Karnataka Raitha Shakti Scheme 2022 : ಡೀಸೆಲ್ ಸಬ್ಸಿಡಿ ಯೋಜನೆ 'ರೈತಶಕ್ತಿ' ವಿವರಗಳು
ಶಿವಮೊಗ್ಗ, ಜುಲೈ 31; ಕೃಷಿ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ 'ರೈತಶಕ್ತಿ' ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡಲಾಗುತ್ತದೆ.
ಪ್ರತಿ ಎಕರೆಗೆ 250 ರೂ. ನಂತೆ ಗರಿಷ್ಟ 5 ಎಕರೆಯವರೆಗೆ 1250 ರೂ.ಗಳನ್ನು ಡಿಬಿಟಿ ಮೂಲಕ ಡೀಸೆಲ್ ಸಬ್ಸಿಡಿ ನೀಡುವುದು 'ರೈತಶಕ್ತಿ' ಯೋಜನೆಯಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಟ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್ನಲ್ಲಿ(FRUITS)ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನ ವರ್ಗಾವಣೆಯಾಗಲಿದೆ.
ನೋಂದಣಿ ಹೇಗೆ?; ರೈತರು ಈ ಯೋಜನೆಯ ಪ್ರಯೋಜನೆ ಪಡೆಯಲು ಹತ್ತಿರದ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ಗಳ ವಿಸ್ತೀರ್ಣವನ್ನು ಫ್ರೂಟ್ಸ್ ಪೋರ್ಟಲ್ನಲ್ಲಿ ಆಗಸ್ಟ್ 20 ರೊಳಗೆ ನೋಂದಣಿ ಮಾಡಿಸಬೇಕು.
ಈ ದಿನಾಂಕದವರೆಗೆ ಫ್ರೂಟ್ಸ್ ಪೋರ್ಟಲ್ನಲ್ಲಿ ನೋಂದಾವಣಿಯಾದ ವಿಸ್ತೀರ್ಣಕ್ಕನುಗುಣವಾಗಿ ಡೀಸೆಲ್ ಸಬ್ಸಿಡಿ ಡಿಬಿಟಿ ಮುಖಾಂತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ದೊರೆಯಲಿದೆ. ಇದುವರೆಗೆ ಫ್ರೂಟ್ಸ್ ತಂತ್ರ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿಯನ್ನು ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸಹಾಯಧನ; ಒಂದು ಎಕರೆವರೆಗೆ ರೂ. 250, ಎರಡು ಎಕರೆವರೆಗೆ ರೂ. 500, ಮೂರು ಎಕರೆವರೆಗೆ ರೂ. 750, ನಾಲ್ಕು ಎಕರೆವರೆಗೆ ರೂ.1000, ನಾಲ್ಕು ಎಕರೆ ಮೇಲ್ಪಟ್ಟು ರೂ. 1250 ಸಹಾಯಧನ ಸಿಗಲಿದೆ.
ಈ ಯೋಜನೆ ಲಾಭ ಪಡೆಯಲು ರೈತರು ಆಗಸ್ಟ್ 20ರೊಳಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೆ ನಂಬರ್ವಾರು ವಿಸ್ತೀರ್ಣ ನೋಂದಣಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
ಬರಗಾಲ ಮತ್ತು ಪ್ರವಾಹದ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ/ ತೋಟಗಾರಿಕೆ/ ರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್ (FRUITS portal)ನಲ್ಲಿ ನೋಂದಣಿ ಅಗತ್ಯವಾಗಿದೆ.












Click it and Unblock the Notifications