ಜುಲೈ 21ರಂದು ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಘಟಿಕೋತ್ಸವ
ಶಿವಮೊಗ್ಗ, ಜುಲೈ 20; ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಜುಲೈ 21ರಂದು ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ ಘಟಿಕೋತ್ಸವದ ಕುರಿತು ಮಾಹಿತಿ ನೀಡಿದರು. ಜುಲೈ 21ರ ಶುಕ್ರವಾರ ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ ಶಿವಮೊಗ್ಗ ಇಲ್ಲಿ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ.

ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ ನಡೆಯಲಿದೆ. ಕೃಷಿ ಸಚಿವ ಹಾಗೂ ವಿವಿ ಸಹ-ಕುಲಾಧಿಪತಿ ಎನ್. ಚಲುವರಾಯಸ್ವಾಮಿ ಅವರು ಸಹ ಪಾಲ್ಗೊಳ್ಳಲಿದ್ದಾರೆ.
37 ಚಿನ್ನದ ಪದಕ ಪ್ರದಾನ : 8ನೇ ಘಟಿಕೋತ್ಸವದಲ್ಲಿ 409 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, 101 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳು ಪಿಹೆಚ್ಡಿ ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ 8 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಇವರಿಗೆ ಒಟ್ಟು 15 ಪದಕಗಳನ್ನು ನೀಡಲಾಗುತ್ತದೆ. 14 ಎಂಎಸ್ಸಿ ವಿದ್ಯಾರ್ಥಿಗಳು, 7 ಪಿಹೆಚ್ಡಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಒಟ್ಟು 37 ಚಿನ್ನದ ಪದಗಳನ್ನು ನೀಡಲಾಗುತ್ತದೆ.
ಕುಲಪತಿ ಡಾ. ಆರ್. ಸಿ. ಜಗದೀಶ ಮಾತನಾಡಿ, "ವಿಶ್ವವಿದ್ಯಾಲಯ ಈ ವರ್ಷ ಹಲವಾರು ವಿಶಿಷ್ಟ ಸಾಧನೆಗಳಿಗೆ ಸಾಕ್ಷಿಯಾಗಿದ್ದು, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆಯಡಿ ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲೇ ಮೊದಲ ಬಾರಿಗೆ ಐ.ಓ.ಟಿ ಸ್ಮಾರ್ಟ್ ಕೃಷಿ, ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾಯೋಗಿಕ ಕಲಿಕೆ ಪ್ರಾರಂಭಿಸಿದ್ದು 20 ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣಗೊಳಿಸಿದೆ" ಎಂದರು.
"ಕೃಷಿಯಲ್ಲಿ ಗಣಕ, ಡ್ರೋನ್ ಹಾಗೂ ರೋಬೋಟ್ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ ಮೊದಲ ಬಾರಿಗೆ ಪ್ರೊಗ್ರಾಮಿಂಗ್ ಫಾರ್ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯವನ್ನು ಅಳವಡಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಪದವಿ ಹಂತದಲ್ಲಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ, ತರಬೇತಿಗೊಳಿಸುವ ವಿಶಿಷ್ಟವಾದ, ಅಂತರರಾಷ್ಟ್ರೀಯ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇದರಡಿ 4 ವಿದ್ಯಾರ್ಥಿನಿಯರು ಅಮೆರಿಕಾದ ಕನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿದ್ದಾರೆ. 6 ವಿದ್ಯಾರ್ಥಿಗಳು ಜರ್ಮನಿಯ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಹೋಗಿ ಬಂದಿರುವುದು ವಿಶೇಷ" ಎಂದು ವಿವರಣೆ ನೀಡಿದರು.
ಅನುದಾನದ ವಿವರಗಳು; ಪ್ರಸಕ್ತ ವರ್ಷದಲ್ಲಿ 44 ಯೋಜನೆಗಳಿಗೆ ಇತರ ಧನಸಹಾಯ, ಸಂಸ್ಥೆಯಿಂದ ಸುಮಾರು ರೂ. 1.19 ಕೋಟಿ ಅನುದಾನ ಬಂದಿರುತ್ತದೆ. ಆರ್ಕೆವಿವೈ ಅಡಿ 21 ಸಂಶೋಧನಾ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಸರರ್ಕಾರದ ಕಪೆಕ್ನಿಂದ ವಿಶ್ವವಿದ್ಯಾಲಯಕ್ಕೆ 'ಒಂದು ಜಿಲ್ಲೆ ಒಂದು ಉತ್ಪನ್ನ' ದಡಿಯಲ್ಲಿ ಶಿವಮೊಗ್ಗಕ್ಕೆ ಅನಾನಸ್, ಮೂಡಿಗೆರೆಗೆ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿಗೆ ನೆಲಗಡಲೆ ಬೆಳೆಗಳ ಸಂಶೋಧನೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ರೂ. 5.68 ಕೋಟಿ ನೀಡಲಾಗಿದೆ.
ನೈಸರ್ಗಿಕ ಕೃಷಿ ಯೋಜನೆಯನ್ನು ಅಭಿವೃದ್ಧಿಗೊಳಿಸಲು ರೂ. 252 ಕೋಟಿ ಅನುದಾನ ದೊರೆತಿದೆ. ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವೈಜ್ಞಾನಿಕ -ಸಂಪನ್ಮೂಲ ಮತ್ತು ಜಲ ಸಂಪನ್ಮೂಲ ಸಮೀಕ್ಷೆಗಾಗಿ ಹಾಗೂ ಅವುಗಳ ಪುನಶ್ವೇತನಕ್ಕಾಗಿ ರೂ.3.68 ಕೋಟಿ ಅನುದಾನವು ವಿಶ್ವವಿದ್ಯಾಲಯಕ್ಕೆ ದೊರಕಿರುತ್ತದೆ.
ಪ್ರಸ್ತುತ ಅವಧಿಯಲ್ಲಿ 5 ವಿಸ್ತರಣಾ ಸಿಬ್ಬಂದಿಗೆ ತರಬೇತಿ, 21 ಪ್ರಾಯೋಜಿತ ತರಬೇತಿ ಕಾರ್ಯಕ್ರಮ, 19 ವೃತ್ತಿ ತರಬೇತಿ ಕಾರ್ಯಕ್ರಮ ಹಾಗೂ 18 ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳು ಸೇರಿ ಒಟ್ಟು 2270 ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ. 5 ಸಾವಿರ, ಮಣ್ಣು ಮಾದರಿ ಹಾಗೂ 1700 ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.












Click it and Unblock the Notifications