ಕಬ್ಬಿಗೆ ಬೆಂಬಲ ಬೆಲೆ ಸಿಗಲ್ಲ, ಬಾಕಿ ಮೊತ್ತ ದಕ್ಕಲ್ಲ, ರೈತರಿಗೆ ಕಹಿ, ಕಹಿ
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು, ಸಬ್ಸಿಡಿ ನೀಡುವುದು ಅಥವಾ ಉತ್ಪನ್ನಗಳನ್ನು ಖರೀದಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಭಾರತದ ಆಹಾರ ನಿಗಮದ ನಿಯಮಕ್ಕನುಸಾರ ಸರ್ಕಾರಗಳು ರೈತರಿಗೆ ಕನಿಷ್ಠ ಬೆಂಬಲ ನೀಡಿ ಪ್ರೋತ್ಸಾಹಿಸಬೇಕಾಗುತ್ತದೆ. ಆದರೆ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ
ಇದು ನೆರೆ ರಾಜ್ಯಗಳ ಬೆಂಬಲ ಬೆಲೆಗೆ ಹೋಲಿಸಿದರೆ ತುಂಬಾ ಕಡಿಮೆ, ಟನ್ ಕಬ್ಬು ಬೆಳೆಯಲು ಹೂಡುವ ಬಂಡವಾಳಕ್ಕೂ ಕಬ್ಬಿಗೆ ನಿಗದಿ ಮಾಡಿರುವ ದರಕ್ಕೂ ಅಂತರವಿದೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಅಧಿಕವಾಗಲಿದೆ ಎಂದು ರೈತರ ವಾದ. ನೆರೆ ಮಹಾರಾಷ್ಟ್ರರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರು ನೀಡಲಾಗುತ್ತಿದೆ.ಇಳುವರಿ ಆಧಾರದಲ್ಲಿ ಪಂಜಾಬ್ ನಲ್ಲಿ 3500 ರೂ., ಹರ್ಯಾಣದಲ್ಲಿ 3000 ರೂ. ವನ್ನು ನಿಗದಿ ಮಾಡಲಾಗಿದೆ.
ಈಗ ಸಕ್ಕರೆ ಕಾರ್ಖಾನೆಯಿಂದ ಪಾವತಿಯಾಗಬೇಕಿರುವ ಬಾಕಿ ಮೊತ್ತ, ಸಾಲ ಮನ್ನಾ, ಬೆಂಬಲ ಬೆಲೆ ಘೋಷಣೆ ಹೀಗೆ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ 2,500 ರು ಬೆಂಬಲ ಬೆಲೆ ಘೋಷಿಸಲಾಗಿತ್ತು. ಈಗ 3,000 ರು ಪ್ರತಿ ಟನ್ನಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಇದಕ್ಕೂ ಮುನ್ನವೇ ರೈತರ ಸಮಸ್ಯೆಗೆ ಪರಿಹಾರ ನೀಡುವುದಾಗಿ ಎಚ್ ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ವ್ಯತ್ಯಾಸ
ದಕ್ಷಿಣ ಕರ್ನಾಟಕ ಭಾಗದ ರೈತರು ಬೆಳೆಯುವ ಟನ್ ಕಬ್ಬಿಗೆ 2600 ರು ಹಾಗೂ ಉತ್ತರ ಕರ್ನಾಟಕ ಭಾಗದ ರೈತರು ಬೆಳೆಯುವ ಕಬ್ಬಿಗೆ 2500 ರು ದರವನ್ನು ಸಿದ್ದರಾಮಯ್ಯ ಸರ್ಕಾರ ಘೋಷಿಸಿತ್ತು. ದಕ್ಷಿಣ ಕರ್ನಾಟಕ ಭಾಗದಲ್ಲಿ 16 ಸಕ್ಕರೆ ಕಾರ್ಖಾನೆಗಳಿದ್ದು, ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ. ಆದರೆ, ಉತ್ತರ ಕರ್ನಾಟಕ ಭಾಗದ ರೈತರು ಬೆಳೆಯುವ ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಆಯಾ ಕಾರ್ಖಾನೆಗಳು ಭರಿಸಲಿವೆ. ಈ ಭಾಗದಲ್ಲಿ 45 ಸಕ್ಕರೆ ಕಾರ್ಖಾನೆಗಳಿವೆ

ಆಯೋಗ, ಸಮಿತಿ ವರದಿಗೆ ಬೆಲೆಯೇ ಇಲ್ಲ
ಕೇಂದ್ರ ಸರ್ಕಾರ ರಚಿಸಿದ್ದ ರಂಗರಾಜನ್ ಸಮಿತಿಯ ವರದಿ ಪ್ರಕಾರ ಶೇ 9.5ರಷ್ಟು ಇಳುವರಿಗೆ 2,445 ರು ದರ ನಿಗದಿ ಮಾಡಬೇಕಾಗುತ್ತದೆ. ಅದೇ ರೀತಿ ಶೇ 1ರಷ್ಟು ಹೆಚ್ಚುವರಿ ಇಳುವರಿಗೆ 220 ರು ರೂಪಾಯಿ ಹೆಚ್ಚಿಗೆ ನೀಡಬೇಕಾಗುತ್ತದೆ. ಶೇ 11.5ರಷ್ಟು ಇಳುವರಿ ಬಂದರೆ ಟನ್ ಕಬ್ಬಿಗೆ 2894 ರು ನೀಡಬೇಕಾಗುತ್ತದೆ. ಆದರೆ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ.

ಬೆಂಬಲ ಬೆಲೆ ವ್ಯತ್ಯಾಸ ಅನಿವಾರ್ಯ
ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ನುರಿಸಿದ ಕಬ್ಬಿನ ಇಳುವರಿ ಜಾಸ್ತಿ ಇರುವುದರಿಂದ ಏಕರೂಪ ಬೆಂಬಲ ನೀಡುವುದು ಸಮಂಜಸವಲ್ಲ. ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಲು ಬೆಳೆ ವಿಮೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳು ಭರಿಸಬೇಕು. ಕಾಕಂಬಿಯಂತಹ ಉಪಉತ್ಪನ್ನಗಳ ಮೂಲಕ ಗಳಿಸುವ ಆದಾಯವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಕೃಷಿ ವೆಚ್ಚ ಮತ್ತು ಬೆಲೆ ನಿಗದಿ ಆಯೋಗ ತಿಳಿಸಿದೆ.

ಪ್ರಭಾವಿಗಳ ಕೈಯಲ್ಲಿ ಕಾರ್ಖಾನೆ
ಉತ್ತರ ಕರ್ನಾಟಕದಲ್ಲಿ ಜಾರಕಿಹೊಳಿ ಸೋದರರು, ಪ್ರಕಾಶ್ ಹುಕ್ಕೇರಿ, ಎಂ.ಬಿ.ಪಾಟೀಲ್, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಸಿದ್ದು ನ್ಯಾಮಗೌಡ ರಂಥ ಪ್ರಭಾವಶಾಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸರಕಾರವನ್ನು ನಿಯಂತ್ರಿಸುತ್ತಾ ಬಂದಿದ್ದಾರೆ. ಈ ಬಾರಿ ಕೂಡ ತಾವು ಜನರ ಪ್ರತಿನಿಧಿಗಳೆಂಬುದನ್ನು ಮರೆತು ತಮ್ಮ ಕಾರ್ಖಾನೆಗಳ ಹಿತಾಸಕ್ತಿಗಾಗಿ ಅವರು ಪಟ್ಟು ಹಿಡಿದ ಪರಿಣಾಮವಾಗಿ ರೈತರ ಬೇಡಿಕೆಗಳನ್ನು ಈಡೇರಿಸಲು ಸರಕಾರದಿಂದ ಸಾಧ್ಯವಾಗಲಿಲ್ಲ

ಬೆಲೆ ನಿಗದಿಗೆ ಏನು ಮಾನದಂಡ
ಮಹಾರಾಷ್ಟ್ರದಲ್ಲಿ ವಿವಿಧ ಬೆಳೆಗಳ ಫಸಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ನಿರ್ಧರಿಸುವಾಗ ನಿರ್ಧರಿಸುವುದು ಕೃಷಿ ವಿಶ್ವವಿದ್ಯಾಲಯಗಳ ಸಮೀಕ್ಷೆ ವರದಿ, ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನ್ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಆದರೆ, ಬಾಡಿಗೆ ಜಮೀನಿನಲ್ಲಿ ಬೆಳೆದ ರೈತರ ಸಮಸ್ಯೆ ದಾಖಲಾಗುವುದಿಲ್ಲ ಜತೆಗೆ ಸಾಲ, ನೈಸರ್ಗಿಕ ವಿಕೋಪಗಳನ್ನು ಪರಿಗಣಿಸಲಾಗುವುದಿಲ್ಲ. ಭತ್ತ, ಜೋಳ, ರಾಗಿಗೆ ಕ್ವಿಂಟಲ್ ಗೆ 2500 ರು. ಅರಿಶಿಣಕ್ಕೆ 15 ಸಾವಿರ ರು. ಅಲ್ಲದೆ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಕೂಡಾ ರೈತ ಸಂಘಟನೆಗಳು ಆಗ್ರಹಿಸಿವೆ.

ಬಾಕಿ ಮೊತ್ತವೂ ಬೆಳೆಗಾರರಿಗೆ ದಕ್ಕಿಲ್ಲ
ಸರ್ಕಾರ 2500 ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ಎಂದು ಘೋಷಿಸಿದ್ದರೂ ಬೆಳಗಾವಿ, ಬಾಗಲಕೋಟೆ ಜಿಲ್ಲೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2000 ರು ಮಾತ್ರ ನೀಡುತ್ತೇವೆ ಎಂದಿವೆ. ದೇಶದಲ್ಲಿ ಕಬ್ಬು ಉತ್ಪಾದಿಸುವ ಮೂರನೇ ಅತಿದೊಡ್ಡ ರಾಜ್ಯ ಕರ್ನಾಟಕ.
ದೇಶದ ವಾರ್ಷಿಕ ಉತ್ಪನ್ನದಲ್ಲಿ ಶೇ 13 ರಷ್ಟು ಪಾಲು ಕರ್ನಾಟಕ ಹೊಂದಿದೆ. 2012-13ರಲ್ಲಿ 58ಕ್ಕೂ ಅಧಿಕ ಕಾರ್ಖಾನೆಗಳು 33 ಮಿಲಿಯನ್ ಟನ್ ಗಳಷ್ಟು ಕಬ್ಬನ್ನು ಸಂಸ್ಕರಿಸಿ 3.43 ಮಿಲಿಯನ್ ಟನ್ ಗಳಷ್ಟು ಸಕ್ಕರೆ ಹೊರ ಹಾಕಿದ್ದವು.

ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿವೆ.
ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿದ್ದು 58 ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದ ವ್ಯಾಪ್ತಿಗೆ 22 ಕಾರ್ಖಾನೆ ಬರಲಿದ್ದು, ಸರ್ಕಾರದ ಹಿಡಿತದಲ್ಲಿ ಕೇವಲ ಕಾರ್ಖಾನೆಗಳಿವೆ. 34 ಖಾಸಗಿ ಒಡೆತನದಲ್ಲಿದ್ದು ಇದರಲ್ಲಿ 33 ಕಾರ್ಖಾನೆಗಳು ರಾಜಕೀಯ ಮುಖಂಡರ ಒಡೆತನ ಹೊಂದಿವೆ. ರಾಜ್ಯದ ಶೇ 35ರಷ್ಟು ಕಬ್ಬು ಬೆಳೆಯುವ ಮೂಲಕ ಬೆಳಗಾವಿ ಜಿಲ್ಲೆ ಅಗ್ರಸ್ಥಾನ ಹೊಂದಿದ್ದು, 13 ಮಿಲಿಯನ್ ಟನ್ ಕಬ್ಬು ಉತ್ಪಾದನೆಗೊಳ್ಳುತ್ತದೆ.

ಇಳುವರಿ ಚೆನ್ನಾಗಿದೆ, ಲಾಭ, ಆದಾಯ ದಕ್ಕುತ್ತಿಲ್ಲ
ಬೆಳಗಾವಿ, 21 ಕಾರ್ಖಾನೆಗಳನ್ನು ಹೊಂದಿದೆ. ಬಾಗಲಕೋಟೆಯಲ್ಲಿ 9 ಕಾರ್ಖಾನೆ ಜತೆಗೆ ಬೀದರ್ ನಲ್ಲಿ ನಾಲ್ಕು, ಬಿಜಾಪುರ, ಗುಲ್ಬರ್ಗಾ ಹಾಗೂ ದಾವಣಗೆರೆಯಲ್ಲಿ ತಲಾ ಮೂರು ಕಾರ್ಖಾನೆಗಳಿವೆ. ಕಳೆದ ವರ್ಷ 2.16 ಮಿಲಿಯನ್ ಟನ್ ಕಬ್ಬು ಬೆಳೆದಿದ್ದ ಕರ್ನಾಟಕ ಈ ವರ್ಷ ಇಲ್ಲಿ ತನಕ 3.54 ಮಿಲಿಯನ್ ಟನ್ ಉತ್ಪಾದಿಸಿದೆ. ಈ ವರ್ಷ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಇಳುವರಿ ಕಡಿಮೆಯಾಗಿದೆ.ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ 29.5 ಮಿಲಿಯನ್ ಟನ್ ನಷ್ಟು ಉತ್ಪಾದನೆಯಾಗಿದೆ.












Click it and Unblock the Notifications