ರಾಯಚೂರು ಕೃಷಿ ವಿವಿಯಲ್ಲಿ ಜ.10 ರಿಂದ ಕೃಷಿ ಮೇಳ
ರಾಯಚೂರು, ಜನವರಿ 08; 'ಸಿರಿಧಾನ್ಯಗಳ ಸಾರ ಜೀವಕ್ಕೆ ಆಧಾರ' ಎಂಬ ಧ್ಯೇಯ ವಾಕ್ಯದೊಂದಿಗೆ ಮೂರು ದಿನಗಳ ಕೃಷಿ ಮೇಳವನ್ನು ರಾಯಚೂರಿನಲ್ಲಿ ಆಯೋಜನೆ ಮಾಡಲಾಗಿದೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಜನವರಿ 10, 11 ಮತ್ತು 12ರಂದು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಕೃಷಿಮೇಳ ವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಸಿರಿಧಾನ್ಯ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ನೀರು ಸಂರಕ್ಷಣೆ-ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಲಂಕಾರಿಕ ಮೀನು ಸಾಕಾಣಿಕೆ, ಬೀಜಗಳು, ಔಷಧೀಯ ಮತ್ತು ಸುಗಂಧಿತ ಸಸ್ಯಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕರು, ಜೈವಿಕ ಗೊಬ್ಬರಗಳ ಮಾಹಿತಿ ಸಿಗಲಿದೆ.

ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಪಶುಸಂಗೋಪನೆ, ಸ್ವ-ಸಹಾಯ ಗುಂಪುಗಳ ಸಬಲೀಕರಣ, ಉನ್ನತ ತೋಟಗಾರಿಕೆ ತಂತ್ರಜ್ಞಾನ, ಗುಡಿ ಕೈಗಾರಿಕೆಗಳು, ಕೃಷಿ ಯಂತ್ರೋಪಕರಣಗಳು, ಕೊಯ್ಲು ಮತ್ತು ಕೊಯ್ಲೋತ್ತರ ಯಂತ್ರಗಳು, ಹನಿ ಮತ್ತು ತುಂತುರು ನೀರಾವರಿ, ಬೀಜ ಸಂಸ್ಕರಣೆ ಮತ್ತು ಆಹಾರ ಸಂಸ್ಕರಣಾ ಯಂತ್ರಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.
ಸಾಂಪ್ರದಾಯಿಕವಲ್ಲದ ಶಕ್ತಿ ಉಪಕರಣಗಳು, ನೈಜ ಬೆಳೆಗಳ ಪ್ರಾತ್ಯಕ್ಷಿಕೆ, ರೈತರಿಂದ ರೈತರಿಗೆ-ವಿಶೇಷ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಜಾನುವಾರು-ಮತ್ಸ್ಯ ಪ್ರದರ್ಶನ ಇವು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಈ ಕಾರ್ಯಕ್ರಮಕ್ಕೆ ಆಸಕ್ತ ರೈತರು, ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಚಟುವಟಿಕೆಗಳ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.

ಇ-ಕೆವೈಸಿ ಕಡ್ಡಾಯ; ಕೇಂದ್ರ ಸರ್ಕಾರದ ಪಿಎಂಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಕೃಷಿ ಇಲಾಖೆ ಸೂಚಿಸಿದ ಫಲಾನುಭವಿಗಳು https://pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ ಇ-ಕೆವೈಸಿ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿ, ಬಳಿಕ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಪ್ರಕ್ರಿಯೆ ಇ-ಕೆವೈಸಿ ಪೂರ್ಣಗೊಳಿಸಬಹುದು.
ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಒಟಿಪಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಅಥವಾ ಸೈಬರ್ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಲು ಅವಕಾಶವಿರುತ್ತದೆ.
ಪ್ರತಿಯೊಬ್ಬ ಫಲಾನುಭವಿ ರೈತರು ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ಇ-ಕೆವೈಸಿ ಮಾಡಸದಿರುವ ರೈತರಿಗೆ ಮುಂದಿನ 13ನೇ ಕಂತಿನ ಅನುದಾನ ವರ್ಗಾವಣೆಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.












Click it and Unblock the Notifications