Get Updates
Get notified of breaking news, exclusive insights, and must-see stories!
Live

Karnataka Bandh Live Updates: ಕರ್ನಾಟಕ ಬಂದ್: ಕೃಷಿ ವಿರೋಧಿ ನೀತಿಗೆ ರೈತರ ಆಕ್ರೋಶ

ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಇಂದು ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು. ರೈತರು ಕರೆ ನೀಡಿರುವ ಬಂದ್‌ಗೆ ಕನ್ನಡಪರ ಸಂಘಟನೆಗಳು ಸೇರಿದಂತೆ ರಾಜ್ಯ ವಿವಿಧ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.

ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಒಟ್ಟಾಗಿ "ಐಕ್ಯ ಹೋರಾಟ ಸಮಿತಿ' ಎಂಬ ಹೆಸರಿನಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ. ತುರ್ತು ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಶುಕ್ರವಾರ ಮುಖ್ಯಮಂತ್ರಿಗಳ ಜೊತೆಗಿನ ಸಭೆ ವಿಫಲವಾದ ಹಿನ್ನಲೆಯಲ್ಲಿ ಕರ್ನಾಟಕ ಬಂದ್‌ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಮೈಸೂರಿನ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ, ವರ್ತಕರ ಸಂಘ, ಕಾರ್ಮಿಕರ ಸಂಘಟನೆ, ದಲಿತ ಸಂಘರ್ಷ ಸಮಿತಿಯಿಂದಲೂ ಬೆಂಬಲ ಸಿಕ್ಕಿದೆ.

 Karnataka Bandh LIVE Updates and Latest News in Kannada

ಮೈಸೂರು ಜಿಲ್ಲಾ ಕಾಂಗ್ರೆಸ್,‌ ಜೆಡಿಎಸ್, ರೈತ, ಕಾರ್ಮಿಕ, ದಲಿತ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ಐಕ್ಯ ಹೋರಾಟಕ್ಕೆ ಹೋಟೆಲ್ ಮಾಲೀಕರ ಸಂಘ, ಕ್ಯಾಬ್, ಟ್ಯಾಕ್ಸಿ, ಲಾರಿ ಮಾಲೀಕರು ಸೇರಿ ಹಲವರಿಂದ ಬೆಂಬಲ ವ್ಯಕ್ತವಾಗಿದೆ.

Sep 28, 2020, 6:24 pm IST

ರೈತ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಾವಣಗೆರೆಯಲ್ಲಿ ರೈತ, ಕಾರ್ಮಿಕ ಮತ್ತು ಕನ್ನಡಪರ ಸಂಘಟನೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದಿಗಿಳಿದು ದಾವಣಗೆರೆ ಬಂದ್ ಗೆ ಮುಂದಾಗುವ ಜೊತೆಗೆ ವಿನೂತನ ಹೋರಾಟಗಳ ಮುಖೇನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
Sep 28, 2020, 5:41 pm IST

ಚಾಮರಾಜನಗರ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ, ಕಾರ್ಮಿಕ, ಐಕ್ಯ ಸಂಘಟನೆಗಳು ಇಂದು ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆ ಇದೇ ವೇಳೆ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಪಿಎಂ ಮೋದಿ ವೇಷ ಧರಿಸಿ ರೈತನ ಎದೆ ಮೇಲೆ ಕಲ್ಲು ಇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.
Sep 28, 2020, 5:24 pm IST

ಶಿವಮೊಗ್ಗ: ಕೃಷಿ ಸಂಬಂಧಿ ಮಸೂದೆಗಳಿಗೆ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಇದಕ್ಕೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಫಲವಾಗಲಿಲ್ಲ. ಕೇವಲ ಮೆರವಣಿಗೆ ವೇಳೆ ನಗರದಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಮೆರವಣಿಗೆ ನಂತರ ಎಂದಿನಂತೆ ಎಲ್ಲ ಚಟುವಟಿಕೆಗಳು ನಡೆದವು.
Sep 28, 2020, 4:50 pm IST

ಚಿಕ್ಕಮಗಳೂರು: ಕರ್ನಾಟಕ ಬಂದ್ ನ್ನು ಜನತೆ ತಿರಸ್ಕಾರ ಮಾಡಿದ್ದಾರೆ, ರೈತರು ನಮ್ಮ ಜೊತೆ ಇದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿಕೆ. ಇಂದು ಕಾಂಗ್ರೆಸ್, ಜನತಾ ದಳ ದಲ್ಲಾಳಿಗಳ ಪರ ಹೋರಾಟ ಮಾಡಿದ್ದಾರೆ. ದಲ್ಲಾಳಿಗಳ ಪರ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಸಚಿವ. ಮೊದಲು ದಲ್ಲಾಳಿಗಳು ಬಲಿತುಕೊಂಡಿದ್ದರು, ಈಗ ರೈತ ಬಲಿತುಕೊಳ್ಳುತ್ತಾನೆ. ಶೇಕಡ 90ರಷ್ಟು ರೈತರು ಬಿಜೆಪಿ ಜೊತೆ ಇದ್ದಾರೆ. ಹಾಗಾಗಿ ಯಾರು ಕೂಡ ಇಂದು ಬೀದಿಗೆ ಇಳಿದಿಲ್ಲ. ಪ್ರತಿದಿನ ಬಿಜೆಪಿಯನ್ನು ವಿರೋಧಿಸುವ ಒಂದು ವರ್ಗದ ಜನ ಇಂದು ಬೀದಿಗಿಳಿದಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
Sep 28, 2020, 4:40 pm IST

ತುಮಕೂರು: ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ತುಮಕೂರು ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆಯಿಂದಲೇ ಬಸ್, ಆಟೋ ಸಂಚಾರ ಯಥಾಸ್ಥಿತಿಯಲ್ಲಿತ್ತು. ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಯುತ್ತಿವೆ.
Sep 28, 2020, 4:16 pm IST

ಭೂಸುಧಾರಣೆ ಮತ್ತು ಎಪಿಎಂಸಿ ಮಸೂದೆ ರೈತ ವಿರೋಧಿಯಾಗಿದೆ. ಸುಗ್ರೀವಾಜ್ಞೆ ತಂದು ತರಾತುರಿಯಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿ ತರುವ ಅವಶ್ಯಕತೆ ಏನಿತ್ತು. ಈ ಮಸೂದೆ ಸಂಪೂರ್ಣ ರೈತ ವಿರೋಧಿಯಾಗಿದೆ. ಈ ಕೂಡಲೆ ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ರೈತರ ಆಕ್ರೋಶಕ್ಕೆ ಪತನವಾದ ಮಾಜಿ ಸಿಎಂ ಗುಂಡೂರಾವ್ ಸರ್ಕಾರದಂತೆ ಸ್ಥಿತಿ ಈ ಸರ್ಕಾರಕ್ಕೆ ಬರಲಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
Sep 28, 2020, 3:56 pm IST

ರಾಮನಗರ: ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ, ತಿದ್ದುಪಡಿ ವಾಪಸ್ಸು ಪಡೆಯುವವರೆಗೂ ನಿರಂತರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.‌ ಬಂದ್ ಗೆ ರಾಮನಗರ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೆ ಸ್ವಯಂ ಘೋಷಿತವಾಗಿ ಅಂಗಡಿ-ಮುಗ್ಗಟ್ಟು ಮುಚ್ಚಿ ರೈತರ ಹೋರಾಟಕ್ಕೆ ವರ್ತಕರು ಬಂದ್ ಗೆ ಸಾಥ್ ನೀಡಿದರು. ಪ್ರತಿಭಟನೆಗೆ ರೈತ ಸಂಘ, ಕರವೇ, ಜಯಕರ್ನಾಟಕ, ಕರುನಾಡ ಸೇನೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳು ಕೂಡ ಸಾಥ್ ನೀಡಿದ್ದವು.
Sep 28, 2020, 3:47 pm IST

ಯಾದಗಿರಿ: ದೇಶವ್ಯಾಪಿ ರೈತ ಸಂಘಟನೆ ಸೇರಿದಂತೆ ವಿವಿಧ ಕಾರ್ಮಿಕ, ಕನ್ನಡಪರ ಸಂಘಟನೆಗಳು ಕರೆದ ಕರ್ನಾಟಕ ಬಂದ್ ಯಾದಗಿರಿ ನಗರದಲ್ಲಿ ಬಹುತೇಕ ಯಶಸ್ವಿಯಾಗಿ ಕಂಡುಬಂದಿತು. ಬೆಳಿಗ್ಗೆಯಿಂದಲೆ ವಿವಿಧ ಸಂಘಟನೆಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ವ್ಯಾಪಾರಸ್ಥರು ತಮ್ಮ ಮಹಿವಾಟನ್ನು ಬಂದ್ ಮಾಡಿ ಸಹಕಾರ ನೀಡಿದರು.
Sep 28, 2020, 3:31 pm IST

ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರರು ಭಾಗವಹಿಸಿದ್ದರು.
Sep 28, 2020, 3:15 pm IST

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿದೆ. ಇವುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
Sep 28, 2020, 2:59 pm IST

ಬೆಂಗಳೂರು: ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಪ್ರತಿಷ್ಠಿತ ಕೆ.ಆರ್ ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೆ ಭಣಗುಡುತ್ತಿತ್ತು. ಹೀಗಾಗಿ ಬೀದಿ ಬದಿಯ ವ್ಯಾಪಾರಿಗಳು ಗ್ರಾಹಕರಿಗಾಗಿ ಕಾದು ಸುಸ್ತಾಗಿ ತರಕಾರಿ ಇದ್ದ ಗೋಣಿಚೀಲದ ಮೇಲೆ ತಲೆಯಿಟ್ಟು ನಿದ್ದೆ ಮಾಡಿದರು.
Sep 28, 2020, 2:39 pm IST

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾ ರಂಗಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭ. ಪ್ರತಿಭಟನೆಗೆ ಸಿಐಟಿಯು, ದಲಿತ ರಕ್ಷಣಾ ವೇದಿಕೆ, ವಾಟಾಳ್ ಪಕ್ಷ, ಯೂಥ್ ಕಾಂಗ್ರೆಸ್ ಬೆಂಬಲ. ವಿವಿಧ ಸಂಘಟನೆಗಳೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನಾ ಜಾಥಾ, ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಘೋಷಣೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿರುವ ಪ್ರತಿಭಟನಾ ನಿರತರು.
Sep 28, 2020, 2:22 pm IST

ಕಾರವಾರದಲ್ಲಿ ಪ್ರತಿಭಟನಾಕಾರರಿಂದ ಹೆದ್ದಾರಿ ತಡೆ. ನಗರದ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಡ್ಜ್ ಬಳಿ ರಸ್ತೆ ತಡೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ. ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರಿಂದ ಘೋಷಣೆ. ಅರ್ಧ ತಾಸು ಹೆದ್ದಾರಿ ತಡೆದು ಪ್ರತಿಭಟನೆ. ಗೋವಾ ಮಂಗಳೂರು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ, ಅವಧಿ ಮುಗಿದ ಬಳಿಕ ಹೆದ್ದಾರಿ ಸಂಚಾರಕ್ಕೆ ಅವಕಾಶ ಮಾಡಿದ ಪೊಲೀಸರು.
Sep 28, 2020, 2:04 pm IST

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿದೆ. ಇವುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
Sep 28, 2020, 2:03 pm IST

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಣಕು ಶವ ಯಾತ್ರೆ ನಡೆಸಿದ ರೈತರು. ಅಣಕು ಶವ ಯಾತ್ರೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಅನ್ನದಾತರು. ಅಣಕು ಶವ ಯಾತ್ರೆಯಲ್ಲಿ ನೂರಾರು ರೈತರು ಭಾಗಿ.
Sep 28, 2020, 2:00 pm IST

ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳು ರೈತ ಪರವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ. ನಾನು ರೈತ, ರೈತನಿಗೆ ಅನುಕೂಲವಾಗುವ ಕಾಯ್ದೆಯಾಗಿದೆ. ರೈತನ ಹೆಸರಿನಲ್ಲಿ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ರೈತ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಭಿಪ್ರಾಯ.
Sep 28, 2020, 1:54 pm IST

ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಬಂಧನ. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ರೈತರನ್ನು ವಶಕ್ಕೆ ಪಡೆದ ಪೊಲೀಸರು. ಟೌನ್ ಹಾಲ್ ನಿಂದ ಮೆರವಣಿಗೆಯಲ್ಲಿ ಬಂದಿದ್ದು, ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಕೆ.ಆರ್ ಸರ್ಕಲ್ ಕಡೆ ಮೆರವಣಿಗೆ ಹೋಗಲು ಯತ್ನ. ಪ್ರತಿಭಟನಾ ಮೆರವಣಿಗೆ ಮುಂದುವರೆಸಲು ಅನುಮತಿ ನಿರಾಕರಿಸಿದ ಪೊಲೀಸರು. ನೂರಾರು ರೈತರನ್ನು ಪೊಲೀಸ್ ವ್ಯಾನ್ ಗಳಲ್ಲಿ ತುಂಬಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.
Sep 28, 2020, 1:43 pm IST

ಕಲಬುರಗಿ: ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಮಾಜಿ ಸಚಿವ ಬಿ. ಆರ್ ಪಾಟೀಲ್ ವಾಗ್ದಾಳಿ. ಕಲಬುರಗಿ ಬಂದ್ ಹಿನ್ನಲೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿ. ನೂರಾರು ರೈತರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ.
Sep 28, 2020, 1:41 pm IST

ಕೃಷಿ ಕಾಯ್ದೆ ವಿರೋಧಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ. ಕೈ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಆಗಮಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ನೇತೃತ್ವದಲ್ಲಿ ಪ್ರತಿಭಟನೆ.
Sep 28, 2020, 1:37 pm IST

ಕಾರ್ಮಿಕ ಹಾಗೂ ರೈತ ವಿರೋಧಿ ಮಸೂದೆ ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆ, ರಾಯಚೂರು ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಮುಂದಾದ ರೈತರು. ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ. ಬೆಂಕಿ ಹಚ್ಚಲು ಅವಕಾಶ ನೀಡದೇ ಟೈಯರ್ ತೆಗೆದುಕೊಂಡು ಹೋದ ಪೋಲೀಸರು.
Sep 28, 2020, 1:34 pm IST

ಮಡಿಕೇರಿಯಲ್ಲಿ ಪ್ರತಿಭಟನಾಕಾರರ ಬಂಧನ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಐಕ್ಯ ಹೋರಾಟ ಸಮಿತಿ ಮುಖಂಡರು. ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾಗಿದ್ದ ಐವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ. ಬಂಧಿಸಿ ಪೊಲೀಸ್ ಮೈದಾನಕ್ಕೆ ಕರೆದೊಯ್ದ ಪೊಲೀಸರು.
Sep 28, 2020, 1:30 pm IST

ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಯಾದಗಿರಿಯಲ್ಲಿ ಪ್ರತಿಭಟನೆ. ಸರ್ವ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ. ಯಾದಗಿರಿ ನಗರದ ಸುಭಾಷ್ ಮತ್ತು ಶಾಸ್ತ್ರೀ ವೃತ್ತದ ಬಳಿ ಘೋಷಣೆ ಕೂಗಿ ಆಕ್ರೋಶ. ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕೂಗು. ಕನ್ನಡ ಪರ, ರೈತ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿರುವ ಹೋರಾಟಗಾರರು.
Sep 28, 2020, 1:18 pm IST

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಯತ್ನ: ಬೆಳಗಾವಿಯಲ್ಲಿ ನೂರಾರು ರೈತರು ಪುಣೆ-ಬೆಂಗಳೂರು ಹೆದ್ದಾರಿ ತಡೆ ನಡೆಸಿದರು. ಬಳಿಕ ಸುವರ್ಣ ಸೌಧ ಮುತ್ತಿಗೆಗೆ ರೈತರು ಮುಂದಾದರು. ಈ ವೇಳೆ ಹಿರೇಬಾಗೇವಾಡಿ ಪೊಲೀಸರು ರೈತರನ್ನು ವಶಕ್ಕೆ ಪಡೆದರು. ಹೆದ್ದಾರಿ ತಡೆಯಿಂದ ಪ್ರಯಾಣಿಕರು ಪರದಾಡಿದರು.
Sep 28, 2020, 1:16 pm IST

ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಹಾಗೂ ಮಾರುಕಟ್ಟೆ ಸಂಬಂಧಿ ತಿದ್ದುಪಡಿ ಮಸೂದೆಗಳ ವಿರುದ್ಧ ಇಂದು ಕರೆಯಲಾದ ರಾಷ್ಟ್ರವ್ಯಾಪಿ ಬಂದ್‌ ಪ್ರದರ್ಶನಕ್ಕಷ್ಟೇ ಸೀಮಿತವಾಯ್ತು. ರೈತ ಸಂಘ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಟಿ, ಜೊತೆಗೆ ಜನರ ಬಳಿ ಹೋಗಿ ಮನವಿಯನ್ನೂ ಮಾಡಿತ್ತು. ಜನರು ಸ್ವಯಂ ಪ್ರೇರಿತವಾಗಿ ಕೆಲವೆಡೆ ಹನ್ನೊಂದು ಗಂಟೆವರೆಗೆ ಬಾಗಿಲು ಮುಚ್ಚಿದ್ದರು. ನಂತರ ಯಥಾಸ್ಥಿತಿಯತ್ತ ನಗರ ಮರಳಿತು ಜನರಲ್ಲಿ ಬಂದ್‌ ಎನ್ನುವ ಯಾವುದೇ ಪರಿವೆಯೇ ಇರಲಿಲ್ಲ. ಆರಾಮಾಗಿ ಬೈಕ್ ಹಾಗೂ ಕಾರ್‌ಗಳಲ್ಲಿ ಓಡಾಡುತ್ತಿದ್ದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆ ನೀಡಿದ್ದರು ಕೆಲವು ಮಾರ್ಗಗಳನ್ನು ಬಂದ್‌ ಮಾಡಲಾಗಿತ್ತು.
Sep 28, 2020, 1:13 pm IST

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆ ಮುಖಂಡರು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬೆಳಗಾವಿ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
Sep 28, 2020, 12:50 pm IST

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೈಸೂರು ತಾಲೂಕು ಎಪಿಎಂಸಿ ಸದಸ್ಯರು ಎಪಿಎಂಸಿ ಕಚೇರಿ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ಎಪಿಎಂಸಿ ಅಧ್ಯಕ್ಷ ಬಸವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಎಪಿಎಂಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಮಾಡಿಸಿ ಪ್ರತಿಭಟನೆ ನಡೆಸಿದರು. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದ್ದು, ಸಂಜೆ ಆರು ಗಂಟೆಯವರೆಗೂ ಸಂಪೂರ್ಣ ಬಂದ್ ಇರಲಿದೆ.
Sep 28, 2020, 12:47 pm IST

ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ನತ್ತ ಅನ್ನದಾತರ ಜಾಥಾ. ರೈತರಿಗೆ ಹಲವು ಸಂಘಟನೆಗಳು ಸಾಥ್ ನೀಡಿವೆ. ಭೂಸುಧಾರಣಾ ಹಾಗೂ ಎಪಿಎಂಸಿ ಸೇರಿದಂತೆ ಹಲವು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ.
Sep 28, 2020, 12:33 pm IST

ಕಾಫಿನಾಡು ಚಿಕ್ಕಮಗಳೂರನಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ. ನಗರದ ಹನುಮಂತಪ್ಪ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ. ಚಿಕ್ಕಮಗಳೂರು ನಗರದಲ್ಲಿ ಆಟೋ, ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್. ತೆರೆದಿರುವ ಅಂಗಡಿಗಳನ್ನು ಮುಚ್ಚಿಸುತ್ತಿರುವ ಕಾರ್ಯಕರ್ತರು. ರೈತ ಸಂಘಟನೆ, ಕರವೇ, ಸಿಬಿಐ ಮುಖಂಡರು ಭಾಗಿ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ.
Sep 28, 2020, 12:29 pm IST

ಉಡುಪಿಯಲ್ಲಿ ಕೆಲವು ಸಿಟಿ ಬಸ್ಸುಗಳು ಎಂದಿನಂತೆ ಓಡಾಟ ಆರಂಭಿಸಿದಾಗ ಬಸ್ ಪ್ರತಿಭಟನಾ ನಿರತರು ರಸ್ತೆಯಲ್ಲಿ ಅಡ್ಡ ಕುಳಿತು ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಆಗಮಿಸಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ವ್ಯಾನ್ ನಲ್ಲಿ ಕರೆದೊಯ್ದರು. ಇಂದಿನ ಪ್ರತಿಭಟನೆಗೆ ಹದಿನಾಲ್ಕು ಸಂಘಟನೆಗಳು ಬೆಂಬಲ ನೀಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಪ್ರತಿಭಟನಾ ನಿರತರಲ್ಲಿ ಸಿಪಿಐಎಂ, ಕಾರ್ಮಿಕ ಸಂಘಟನೆಗಳು ಮತ್ತು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
Sep 28, 2020, 12:22 pm IST

ರಾಜ್ಯ ಹಸಿರು ಸೇನೆ ಹಾಗೂ ರೈತ ಸೇನೆ ಸಂಘದ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ದಾವಣಗೆರೆ ನಗರದ ಗುಂಡಿ ಸರ್ಕಲ್ ಬಳಿ ರೈತರು ಬಾಯಿ ಬಾಯಿ ಬಡಿದುಕೊಂಡು ತಮ್ಮ ಅಳಲು ವ್ಯಕ್ತಪಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಮತ್ತೊಂದು ಕಡೆ ತರಕಾರಿ ನಗರದ ಕೆ.ಎಸ್‍.ಆರ್‍.ಟಿ.ಸಿ ಬಸ್ ನಿಲ್ದಾಣ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರ ಚೀಲಗಳನ್ನು ಕಸಿದುಕೊಂಡು ವ್ಯಾಪಾರ ಮಾಡದಂತೆ ಮನವಿ ಮಾಡಿದರು. ಈ ವೇಳೆ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+