ಪ್ರಣಾಳಿಕೆಯಲ್ಲಿ ಅನ್ನದಾತನಿಗೆ ಭಾರಿ ಫಸಲಿನ ಭರವಸೆ ನೀಡಿದ ಬಿಜೆಪಿ
ಬೆಂಗಳೂರು, ಮೇ 4: ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಕೃಷಿ ಕ್ಷೇತ್ರ ಹಾಗೂ ರೈತರಿಗಾಗಿ ಭಾರಿ ಆಶ್ವಾಸನೆಗಳನ್ನು ನೀಡಿದೆ. 'ರೈತರ ಕಲ್ಯಾಣ ರಾಜ್ಯದ ಕಲ್ಯಾಣ' ಎಂಬ ಘೋಷವಾಕ್ಯದೊಂದಿಗೆ ಭರವಸೆಗಳ ಮಹಾಪೂರ ಹರಿಸಿರುವ ಬಿಜೆಪಿ, ಪ್ರಣಾಳಿಕೆಯಲ್ಲಿ ರೈತರ ಏಳಿಗೆಗೆ ನೀಡುವ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗೆ ಆರು ಪುಟಗಳನ್ನು ಮೀಸಲಿರಿಸಿದೆ.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು, ತಾಂತ್ರಿಕ ಸೌಲಭ್ಯ ಒದಗಿಸುವುದು, ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯ ವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸುವುದು ಮುಂತಾದ ಭರವಸೆಗಳನ್ನು ಬಿಜೆಪಿ ನೀಡಿದೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಕೃಷಿ ವಲಯದ ಕುರಿತು ಕೆಲವು ಪ್ರಮುಖ ಭರವಸೆಗಳು ಇಲ್ಲಿವೆ.

ರೈತರ ಆದಾಯ ದುಪ್ಪಟ್ಟು
* ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಬೆಳೆ ಸಾಲವನ್ನು 1 ಲಕ್ಷದವರೆಗೆ ಮನ್ನಾ ಮಾಡುವುದು.
* 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ 10,000 ರೂಪಾಯಿ ಆರ್ಥಿಕ ನೆರವು ನೀಡುವುದಕ್ಕಾಗಿ 'ನೇಗಿಲ ಯೋಗಿ' ಯೋಜನೆ.
* ರೈತರ ಆದಾಯ ದುಪ್ಪಟ್ಟುಗೊಳಿಸಲು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ತಾವು ಬೆಳೆದ ಬೆಳೆಗೆ ಒಂದೂವರೆ ಪಟ್ಟು ಆದಾಯ ನೀಡಲಾಗುವುದು.
* ಬೆಲೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ 'ರೈತ ಬಂಧು ಆವರ್ತ ನಿಧಿ' ಸ್ಥಾಪನೆ.
* ಭೂ ಚೇತನ ಯೋಜನೆಯನ್ನು ಬಲಪಡಿಸುವುದು ಹಾಗೂ ಸಾವಯವ ಕೃಷಿಗೆ ಪರಿವರ್ತನೆಗೊಳ್ಳುವವರಿಗೆ ಪ್ರೋತ್ಸಾಹ ಧನದೊಂದಿಗೆ 3 ವರ್ಷಗಳ ಒಪ್ಪಂದ. ಪರಿಸರ ಸ್ನೇಹಿ ಭೂಮಿಯನ್ನು ನೀಡುವ ರೈತರ ಕರಾರು ಮುಂದುವರಿಸುವುದು.
* ಸ್ಥಿರ ಮತ್ತು ಸಂಚಾರಿ ಮಣ್ಣಿನ ಪರೀಕ್ಷಾಲಯಗಳ ಸ್ಥಾಪನೆ.
* 'ರೈತಬಂಧು' ಬೃಹತ್ ರೈತ ಮಾರುಕಟ್ಟೆಗಳ ನಿರ್ಮಾಣ.

ಆಡಳಿತಾತ್ಮಕ ಕ್ರಮಗಳು
* ಸಚಿವಾಲಯಗಳ ರೈತಸ್ನೇಹಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ 'ರೈತಬಂಧು ವಿಭಾಗ' ಸ್ಥಾಪನೆ.
* ಪ್ರತ್ಯೇಕ ಕೃಷಿ ಬಜೆಟ್ ಮುಂದುವರಿಸುವುದು.
* ರೈತರಿಗೆ ಕೃಷಿ ಬೆಲೆ, ಹೊಸ ಕೃಷಿ ವಿಧಾನಗಳು ಮುಂತಾದ ಮಾಹಿತಿಗಾಗಿ 'ರೈತಬಂಧು ಟಿವಿ ಚಾನೆಲ್'.
* ನೇರ ಸಹಾಯಧನ ವರ್ಗಾವಣೆ (ಡಿಬಿಟಿ) ಮೂಲಕ ರೈತರಿಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ.
* ರೈತರ ವಿರುದ್ಧದ ರಾಜಕೀಯಪ್ರೇರಿತ ಕೇಸುಗಳ ವಾಪಸ್.
* ಭೂರಹಿತ ಕೃಷಿ ಕಾರ್ಮಿಕರಿಗೆ ಉಚಿತ 2 ಲಕ್ಷದಷ್ಟು ಅಪಘಾತ ವಿಮೆ.
* ಭೂರಹಿತ ಕೃಷಿ ಕಾರ್ಮಿಕರಿಗೆ ಜಾನುವಾರು ಖರೀದಿಗೆ ಸಬ್ಸಿಡಿ.

ಕೃಷಿ ಸಂಬಂಧಿತ ಮೂಲಭೂತ ಸೌಕರ್ಯ
* 'ಸುಜಲಾಂ ಸುಫಲಾಂ ಕರ್ನಾಟಕ' ಯೋಜನೆಗೆ 1.5 ಲಕ್ಷ ಕೋಟಿ ಹಣ ನಿಗದಿ.
* ರೈತರ ಪಂಪ್ಸೆಟ್ಗಳಿಗೆ ಪ್ರತಿ ದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ.
* ಸೌರ ಪಂಪ್ಸೆಟ್ ಅಳವಡಿಸಲು ಶೇ 100ರಷ್ಟು ಸಬ್ಸಿಡಿ.
* ಆಲಮಟ್ಟಿ ಅಣೆಕಟ್ಟಿನ ಗರಿಷ್ಠ ಬಳಕೆಗಾಗಿ ಎತ್ತರವನ್ನು 524.25 ಮೀಟರ್ಗೆ ಹೆಚ್ಚಿಸುವುದು. ಈ ಯೋಜನೆಯಿಂದ ಸಂಕಷ್ಟಕ್ಕೀಡಾಗು ರೈತರಿಗೆ ಮತ್ತು
ಇತರ ನಿವಾಸಿಗಳಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ.
* ಕೆರೆಗಳ ಪುನಶ್ಚೇತನಕ್ಕಾಗಿ 'ಮಿಶನ್ ಕಲ್ಯಾಣಿ' ಯೋಜನೆ.

ಕೃಷಿಯಲ್ಲಿ ಸಂಶೋಧನೆ ಮತ್ತು ತರಬೇತಿ
* ಹರಿಹರ (ದಾವಣಗೆರೆ) ಮತ್ತು ಬೆಳ್ತಂಗಡಿಯಲ್ಲಿ (ದಕ್ಷಿಣ ಕನ್ನಡ) ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಸ್ಥಾಪನೆ.
* ಕೋಲಾರ, ಬೆಳಗಾವಿ, ವಿಜಯಪುರ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಿಗಾಗಿ 'ರೈತ ಬಂಧು ಕೃಷಿ ಸಂಸ್ಕರಣಾ ತಾಂತ್ರಿಕ ತರಬೇತಿ ಕೇಂದ್ರ'ಗಳ ಸ್ಥಾಪನೆ.
* ರೈತರ ಮಕ್ಕಳು ಕೃಷಿ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಪಡೆಯಲು 100 ಕೋಟಿ ಮೊತ್ತದ 'ರೈತಬಂಧು ವಿದ್ಯಾರ್ಥಿ ವೇತನ'.
* ಕೃಷಿಯ ಅತ್ಯುತ್ತಮ ಪದ್ಧತಿ ಅರಿಯಲು ಪ್ರತಿ ವರ್ಷ 1,000 ರೈತರ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ.
* ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ದರದಲ್ಲಿ ಉಂಟಾಗುವ ಏರುಪೇರು ನಿಭಾಯಿಸಲು "ಟಾಪ್ ಬೆಲೆ ರಕ್ಷಣೆ ನಿಧಿ" ಸ್ಥಾಪನೆ.

ಅಡಿಕೆ, ಕಾಫಿ ಬೆಳೆಗಾರರಿಗೆ ನೆರವು
* ಸರ್ಕಾರ ಅಸ್ತಿತ್ವಕ್ಕೆ ಬಂದ 180 ದಿನಗಳೊಳಗೆ ಸಕ್ಕರೆ ಕಂಪನಿಗಳು ರೈತರಿಗೆ ನೀಡಲು ಬಾಕಿ ಇರುವ ಮೊತ್ತ ಪಾವತಿಗೆ ವ್ಯವಸ್ಥೆ ಮಾಡಲಾಗುವುದು.
* ಕಾಫಿ ತೋಟ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕಾಫಿ ಬೆಳೆಯುವ ಜಿಲ್ಲೆಗಳಿಗೆ ಪ್ರತಿ ವರ್ಷ 10 ಲಕ್ಷ ಅನುದಾನ.
* ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಕಾಫಿ ವ್ಯಾಪಾರ ಮೇಳ ಆಯೋಜನೆ.
* ಕರ್ನಾಟಕ ಕಾಫಿ ಹೌಸ್ ಮಳಿಗೆಗಳ ಸ್ಥಾಪನೆ.
* ಕಾಫಿ ಕಾರ್ಮಿಕರ ಕುಟುಂಬಕ್ಕೆ ಇಎಸ್ಐ ಆಸ್ಪತ್ರೆ ಸ್ಥಾಪನೆ.
* ತೀರ್ಥಹಳ್ಳಿಯಲ್ಲಿ ಜಾಗತಿಕ ಮಟ್ಟದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪನೆ.
* "ಅಡಿಕೆ ನಾವೀನ್ಯ ನಿಧಿ" ಸ್ಥಾಪನೆ.
* ಅಡಿಕೆ ಬೆಳೆಗಾರರು ಪಾವತಿ ಮಾಡಬೇಕಿರುವ ಶೇ 1.5 ಎಪಿಎಂಸಿ ಸೆಸ್ ತೆಗೆಯಲಾಗುವುದು.
* ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಅಡಿಕೆ ಮಂಡಳಿ ಸ್ಥಾಪನೆ.

ಕೆಂಪು ಅಕ್ಕಿ ಅಭಿಯಾನ
* ತಿಪಟೂರಿನಲ್ಲಿ "ಕಲ್ಪವೃಕ್ಷ" ಹೆಸರಿನ ವಿಶ್ವ ದರ್ಜೆಯ ತೆಂಗು ಕೃಷಿ ಕೇಂದ್ರ ಸ್ಥಾಪನೆ.
* ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು ಮತ್ತು ಮಂಡ್ಯದಲ್ಲಿ ಆಧುನಿಕ ತೆಂಗು ಸಂಸ್ಕರಣಾ ಘಟಕ ಸ್ಥಾಪನೆ.
* ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಕಾಲುವೆ ವ್ಯವಸ್ಥೆ ನಿರ್ಮಾಣ.
* ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಎಕ್ಸ್ಟ್ರಾ ಲಾಂಗ್ ಸ್ಟೇಪಲ್ ಹತ್ತಿ ಬೆಳೆಯಲು ಉತ್ತೇಜನ.
* ಭತ್ತ ಬೆಳೆಯುವ ಸೂಕ್ತ ವಿಧಾನಗಳಿಗೆ ಉತ್ತೇಜನ.
* ಸೋನಾ ಮಸೂರಿ ಅಕ್ಕಿಗೆ ಭೌಗೋಳಿಕ ಅಸ್ಮಿತೆ ದೊರಕಿಸುವುದು.
* ಕೆಂಪು ಅಕ್ಕಿಯ ಸೇವನೆಯನ್ನು ಪ್ರೋತ್ಸಾಹಿಸಲು 'ಕೆಂಪು ಅಕ್ಕಿ ಅಭಿಯಾನ'.
* ಕ್ವಿಂಟಾಲ್ಗೆ 1,500 ಮೊತ್ತದಲ್ಲಿ ಮೆಕ್ಕೆಜೋಳ ಖರೀದಿ.
* ಮೆಕ್ಕೆ ಜೋಳ ಸಂಗ್ರಹಣಾ ಕೇಂದ್ರ ಸ್ಥಾಪನೆ.

ತೋಟಗಾರಿಕೆಗೆ ಉತ್ತೇಜನ
* ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಮೂಲಕ ಹಣ್ಣು ಹಂಪಲುಗಳು ಮತ್ತು ತರಕಾರಿಗಳ ಸಂಗ್ರಹ, ದಾಸ್ತಾನು, ಸಂಸ್ಕರಣೆ,
ಮಾರಾಟ ಮತ್ತು ರಫ್ತಿನ ಉತ್ತೇಜನಕ್ಕಾಗಿ 3,000 ಕೋಟಿ ವೆಚ್ಚದ ನಿಧಿ ಸ್ಥಾಪನೆ.
* ಹಣ್ಣು ಹಂಪಲುಗಳು ಮತ್ತು ತರಕಾರಿ ಬೆಳೆಗಳಲ್ಲಿ ಮಾದರಿ ಹೈಬ್ರೀಡ್ ಬೀಜಗಳ ಬಳಕೆ ಉತ್ತೇಜನಕ್ಕಾಗಿ ನೀತಿ.
* ತೋಟಗಾರಿಕಾ ಬೆಳೆಗಳ ಮೌಲ್ಯ ವರ್ಧಿಸಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ತರಬೇತಿ ಮತ್ತು ತಾಂತ್ರಿಕ ಬೆಂಬಲ.
* ಪ್ರತಿ ಜಿಲ್ಲಾ ಕೇಂದ್ರದಲ್ಲಿ "ಸಜೀವ ಸಾವಯವ ಕೃಷಿ ಮಳಿಗೆ"ಗಳನ್ನು ಸ್ಥಾಪಿಸುವುದು ಮತ್ತು ಪ್ರಸ್ತುತ ಚಾಲನೆಯಲ್ಲಿರುವ ಸಾವಯವ ಉತ್ಪನ್ನ ಅಂಗಡಿಗಳನ್ನು ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ
ಉನ್ನತೀಕರಿಸಲಾಗುವುದು.

ಹೈನುಗಾರಿಕೆ ಮತ್ತು ಪಶು ಸಂಗೋಪನೆ
* 'ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ 2012" ಇದಕ್ಕೆ ಮರು ಚಾಲನೆ.
* ಪಶು ಸಂಗೋಪನೆ ಮತ್ತು ಹೈನುಗಾರಿಕೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 'ಕಾಮಧೇನು ಅನುದಾನ'.
* ಹಸು ಸಗಣಿಯಿಂದ "ಗೋಬರ್ಧನ ಯೋಜನೆ" ಮೂಲಕ ಆದಾಯ ಗಳಿಕೆ ವಿಧಾನಗಳನ್ನು ಉತ್ತೇಜಿಸಲಾಗುವುದು.
* ಪಶು ವೈದ್ಯಕೀಯ ಆಸ್ಪತ್ರೆಗಳ ಸಂಖ್ಯೆ ದುಪ್ಪಟ್ಟುಗೊಳಿಸಲಾಗುವುದು.
* ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಜಾನುವಾರುಗಳು ಮತ್ತು ಹಾಲಿನ ಹಸುಗಳಿಗೆ ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.

ರೇಷ್ಮೆ ಮತ್ತು ಮೀನುಗಾರಿಕೆ
* ರೇಷ್ಮೆ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲು 1,700 ಕೋಟಿಯ "ಮಿಶನ್ ಸೆರಿಕಲ್ಚರ್" ಆರಂಭಿಸಲಾಗುವುದು.
* ರೇಷ್ಮೆ ಕೃಷಿಕರಿಗೆ ನವೀನ ತಂತ್ರಜ್ಞಾನ ಒದಗಿಸಲು ಮಂಡ್ಯದಲ್ಲಿ ರೇಷ್ಮೆ ಪಾರ್ಕ್ ಸ್ಥಾಪನೆ.
* ಮೀನುಗಾರಿಕಾ ಉದ್ದೇಶಕ್ಕೆ ಯಾಂತ್ರೀಕೃತ ದೋಣಿಗಳು ಮತ್ತು ಇತರ ಉಪಕರಣಗಳ ಖರೀದಿಗಾಗಿ ಮೀನುಗಾರರ ಸಹಕಾರಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುವುದು.
* ಪ್ರತಿ ಹೊಸ "ಮೀನುಗಾರಿಕೆ ಉತ್ಪಾದನಾ ಕೇಂದ್ರ"ಕ್ಕೆ 2 ಲಕ್ಷದಷ್ಟು ವಿಶೇಷ ಸಹಾಯ ನಿಧಿ.
* ಮೀನುಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು 'ರಾಜ್ಯ ಮೀನುಗಾರ ಹೂಡಿಕೆ ಮಂಡಳಿ' ಸ್ಥಾಪನೆ.
* ಕರಾವಳಿಯಲ್ಲಿ 2 ಹೊಸ ಮೀನುಗಾರಿಕಾ ಕಾಲೇಜುಗಳ ಸ್ಥಾಪನೆ












Click it and Unblock the Notifications