ಮಾತಿಗೆ ತಪ್ಪುವ ಮುಖ್ಯಮಂತ್ರಿಗಳು, ಕುಮಾರಸ್ವಾಮಿಗೆ ಮೊದಲ ಸ್ಥಾನ ಎಂದ ಬಡಗಲಪುರ ನಾಗೇಂದ್ರ
ಮೈಸೂರು, ಅಕ್ಟೋಬರ್. 26 : ರೈತರ ಸಂಪೂರ್ಣ ಸಾಲ ಮನ್ನಾ ಮಾತಿಗೆ ಬದ್ಧವಾಗಿ ನಡೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನವೆಂಬರ್ 12ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಹೋರಾಟ ಸಂಘಟಿಸಲಾಗಿದೆ.
ಮಾತಿಗೆ ತಪ್ಪುವ ಮುಖ್ಯಮಂತ್ರಿಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಸಹಕಾರ ಬ್ಯಾಂಕ್ ಗಳಲ್ಲಿ 1 ಲಕ್ಷ ರೂ. ಸಾಲ ಮನ್ನಾ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಅದಕ್ಕೂ ಹತ್ತಾರು ಷರತ್ತುಗಳನ್ನು ವಿಧಿಸಿದ್ದಾರೆ. ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾದ ಬಗ್ಗೆ ಸ್ಪಷ್ಟತೆ ಇಲ್ಲ.
ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಋಣಮುಕ್ತ ಪತ್ರ ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಆದರೆ, ಸಾಲ ಮನ್ನಾ ವಿಚಾರವನ್ನು ಜೀವಂತವಾಗಿಟ್ಟು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ನಾಗೇಂದ್ರ ಟೀಕಿಸಿದರು.

ಬಹಳ ಗೊಂದಲಮಯ
ರೈತರ ಒಡವೆಗಳನ್ನು ಹರಾಜು ಹಾಕಲಾಗುತ್ತಿದೆ. ಹೊಸ ಸಾಲ ಸಿಗುತ್ತಿಲ್ಲ. ಕೇಂದ್ರ ಸರ್ಕಾರ 14 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ಅದರ ಪ್ರಕಾರವೇ ಬೆಳೆಗಳನ್ನು ಖರೀದಿ ಮಾಡಬೇಕು. ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕು. ತಂಬಾಕು ಬೆಲೆ ಕುಸಿದಿದೆ. ಕಬ್ಬಿನ ಬೆಳೆ ನಿಗದಿ ಮಾಡಿಲ್ಲ. ಫಸಲ್ ಭಿಮಾ ಯೋಜನೆಯ ವಿಮೆ ಬಹಳ ಗೊಂದಲಮಯವಾಗಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಕುಟುಂಬ ನಿರ್ವಹಣೆ ವೆಚ್ಚ ಕೊಡಿ
ಸರ್ಕಾರವೇ 110 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದೆ. ಸಂಘಟನೆಗೆ ಇರುವ ಮಾಹಿತಿ ಪ್ರಕಾರ 114 ತಾಲೂಕು ಬರಕ್ಕೆ ಸಿಲುಕಿವೆ. ಜನ ಜಾನುವಾರುಗಳು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕಾರ್ಯಕ್ರಮ ರೂಪಿಸಬೇಕು. 1 ಹೆಕ್ಟರ್ ಗೆ 50 ಸಾವಿರ ರೂ. ಪರಿಹಾರ ಮತ್ತು ಕುಟುಂಬ ನಿರ್ವಹಣೆ ವೆಚ್ಚ ಕೊಡಬೇಕು ಎಂದು ನಾಗೇಂದ್ರ ಒತ್ತಾಯಿಸಿದರು.

ವಿಶೇಷ ಪ್ಯಾಕೇಜ್ ಘೋಷಿಸಿ
ಅತಿವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಪುನರ್ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು ನೀಡಿರುವ ಭರವಸೆಯನ್ನು ಕೃತಿರೂಪಕ್ಕೆ ತರಬೇಕು. ಸಂಕಷ್ಟದಲ್ಲಿರುವ ಪ್ರತಿ ಕುಟುಂಬವನ್ನು ಒಂದು ವಿಶೇಷ ಘಟಕವೆಂದು ಪರಿಗಣಿಸಿ ಅವರ ಭವಿಷ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಾಗೇಂದ್ರ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ದಿಲ್ಲಿಯಲ್ಲಿ ರೈತ ಪಾರ್ಲಿಮೆಂಟ್
ರಾಷ್ಟ್ರದ 204 ರೈತ ಸಂಘಟನೆ ಗಳು ಸೇರಿ ರಚಿಸಿರುವ ಕೃಷಿ ಸಂಘರ್ಷ ಸಮನ್ವಯ ಸಮಿತಿಯಿಂದ ನ.30ರಂದು ದಿಲ್ಲಿಯಲ್ಲಿ ರೈತ ಪಾರ್ಲಿಮೆಂಟ್ ನಡೆಯಲಿದೆ. 2 ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ. ಈ ಅಧಿವೇಶನದಲ್ಲಿ ಕಳೆದ ನವೆಂಬರ್ ನಲ್ಲಿ ಮಂಡಿಸಿರುವ ಸಾಲ ಮುಕ್ತಿ ವ್ಯವಸ್ಥೆಯನ್ನು ರೈತರಿಗೆ ಕಲ್ಪಿಸಬೇಕು ಮತ್ತು ಶಾಸನಾತ್ಮಕವಾದ ಬೆಲೆ ನೀತಿ ಜಾರಿಗೆ ತರಬೇಕು ಎಂಬ 2 ಖಾಸಗಿ ಮಸೂದೆಗಳನ್ನು ಅಂಗೀಕಾರ ಮಾಡುವಂತೆ ಒತ್ತಾಯಿಸುವ ಸಲುವಾಗಿ ರೈತ ಪಾರ್ಲಿಮೆಂಟ್ ಸಂಘಟಿಸಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.












Click it and Unblock the Notifications