ಎಫ್ಆರ್ಪಿ ದರ ಹೆಚ್ಚಿಸಲು ಒತ್ತಾಯ: ನ.22ರಿಂದ ಸಿಎಂ ಮನೆ ಮುಂದೆ ಕಬ್ಬು ಬೆಳೆಗಾರರ ಧರಣಿ
ಬೆಂಗಳೂರು, ನವೆಂಬರ್ 21: ಹಲವು ಸಭೆಗಳು, ಮನವಿ ಪತ್ರ ಸಲ್ಲಿಕೆ ಬಳಿಕ ಇದೀಗ ರೈತರು ಮಂಗಳವಾರ ನವೆಂಬರ್ 22ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಕಬ್ಬು ಬೆಳೆಗೆ ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಯದಾಯಕ ಬೆಲೆ) ದರ ಹೆಚ್ಚಿಸುವಂತೆ ಕಬ್ಬು ಬೆಳೆಗಾರರು ನಾಳೆ ನವೆಂಬರ್ 22ರಿಂದ ಮುಖ್ಯಮಂತ್ರಿ ಗೃಹ ಕಚೇರಿ ಮುಂದೆ ಅನಿರ್ಧಿಷ್ಟಾವಧಿಗೆ ಅಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಕಬ್ಬು ಬೆಳಗಾರರ ಸಂಘದ ಪ್ರಕಟಣೆಯಲ್ಲಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರು ಕಬ್ಬಿಗೆ ಎಫ್ಆರ್ಪಿ ದರ ಏರಿಕೆ ಮಾಡುವಂತೆ ನಿರಂತರವಾಗಿ ಸರ್ಕಾರವನ್ನು ಕೇಳುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ವಂಚನೆಗೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ಮಾಡಿಕೊಂಡು ಆಗ್ರಹಿಸಲಾಗುತ್ತಲೇ ಬಂದಿದ್ದೇವೆ. ಆದರೆ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ. ವಿಳಂಬ ನೀತಿ ಅನುಸರಿಸಿರುವ ಸರ್ಕಾರ ಬೆಳೆಗಾರರಿಗೆ ಮೂಗಿದೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಹೀಗಾಗಿ ನಮಗೆ ನ್ಯಾಯ ಸಿಗುವ ತನಕ ಹೋರಾಟ ಕೈಬಿಡುವುದಿಲ್ಲ ಎಂದರು.

ನಾಲ್ಕೈದು ತಿಂಗಳ ರೈತರ ಪ್ರತಿಭಟನೆಗೆ ಸ್ಪಂದಿಸಿಲ್ಲ
ಕಬ್ಬಿಗೆ ಎಆರ್ಪಿ ದರ ಹೆಚ್ಚಳ ಸೇರಿದಂತೆ ಬೆಳೆಗಾರರಿಗೆ ಆಗುತ್ತಿರುವ ಅನಾನುಕೂಲ, ನಷ್ಟ ಕುರಿತು ನಾಲ್ಕೈದು ಬಾರಿ ಸಭೆ ನಡೆಸಲಾಗಿದೆ. ತಜ್ಞರ ಸಮಿತಿ ರಚಿಸಿ ಅವರಿಂದ ನವೆಂಬರ್ 20ರ ಒಳಗೆ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ರಾಜ್ಯ ಸಕ್ಕರೆ ಸಚಿವ ಶಂಕರ ಬಿ.ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದ್ದರು. ಆ ಭರವಸೆ ಹುಸಿಯಾಗಿದೆ.
ಕಬ್ಬು ಬೆಳೆಗಾರರು ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಪ್ರತಿಭಟಿಸುತ್ತಿದ್ದಾರೆ. ಇತ್ತು ಮುಖ್ಯಮಂತ್ರಿ ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದ್ದಾರೆ. ರೈತರ ಬದುಕಿನ ಜೊತೆ ಸರ್ಕಾರದ ಚೆಲ್ಲಾಟ ಸರಿಯಲ್ಲ. ಆದ್ದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ಸರ್ಕಾರ 30 ಲಕ್ಷ ರೈತರ ಹಿತ ಕಾಪಾಡಬೇಕು
ಕರ್ನಾಟಕದಲ್ಲಿ 30 ಲಕ್ಷ ಕಬ್ಬು ಬೆಳೆಗಾರರಿದ್ದು, ಅವರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಳಗಾವಿ, ದಾವಣಗೆರೆ, ಧಾರವಾಡ, ಹಡಗಲಿ, ಕಲಬುರಗಿ, ಬೀದರ್, ಕೊಪ್ಪಳ, ಬಿಜಾಪುರ, ಬಾಗಲಕೋಟೆ ,ಗದಗ, ಉತ್ತರ ಕನ್ನಡ, ಮೈಸೂರು, ಚಾಮರಾಜನಗರ, ಹಾಸನ, ಚನ್ನರಾಯಪಟ್ಟಣ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಹೀಗಿದ್ದರೂ ಸಬೂಬು ಹೇಳುತ್ತಿರುವ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ಕುರುಬೂರು ಶಾಂತಕುಮಾರ್ ಕಿಡಿ ಕಾರಿದರು.

ಕಬ್ಬು ಉತ್ಪಾದನೆ ಅಧಿಕ, ಸರಿಯಾದ ಬೆಲೆ ಸಿಕ್ಕಿಲ್ಲ
ರೈತರು ಕಬ್ಬು ಬೆಳೆಯಲು ಶೇ. 20ರಷ್ಟು ಹೆಚ್ಚು ವೆಚ್ಚ ಭರಿಸಬೇಕಿದೆ. ರಸಗೊಬ್ಬರ, ಡೀಸೆಲ್, ಬೀಜ, ಕೂಲಿ ಸಾಗಾಣಿಕೆ ದರ ಸಾಮಾನ್ಯವಾಗಿಲ್ಲ. ಅಲ್ಲದೇ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರತಿ ಟನ್ಗೆ ಸರಾಸರಿ 50 ರೂ. ಕಡಿಮೆ ಸಿಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕಬ್ಬು ಬೆಳೆಯಲ್ಲಿ ಮುಂದಿರುವ ಕರ್ನಾಟಕಕ್ಕಿಂತ ಉತ್ಪಾದನೆ ಕಡಿಮೆ ಪಂಜಾಬ್ನಲ್ಲಿ ಪ್ರತಿ ಟನ್ ಕಬ್ಬಿಗೆ 3,800 ಉತ್ತರ ಪ್ರದೇಶದಲ್ಲಿ ಟನ್ ಕಬ್ಬಿಗೆ 3,500 ಗುಜರಾತ್ ನಲ್ಲಿ, 4,400 ದರವನ್ನು ರಾಜ್ಯ ಸರ್ಕಾರಗಳೇ ನಿಗದಿ ಮಾಡಿವೆ.

ಕಿ.ಲೋ.ಆಧಾರದ ದರ ಕಡಿತಗೊಳಿಸಿ
ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ಖರ್ಚನ್ನು ಸಕ್ಕರೆ ಕಾರ್ಖಾನೆಗಳೇ ಮಾಡುತ್ತಿವೆ. ಇದೆಲ್ಲ ಪರಿಗಣಿಸಿ ಸರ್ಕಾರ ಎಫ್ಆರ್ಪಿ ಬೆಲೆಯನ್ನ ಪ್ರತಿ ಟನ್ಗೆ ಕನಿಷ್ಠ 3,500 ರೂ. ಹೆಚ್ಚಿಸಬೇಕು. ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಲೂಟಿ ಮಾಡುತ್ತಿದ್ದಾರೆ. ಕಬ್ಬು ಕಟಾವು 16 ತಿಂಗಳಾಗುತ್ತಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್
ಆಧಾರದ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟ ಸಂಘ
ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ, ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಶೇ.15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು.
ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಡಿತಗೊಳಿಸಬೇಕು, ಸಕ್ಕರೆ ಕಾರ್ಖಾನೆ ಫೀಲ್ಡ್ ಮೆನ್ಗಳು ಬಿಲ್ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು.
ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಿ, ಒಪ್ಪಂದ ಪತ್ರ ರೈತರಿಗೂ ನೀಡಬೇಕು. ಅತಿವೃಷ್ಟಿ ಮಳೆಹಾನಿ ಕಾರಣ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ಇಳುವರಿ ಕಡಿಮೆಯಾಗಿದೆ. ಕಡಿಮೆಯಾಗುವ ಕಾರಣ ಕೂಡಲೇ ಭತ್ತ ಕಟಾವು ಆರಂಭಕೆ ಮುನ್ನ ಖರೀದಿ ಕೇಂದ್ರ ತೆರೆಯಬೇಕು.
ವಿದ್ಯುತ್ ಖಾಸಗಿಕರಣ ಕೈಬಿಡಬೇಕು, ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದು ಬೇಡ, ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿಯನ್ನು ಪರಿಗಣಿಸಿ ಸಾಲ ನೀಡುವುದು ನಿಲ್ಲಬೇಕು. ಸರ್ಕಾರ ನೀಡುವ ಪರಿಹಾರಧನ ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗಳಿಗೆ ಜಮಾ ಮಾಡಬಾರದು, ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications