ಹಾಗೂ ಜಾತ್ರೆಯನ್ನು ನಿರ್ಬಂಧಿಸಿದ ಕಾರಣ ರೋಗ ಹತೋಟಿಗೆ ಬಂದಿದೆ. ಕಾಲುಬಾಯಿ ರೋಗ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಡಿಸೆಂಬರ್ 7ರವರೆಗೆ ನಡೆಯಲಿದೆ ಎಂದು ಹೇಳಿದರು.
ಗೋ ಶಾಲೆ ನಿರ್ಮಾಣ: ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ಜಿಲ್ಲೆಗೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 34 ಲಕ್ಷ ರೂ. ವೆಚ್ಚದಲ್ಲಿ ಶೆಡ್ ಮತ್ತು ಶೆಲ್ಟರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈ ಗೋಶಾಲೆಯಲ್ಲಿ 100 ಗೋವುಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನುಳಿದಂತೆ ಜಿಲ್ಲೆಯಲ್ಲಿ 12 ಗೋಶಾಲೆಗಳಿದ್ದು, 7 ಗೋಶಾಲೆಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ.
ಜಲಜೀವನ್ ಮಿಷನ್: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಯನ್ನು ಆರಂಭಿಸುವಂತೆ ಸೆಲ್ವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಜನೆಯ ಪ್ರಥಮ ಹಂತದಲ್ಲಿ 613 ಕಾಮಗಾರಿಗಳಿಗೆ 146 ಕೋಟಿ ರೂ. ಮಂಜೂರಾಗಿದ್ದು, 609 ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ 268 ಕಾಮಗಾರಿಗಳಿಗೆ 136 ಕೋಟಿ ರೂ. ಮಂಜೂರಾಗಿದ್ದು, 122 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ಮೂರನೇ ಹಂತದಲ್ಲಿ 1126 ಕಾಮಗಾರಿಗಳಿಗೆ 422 ಕೋಟಿ ರೂ. ಮಂಜೂರಾಗಿದ್ದು 44 ಕಾಮಗಾರಿಗಳು ಪೂರ್ಣಗೊಂಡಿವೆ. ನಾಲ್ಕನೇ ಹಂತದಲ್ಲಿ 525 ಕಾಮಗಾರಿಗಳಿಗೆ 295 ಕೋಟಿ ರೂ. ಮಂಜೂರಾಗಿದ್ದು, ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ.