ರೇಷ್ಮೆ ಇಲಾಖೆಯ ಕೆಲವು ಯೋಜನೆಗಳು; ರೈತರೇ ಉಪಯೋಗ ಪಡೆದುಕೊಳ್ಳಿ
ಕೊಪ್ಪಳ, ಸೆಪ್ಟೆಂಬರ್ 28; ರೈತರಿಗಾಗಿ ರೇಷ್ಮೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಕೊಪ್ಪಳ ರೇಷ್ಮೆ ಉಪ ನಿದೇರ್ಶಕರು ಮನವಿ ಮಾಡಿದ್ದಾರೆ.
ರೇಷ್ಮೆ ಕೃಷಿಯು ಗುಡಿ ಮತ್ತು ಕೈಗಾರಿಕೆಯನ್ನು ಹೊಂದಿದ್ದು, ಗ್ರಾಮೀಣ ಜನರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯು ಅಭಿವೃದ್ಧಿ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.

ರೇಷ್ಮೆ ಇಲಾಖೆಯ ಸಿಬ್ಬಂದಿಯವರು ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ನೀರಾವರಿ ರೈತರನ್ನು ಸಂಪರ್ಕಿಸಿ ರೇಷ್ಮೆ ಕೃಷಿಯಿಂದಾಗುವ ಅನುಕೂಲಗಳ ಕುರಿತು ಹಾಗೂ ಸಿಗುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಿ ರೇಷ್ಮೆ ಕೃಷಿಯ ವಿಸ್ತರಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರೇಷ್ಮೆ ಇಲಾಖೆ ಕಾರ್ಯಕ್ರಮಗಳು; ಜಿಲ್ಲಾ ಪಂಚಾಯತ್ ಕಾರ್ಯಕ್ರಮ. ಹಿಪ್ಪುನೇರಳೆ ನಾಟಿ ಮಾಡುವ ರೇಷ್ಮೆ ಕೃಷಿಕರಿಗೆ ಸಹಾಯಧನ ನೀಡುವ ಕಾರ್ಯಕ್ರಮದಡಿ ಯಶಸ್ವಿ ಗೂಡು ಉತ್ಪಾದನೆಗೆ ಹಿಪ್ಪುನೇರಳೆ ಗುಣಮಟ್ಟ ಮುಖ್ಯವಾದ ಅಂಶ. ಈ ನಿಟ್ಟಿನಲ್ಲಿ ಹಿಪ್ಪುನೇರಳೆ ತೋಟ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ನೀರಾವರಿ ಸೌಲಭ್ಯವಿರುವ ರೈತರನ್ನು, ಕೃಷಿಕರನ್ನು ಆಯ್ಕೆ ಮಾಡಿ ಹಿಪ್ಪುನೇರಳೆ ನಾಟಿ ಮಾಡುವ ತೋಟ ವಿಸ್ತರಿಸುವ, ಸಾಂಪ್ರದಾಯಕ ಹಿಪ್ಪುನೇರಳೆ ತಳಿ ತೆಗೆದು ಹೆಚ್ಚಿನ ಇಳುವರಿ ನೀಡುವ ಹೊಸ ತಳಿಗೆ ಬದಲಾಯಿಸುವ ರೇಷ್ಮೆ ಕೃಷಿಕರಿಗೆ ಸಹಾಯಧನ ಒದಗಿಸಲಾಗುವುದು.
ಒಬ್ಬ ಫಲಾನುಭವಿ ಗರಿಷ್ಠ 2 ಹೆಕ್ಟೇರವರೆಗೆ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ 1 ಎಕರೆ ಹೊಸ ಹಿಪ್ಪುನೇರಳೆ ನಾಟಿಗಾಗಿ ಸಾಮಾನ್ಯ ವರ್ಗದ ರೇಷ್ಮೆ ಬೆಳೆಗಾರರಿಗೆ 37,500 ರೂ., ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ರೇಷ್ಮೆ ಬೆಳೆಗಾರರಿಗೆ 45,000 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ರೇಷ್ಮೆ ಹುಳು ಸೋಂಕು ನಿವಾರಕ ಔಷಧ. ಹಾಲಿ ರೇಷ್ಮೆ ಬೆಳೆಗಾರರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಸೋಂಕು ನಿವಾರಕ, ಹಾಸಿಗೆ ಸೋಂಕು ನಿವಾರಕ ಹಾಗೂ ಸಸ್ಯ ಸಂವರ್ಧಕಗಳನ್ನು ಉಚಿತವಾಗಿ ನೀಡಲಾಗುವುದು.
ಉದ್ಯೋಗ ಖಾತ್ರಿ ಯೋಜನೆ. ರೇಷ್ಮೆ ಇಲಾಖೆಯಡಿಯಲ್ಲಿ ಹೊಸದಾಗಿ ಹಿಪ್ಪುನೇರಳೆ ನಾಟಿ, ಹಿಪ್ಪುನೇರಳೆ ನರ್ಸರಿ, ಹಿಪ್ಪುನೇರಳೆ ಮರಗಡ್ಡೆ ಕಾರ್ಯಕ್ರಮಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಸಕ್ತ ನೀರಾವರಿ ಹೊಂದಿರುವ ರೈತರು ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ತಾಲೂಕು ಪಂಚಾಯತ್ ಕಾರ್ಯಕ್ರಮ: ತಾಲೂಕು ಪಂಚಾಯತ್ ಉತ್ಪಾದನೆ, ಉತ್ಪಾದಕತೆ ಆಧಾರಿತ ಕಾರ್ಯಕ್ರಮ ಯೋಜನೆಯಡಿಯಲ್ಲಿ ಮಾರ್ಗಸೂಚಿಗಳನ್ವಯ ರೈತರಿಗೆ ರೇಷ್ಮೆ ಕೃಷಿ ಕೈಗೊಳ್ಳಲು ರೇಷ್ಮೆ ಕೃಷಿ ವಿಚಾರ ಸಂಕಿರಣಗಳನ್ನು ಹಾಗೂ ವಸ್ತು ಪ್ರದರ್ಶನಗಳನ್ನು ಪ್ರಚಾರ ಸಾಹಿತ್ಯಕ್ಕಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅರ್ಹ ಫಲಾನುಭವಿಗಳು ರೇಷ್ಮೆ ಇಲಾಖೆಯ ಕಾರ್ಯಕ್ರಮಗಳ ಪ್ರಯೋಜನ ಪಡೆಯಬಹುದಾಗಿದೆ.












Click it and Unblock the Notifications