ರೈತರು, ಹೈನುಗಾರರಿಗೆ ಕೋಚಿಮುಲ್ ನಿಂದ ಬಂತು ಭರ್ಜರಿ ಆಫರ್
ಕೋಲಾರ, ಫೆಬ್ರವರಿ 17: ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಎರಡನೇ ಜಿಲ್ಲೆ ಎಂದರೆ ಕೋಲಾರ. ಆದರೆ ಇತ್ತೀಚೆಗೆ ಅಕ್ಕಪಕ್ಕದ ರಾಜ್ಯಗಳು ರೈತರಿಗೆ ನೀಡಿದ ಹಲವು ಯೋಜನೆಗಳಿಂದ ಹಾಗೂ ಖಾಸಗಿ ಡೈರಿಗಳ ಪೈಪೋಟಿಯಿಂದ ಇಲ್ಲಿನ ಹಾಲು ಒಕ್ಕೂಟಕ್ಕೆ ಹಿಂಜರಿತವಾಗಿದ್ದಂತೂ ಸುಳ್ಳಲ್ಲ. ಇದರಿಂದ ಹೊರ ಬರಲು ಇದೀಗ ಹಾಲು ಒಕ್ಕೂಟ ರೈತರಿಗೆ ಕೊಡುಗೆಗಳ ಮಳೆ ಸುರಿಸುತ್ತಿದೆ. ಈ ಮೂಲಕ ರೈತರನ್ನು ಒಕ್ಕೂಟದತ್ತ ಆಕರ್ಷಿಸಲು ಪ್ರಯತ್ನಿಸುತ್ತಿದೆ.
ಕಳೆದ ನಾಲ್ಕು ತಿಂಗಳಿಂದ ದಾಖಲೆ ಮಟ್ಟದಲ್ಲಿ ಹಾಲು ಸಂಗ್ರಹ ಕಡಿಮೆಯಾಗಿರುವುದು ಒಕ್ಕೂಟವನ್ನು ಚಿಂತೆಗೆ ದೂಡಿದೆ. ಹೀಗಾಗೇ ಹಲವು ಕೊಡುಗೆಗಳನ್ನು ನೀಡಿದೆ. ಈ ಕೊಡುಗೆಗಳಿಂದ ರೈತರೂ ಇದರತ್ತ ಮತ್ತೆ ಮುಖ ಮಾಡುವ ನಿರೀಕ್ಷೆಯಿದೆ.

ಮೊದಲ ಬಾರಿಗೆ ಕಡಿಮೆ ಹಾಲು ಸಂಗ್ರಹ
ಕೋಲಾರ ಹಾಲು ಒಕ್ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಮಟ್ಟದಲ್ಲಿ ಹಾಲು ಸಂಗ್ರಹ ಕಡಿಮೆಯಾಗಿದೆ. ಸರಾಸರಿ ಒಂದು ತಿಂಗಳಲ್ಲೇ 2 ಲಕ್ಷ ಲೀಟರ್ ಹಾಲು ಸಂಗ್ರಹ ಕಡಿಮೆಯಾಗಿ ಕೋಲಾರ ಹಾಲು ಒಕ್ಕೂಟವನ್ನು ಚಿಂತೆಗೀಡು ಮಾಡಿದೆ. ಇದರಿಂದ ಒಕ್ಕೂಟಕ್ಕೆ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಹಾಲಿನ ದರ ಹೆಚ್ಚಿಸುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹಾಲು ಮಾರಾಟ ದರ ಹೆಚ್ಚಿಸಿತು. ಇದಾದ ಮೇಲೆ ಕೋಚಿಮುಲ್ ರೈತರನ್ನು ತಮ್ಮತ್ತ ಸೆಳೆಯಲು ಈಗ ಗೋಪಾಲಕನಿಗೆ ಬಂಪರ್ ಆಫರ್ಗಳ ಸುರಿಮಳೆ ಸುರಿಸಿದೆ.

ಹೈನೋದ್ಯಮಕ್ಕೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ
ಕೋಚಿಮುಲ್ ಸದ್ಯ ಘೋಷಣೆ ಮಾಡಿರುವ ಕೆಲವು ಕೊಡುಗೆಗಳು ಇಲ್ಲಿವೆ. ಮೊದಲನೆಯದಾಗಿ ರೈತರಿಗೆ ಲೀಟರ್ ಹಾಲಿಗೆ ಕೋಚಿಮುಲ್ನಿಂದ ಪ್ರತ್ಯೇಕವಾಗಿ ಎರಡು ರೂಪಾಯಿ ಹೆಚ್ಚಿಗೆ ನೀಡಲು ನಿರ್ಧರಿಸಲಾಗಿದೆ. ಹೊಸದಾಗಿ ಹೈನೋದ್ಯಮ ಆರಂಭಿಸುವವರಿಗೆ ಅಥವಾ ರೈತರು ಹಸುಗಳನ್ನು ಖರೀದಿ ಮಾಡಲು ಡಿಸಿಸಿ ಬ್ಯಾಂಕ್ ಮುಖೇನ ಶೂನ್ಯ ಬಡ್ಡಿದರದಲ್ಲಿ 75,000 ದಿಂದ 1 ಲಕ್ಷವರೆಗೆ ಯಾವುದೇ ಆಧಾರವಿಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.

ಮೇವು ಬೆಳೆಯಲು ಸಹಾಯಧನ
ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಹಸುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮಾಡಲು ಮೇವು ಬೆಳೆಯಲು ಉಚಿತವಾಗಿ ರೈತರಿಗೆ ಮಿನಿ ಕಿಟ್ ವಿತರಣೆ ಮಾಡಲು ಚಿಂತನೆ ನಡೆಸಿದೆ. ಮೇವಿನ ಬೆಳೆಯನ್ನು ಬೆಳೆಯಲು ಎಕರೆಗೆ 3000 ರೂಪಾಯಿ ಸಹಾಯಧನವನ್ನೂ ನೀಡಲು ಯೋಜಿಸಲಾಗಿದೆ. ಹಸುಗಳಿಗೆ ಹಾಕುವ ಪಶು ಆಹಾರ ದರದ ಮೇಲೆ ಟನ್ಗೆ 1000 ರೂಪಾಯಿ ಕಡಿಮೆ ಮಾಡುವ ಯೋಜನೆಯೂ ಇದೆ. ಹೀಗೆ ಹಲವು ಯೋಜನೆಗಳನ್ನು ರೈತರಿಗೆ ಘೋಷಣೆ ಮಾಡುವ ಮೂಲಕ ಕೋಚಿಮುಲ್ ಮತ್ತೆ ರೈತರನ್ನು ಹೈನೋದ್ಯಮದತ್ತ ಸೆಳೆದು ಕೋಚಿಮುಲ್ ಹಾಲು ಸಂಗ್ರಹ ಹೆಚ್ಚಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡಿದೆ.

ಆಂಧ್ರ, ತಮಿಳುನಾಡು ಖಾಸಗಿ ಡೈರಿಗಳಿಗೆ ಮೂಗುದಾರ?
ಖಾಸಗಿ ಡೈರಿಗಳಿಗೆ ಪೈಪೋಟಿ ನೀಡುವಲ್ಲಿ ವಿಫಲವಾಗಿರುವ ಕೋಚಿಮುಲ್ ಆಂಧ್ರ, ತಮಿಳುನಾಡಿನ ಖಾಸಗಿ ಡೈರಿಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಈಗಾಗಲೇ ಖಾಸಗಿ ಡೈರಿಯವರು ಮಾರಾಟ ಮಾಡುವ ಹಾಲಿನಲ್ಲಿ ಗುಣಮಟ್ಟವಿಲ್ಲ, ಖಾಸಗಿ ಡೈರಿಗಳು ಬೇರೆ ಬೇರೆ ಅಪಾಯಕಾರಿ ವಸ್ತುಗಳನ್ನು ಮಿಶ್ರಣ ಮಾಡುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹಾಲನ್ನು ಪರಿಶೀಲಿಸಿ ಅದರ ಮೇಲೆ ನಿರ್ಬಂಧ ಹೇರಲು ಆಹಾರ ಸುರಕ್ಷತಾ ಕಾಯ್ದೆಯಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಜಿಲ್ಲೆಯ ಎಲ್ಲಾ ಹಾಲಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ತಿಳಿಸಿದ್ದಾರೆ. ಜೊತೆಗೆ ಇಂಥ ಆರೋಪಗಳನ್ನು ಹೊಂದಿರುವ ಖಾಸಗಿ ಹಾಲಿನ ಡೈರಿಗಳ ಮೇಲೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.












Click it and Unblock the Notifications