ಬೇಸಾಯ ಉತ್ತೇಜಿಸಲು ಅಂಕೋಲಾದಲ್ಲಿ 'ಕೃಷಿ ಹಬ್ಬ'
ಕಾರವಾರ, ಜುಲೈ 23 : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಸಗೋಡ ಗ್ರಾಮದಲ್ಲಿ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ 'ಕೃಷಿ ಹಬ್ಬ' ಎಂಬ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮ ರವಿವಾರ ನಡೆಯಿತು.
ಆಧುನಿಕತೆ ಮೋಡಿಗೆ ಸಿಲುಕಿ ಕೃಷಿ ಚಟುವಟಿಕೆಯಿಂದ ಹಿಮ್ಮುಖರಾಗುತ್ತಿರುವ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಹಾಗೂ ಉತ್ತಮ ಭೂಮಿ, ಬೇಕಾಗುವಷ್ಟು ನೀರಿದ್ದರೂ ಸಹ ಕೃಷಿ ಮಾಡದೇ ಹಾಗೇ ಭೂಮಿಯನ್ನು ಬಂಜರು ಬಿಡುತ್ತಿರುವ, ಕೃಷಿಯನ್ನು ಬಿಟ್ಟು ಬೇರೆ ಸೆಳೆತಕ್ಕೊಳಗಾಗುವವರನ್ನು ಪುನಃ ವ್ಯವಸಾಯದತ್ತ ಆಕರ್ಷಿಸುವ ವಿಶೇಷ 'ಕೃಷಿ ಹಬ್ಬ' ಎಲ್ಲರ ಗಮನ ಸೆಳೆಯಿತು.

ಕಾರವಾರದ ಪಹರೆ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಮಾದರ ಗುರುಪೀಠದ ಮಠಾಧೀಶರಾದ ಶ್ರೀ ಬಸವಮೂರ್ತಿ ಮಾದಾರ ಚನ್ಯಯ್ಯ ಸ್ವಾಮೀಜಿಯವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಗಣ್ಯರೂ ಕೂಡ ಉಳುಮೆ ಮಾಡಿದ ಗದ್ದೆಯಲ್ಲಿ ಭತ್ತದ ಸಸಿಯನ್ನು ನೆಟ್ಟು ಆಚರಣೆಗೆ ಅರ್ಥ ಕಲ್ಪಿಸಿದರು. ಪಹರೆ ವೇದಿಕೆಯು ಕಳೆದ 7 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಮಾದಾರ ಚನ್ಯಯ್ಯನವರು, ದೇಶದ ಜನತೆ ಸ್ವಾಭಿಮಾನದಿಂದ ಜೀವನ ನಡೆಸಬೇಕು ಎಂದಾದರೆ ಕೃಷಿಯನ್ನು ಆಶ್ರಯಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ದೇಶದಲ್ಲಿ 1 ಕೋಟಿ ರೈತರು ಕೃಷಿಯನ್ನು ಬಿಟ್ಟು ಬೇರೆ ಕೆಲಸಗಳಿಗೆ ತೊಡಗಿಕೊಂಡಿರುವ ಮಾಹಿತಿ ಇದೆ. ಇದರಿಂದಾಗಿ 10 ಕೋಟಿ ಜನರಿಗೆ ಬೇಕಾಗುವ ಆಹಾರದ ಕೊರತೆ ಉಂಟಾಗುತ್ತಿದೆ. ದೇಶದಲ್ಲಿ ಇನ್ನು 20 ವರ್ಷಗಳಲ್ಲಿ ಯುವಜನತೆಯ ಪ್ರಮಾಣ ದ್ವಿಗುಣಗೊಳ್ಳಲಿದೆ. ಆಗ ಅವರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈಗಿನಿಂದಲೇ ಕೃಷಿಯತ್ತ ಒಲವು ತೋರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬನವಾಸಿಯ ಹನುಂತಪ್ಪ ಮಂಡ್ಲೂರ ಅವರಿಗೆ ಕೃಷಿ ಭೀಮ ಪ್ರಶಸ್ತಿಯನ್ನು ನೀಡಿ ಗೌರವಿಸುವುದರ ಜತೆಗೆ, ಉತ್ತಮ ಸಾಧನೆ ಮಾಡಿದ ಕೃಷಿಕರನ್ನು ಸನ್ಮಾನಿಸಲಾಯಿತು. ರೈತ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ ಗಾಂವ್ಕರ, ಪತ್ರಕರ್ತ ವಿಠ್ಠಲದಾಸ ಕಾಮತ, ಮಾಜಿ ಶಾಸಕ ಗಂಗಾಧರ ಭಟ್, ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಇದ್ದರು.












Click it and Unblock the Notifications