ಕಾವೇರಿ ಹೋರಾಟಕ್ಕೆ ಬಿಎಸ್ವೈ; ಅನ್ನದಾತರ ಮೇಲೆ FIR

ತಮ್ಮ ಪಟಾಲಂನೊಂದಿಗೆ ಇಂದು ಬೆಳಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಯಡಿಯೂರಪ್ಪ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಕೇಂದ್ರ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಮಾದೇಗೌಡರು ಕಾವೇರಿ ಹೋರಾಟ ನಡೆಸುತ್ತಿರುವುದಕ್ಕೆ ಅತೀವ ಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ನದಿ ಕರ್ನಾಟಕದ ಆಸ್ತಿ. ರಾಜಕೀಯ ಬೆರೆಸದೆ ಎಲ್ಲ ಪಕ್ಷಗಳೂ ಕಾವೇರಿ ಹೋರಾಟಕ್ಕೆ 'ಕೈ'ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ನಾಯಕರ ವೈಫಲ್ಯವನ್ನು ಎತ್ತಿ ತೋರಿಸಿದ ಯಡಿಯೂರಪ್ಪ ಪ್ರಧಾನಿ ಸಿಂಗ್ ಮತ್ತು ರಾಜ್ಯದಲ್ಲಿ ಪ್ರತಿಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಿನ್ನೆ ಮಂಡ್ಯದಲ್ಲಿ ಸಿದ್ದರಾಮಯ್ಯ ವಿರುದ್ಧ ಅನ್ನದಾತರು ತೀವ್ರ ಆಕ್ರೋಶ/ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷವು ನಾಡಿನ ಜನರ ನಾಡಿ ಮಿಡಿತ ಅರಿಯುವಂತಾಗಬೇಕು. ರಾಜ್ಯ ಸರಕಾರ ಶಕ್ತಿ ಮೀರಿ ಕಾನೂನು ಹೋರಾಟ ನಡೆಸುತ್ತಿದ್ದರೂ ಅನಗತ್ಯವಾಗಿ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರಧಾನಿ ಸಿಂಗ್ ಅವರು ಕರ್ನಾಟಕಕ್ಕೆ ಪೂರಕವಾಗಿ ನಿರ್ಣಯಗಳನ್ನು ತೆಗೆದುಕೊಂಡಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.
ಕೆಆರ್ ಎಸ್ ಗೆ ಮುತ್ತಿಗೆ-ಅನ್ನದಾತರ ಮೇಲೆ FIR:
ಕೆಆರ್ ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ (ಬುಧವಾರ) ದಾಂಧಲೆ ಮಾಡಿದ ನೂರಾರು ರೈತರ ವಿರುದ್ಧ ಪ್ರತ್ಯೇಕವಾಗಿ ನಾಲ್ಕು ಪ್ರಕರಣಗಳನ್ನು ಕೆ ಆರ್ ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಅನ್ನದಾತರ ಮೇಲೆ ಸರಕಾರದ ದೌರ್ಜನ್ಯ ಮುಂದುವರಿದಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿರುವ ಮಂಡ್ಯ ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್ ದಾಖಲೆಗಳನ್ನು ನೋಡಿ, ಯಾರೆಲ್ಲ ದಾಂಧಲೆ ಮಾಡಿದ್ದಾರೆ ಎಂಬುದು ಮನದಟ್ಟಾದ ಮೇಲೆ ಆರೋಪಪಟ್ಟಿ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಅ. 11ರವರೆಗೂ ಕೆ ಆರ್ ಎಸ್ ಸುತ್ತ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ.












Click it and Unblock the Notifications