ಭಾರತದಲ್ಲಿ ಈವರೆಗೆ 541.90 ಲಕ್ಷ ಟನ್ ಭತ್ತ ಖರೀದಿ, ಶೇ.9.58 ಏರಿಕೆ
ಬೆಂಗಳೂರು, ಜನವರಿ 05: ಪ್ರಸಕ್ತ 2022-23 ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರದ ಇದುವರೆಗೆ ಶೇ.9.58ರಷ್ಟು ಅಧಿಕ ಭತ್ತ ಸಂಗ್ರಹಣೆ ಮಾಡಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.
ಭವಿಷ್ಯದ ಆಹಾರ ನಿರ್ವಹಣೆ ನಿಟ್ಟಿನಲ್ಲಿ ಭಾರತದಲ್ಲಿ ಈವರೆಗೆ 541.90 ಲಕ್ಷ ಟನ್ಗಳಷ್ಟು ಭತ್ತಿ ಸಂಗ್ರಹಿಸಿದೆ. ಈ ಸಂಗ್ರಹಣೆ ಕಳೆದ ವರ್ಷಕ್ಕಿಂತ ಶೇ.9.58ರಷ್ಟು ಹೆಚ್ಚು ಎನ್ನಲಾಗಿದೆ. ಇಷ್ಟು ದಾಸ್ತಾನು ಸಂಗ್ರಹದ ಪೈಕಿ ಪಂಜಾಬ್, ಛತ್ತೀಸ್ಗಢ, ಹರಿಯಾಣ ಮತ್ತು ತೆಲಂಗಾಣ ರಾಜ್ಯಗಳು ಹೆಚ್ಚು ಕೊಡುಗೆ ನೀಡಿವೆ.
ಸಾಮಾನ್ಯವಾಗಿ ಅಕ್ಟೋಬರ್ನಿಂದ ಭತ್ತ ಖರೀದಿ ಆರಂಭವಾಗುತ್ತದೆ. ದಕ್ಷಿಣದ ರಾಜ್ಯಗಳಲ್ಲಿ ನೋಡುವುದಾದರೆ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಭತ್ತ ಖರೀದಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿತ್ತು. ಈ ವರ್ಷದ ಖಾರಿಫ್ ಮಾರುಕಟ್ಟೆ ಋತು (ಅಕ್ಟೋಬರ್-ಸೆಪ್ಟೆಂಬರ್)ವೇಳೆ 775.72 ಲಕ್ಷ ಟನ್ ಭತ್ತ ಸಂಗ್ರಹಿಸುವ ಗುರಿ ಸರ್ಕಾರ ಹೊಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭತ್ತ ಸಂಗ್ರಹಣೆಯು 759.32 ಲಕ್ಷ ಟನ್ಗಳಷ್ಟು ದಾಖಲೆಯ ಮಟ್ಟದಲ್ಲಿ ಸಂಗ್ರಹಿಸಲಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಗುರಿ ಇಟ್ಟುಕೊಳ್ಳಲಾಗಿದೆ. ಇದೇ ಜನವರಿ 3ರವರೆಗೆ ಭಾರವು ಒಟ್ಟು 541.90 ಲಕ್ಷ ಟನ್ಗಳಷ್ಟು ಭತ್ತ ಖರಿದಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 494.50 ಲಕ್ಷ ಟನ್ ಭತ್ತ ಖರೀದಿ ಆಗಿತ್ತು ಎಂದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ.
ರಾಜ್ಯವಾರು ಭತ್ತ ಸಂಗ್ರಹಣೆ ಮಾಹಿತಿ
ರಾಜ್ಯವಾರು ಪ್ರತ್ಯೇಕವಾಗಿ ಭತ್ತ ಸಂಗ್ರಹಣೆಯನ್ನು ನೋಡುವುದಾದರೆ ಪಂಜಾಬ್ನಲ್ಲಿ ಭತ್ತದ ಖರೀದಿಯು ಈ ವರ್ಷ 182.13 ಲಕ್ಷ ಟನ್ಗಳಿಗೆ ಇಳಿಕೆ ಆಗಿದೆ. ಕಳೆ ಋತುವಿನಲ್ಲಿ ಈ ರಾಜ್ಯದಲ್ಲಿ ಜನವರಿ 3ರವರೆಗೆ 187.12 ಲಕ್ಷ ಟನ್ ಭತ್ತ ಖರೀದಿಸಿ ಸಂಗ್ರಹಿಸಲಾಗಿತ್ತು.
ಛತ್ತೀಸ್ಗಢದಲ್ಲಿ ಕಳೆದ ವರ್ಷವಿದ್ದ 55 ಲಕ್ಷ ಟನ್ ಭತ್ತಿ ದಾಸ್ತಾನಿಗಿಂತ ಈ ವರ್ಷ 82.89 ಲಕ್ಷ ಟನ್ಗಳಿಗೆ ತೀವ್ರ ಏರಿಕೆ ಕಂಡಿದೆ. ಹರಿಯಾಣದಲ್ಲಿ ಭತ್ತ ಧಾನ್ಯದ ಖರೀದಿಯು 54.50 ಲಕ್ಷ ಟನ್ಗಳಿಂದ 58.96 ಲಕ್ಷ ಟನ್ಗಳಿಗೆ ಈ ವರ್ಷ ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ತೆಲಂಗಾಣದಲ್ಲಿ ತೀವ್ರವಾಗಿ ಭತ್ತ ಸಂಗ್ರಹ ಕಡಿಮೆ ಆಗಿದೆ. ಹಿಂದಿನ ವರ್ಷ 63.84 ಲಕ್ಷ ಟನ್ಗಳಿಗೆ ಹೋಲಿಸಿದರೆ ಈ ವರ್ಷ 56.31 ಲಕ್ಷ ಟನ್ಗಳಷ್ಟು ಮಾತ್ರವೇ ದಾಸ್ತಾನು ಮಾಡಲಾಗಿದೆ. ಇನ್ನು ಅದೇ ರೀತಿ ಉತ್ತರ ಪ್ರದೇಶದಲ್ಲಿ ಕೊಂಚ ಏರಿಕೆ ಅಂದರೆ 42.73 ಲಕ್ಷ ಟನ್ಗಳಿಂದ 42.96 ಲಕ್ಷ ಟನ್ಗಳಿಗೆ ಹೆಚ್ಚಾಗಿದೆ. ಮಧ್ಯ ಪ್ರದೇಶದಲ್ಲಿ 22.42 ಲಕ್ಷ ಟನ್ಗಳಿಂದ ಈ ವರ್ಷ 34.50 ಲಕ್ಷ ಟನ್ಗಳಿಗೆ ಭತ್ತ ಖರೀದಿ ಏರಿಕೆ ಆಗಿದೆ.
ಖಾರೀಪ್ ಹಂಗಾಮಿನಲ್ಲಿ ಶೇ.80 ರಷ್ಟು ಉತ್ಪಾದನೆ
ಈ ಭತ್ತ ಖರೀದಿ ಪ್ರಕ್ರಿಯೆಯನ್ನು ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಮತ್ತು ಖಾಸಗಿ ಏಜೆನ್ಸಿಗಳು ಕೈಗೊಳ್ಳುತ್ತವೆ. ಇದನ್ನು ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ಭವಿಷ್ಯದ ಬೇಡಿಕೆಯನ್ನು ಹಲವಾರು ಕಲ್ಯಾಣ ಯೋಜನೆಗಳ ಅಡಿಯಲ್ಲಿ ಪೂರೈಸಲು ಸರ್ಕಾರ ಬಳಕೆ ಮಾಡಿಕೊಳ್ಳಲಿದೆ. ಭತ್ತವನ್ನು ಖಾರಿಫ್ (ಬೇಸಿಗೆ) ಮತ್ತು ರಾಬಿ (ಚಳಿಗಾಲ) ಎರಡೂ ಋತುಗಳಲ್ಲಿ ಬೆಳೆಯಲಾಗುತ್ತದೆ. ಆದರೆ ದೇಶದ ಒಟ್ಟು ಭತ್ತ ಉತ್ಪಾದನೆಯ ಶೇ.80 ರಷ್ಟು ಖಾರಿಫ್ ಹಂಗಾಮಿನಿಂದಲೇ ಆಗುತ್ತಿದೆ ಎಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.
2022-23 ಖಾರಿಫ್ ಋತುವಿನಲ್ಲಿ ದೇಶದ ಭತ್ತದ ಉತ್ಪಾದನೆಯು ಶೇ. 6ರಷ್ಟು ಇಳಿಕೆ ಆಗಲಿದೆ. ಮಳೆಯ ಕಾರಣಗಳಿಂದಾಗಿ ಒಟ್ಟು ಉತ್ಪಾದನೆ 104.99 ಮಿಲಿಯನ್ ಟನ್ಗಳಿಗೆ ಇಳಿಕೆ ಆಗಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ.