ಶೇ.17 ರಷ್ಟು ಇಳಿಕೆ ಕಂಡ ಭತ್ತದ ಬಿತ್ತನೆ
ನವದೆಹಲಿ, ಜುಲೈ 15: ಪ್ರಸಕ್ತ ಖಾರಿಫ್ ಋತುವಿನಲ್ಲಿ ಭತ್ತದ ಬಿತ್ತನೆಯು ಜು.15ರ ವೇಳೆಗೆ ಶೇ.17.4 ರಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ದ್ವಿದಳ ಧಾನ್ಯ, ಒರಟಾದ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬಿತ್ತನೆಯ ಪ್ರಮಾಣ ಶೇ 7-9 ರಷ್ಟು ಹೆಚ್ಚಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ, ಪ್ರಸಕ್ತ ಋತುವಿನ ಆರಂಭದಿಂದ ಜುಲೈ 15 ರವರೆಗೆ 128.50 ಲಕ್ಷ ಹೆಕ್ಟೇರ್ ಭತ್ತ ಬಿತ್ತನೆ ಮಾಡಲಾಗಿದೆ. ಇದೇ ಅವಧಿಯ ಕಳೆದ ವರ್ಷದಲ್ಲಿ 155.53 ಲಕ್ಷ್ ಹೆಕ್ಟೇರ್ (ಎಲ್ಎಚ್) ನಷ್ಟು ಭತ್ತ ಬಿತ್ತನೆ ಆಗಿತ್ತು. ಈ ಕಾರಣದಿಂದ ಇದನ್ನು ಶೇ.17.4ರಷ್ಟು ಇಳಿಕೆ ಎಂದು ಅಂದಾಜಿಸಲಾಗಿದೆ.
ಎಂಬಿಎ ಪದವೀಧರ ಹಳ್ಳಿಗೆ ಬಂದ, ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡ!
ಜುಲೈ 8ಕ್ಕೆ ಹೋಲಿಕೆ ಮಾಡಿದರೆ ಕಳೆದ ಒಂದು ವಾರದಲ್ಲಿ ಭತ್ತ ಬಿತ್ತನೆ ಸುಧಾರಿಸಿದೆ. ಜುಲೈ 8ಕ್ಕೆ ದೇಶದ ಒಟ್ಟು ಭತ್ತ ಬಿತ್ತನೆಯಲ್ಲಿ ಶೇ.24 ರಷ್ಟು ಕಡಿಮೆಯಾಗಿದೆ ಎಂಬ ವರದಿ ಇತ್ತು. ಬಿತ್ತನೆ ತುಸು ಸುಧಾರಿಸಿದ ನಂತರ ಈ ವಾರದ ಕುಂಠಿತದ ಪ್ರಮಾಣ 17.4ರಷ್ಟಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
72.66 ಲಕ್ಷ ಹೆಕ್ಟೇರ್ ನಲ್ಲಿ ದ್ವಿದಳ ಧಾನ್ಯ ಬಿತ್ತನೆ
ಈ ಬಾರಿ ದ್ವಿದಳ ಧಾನ್ಯಗಳ ಬಿತ್ತನೆ ಅಧಿಕವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಋತುವಿನಲ್ಲಿ ದ್ವಿದಳ ಧಾನ್ಯಗಳನ್ನು 72.66 ಲಕ್ಷ ಹೆಕ್ಟೇರ್ ಬಿತ್ತನೆ ಮಾಡುವ ಮೂಲಕ ಈ ವರ್ಷ ಶೇ.9 ಅಧಿಕ ಬಿತ್ತನೆ ಆಗಿದೆ. 93.91 ಲಕ್ಷ ಹೆಕ್ಟೇರ್ ನಲ್ಲಿ ಒರಟು ಧಾನ್ಯಗಳ ಬಿತ್ತನೆ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 87.06 ಲಕ್ಷ ಹೇಕ್ಟೇರ್ ಬಿತ್ತನೆ ಆಗಿತ್ತು. ಅಂದರೆ ಈ ವರ್ಷ ಶೇ.8ರಷ್ಟು ಹೆಚ್ಚಾಗಿದೆ. ಅದೇ ರೀತಿ ಎಣ್ಣೆಕಾಳುಗಳ 134.04 ಲಕ್ಷ ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಆಗುವ ಮೂಲಕ (ಕಳೆದ ವರ್ಷ 124.83 ಎಲ್ಎಚ್) ಬಿತ್ತನೆಯಲ್ಲಿ ಶೇ.7.38 ಪ್ರಗತಿ ಸಾಧಿಸಲಾಗಿದೆ.
ಸೋಯಾಬೀನ್ ಬಿತ್ತನೆಯಲ್ಲಿ ಶೇ.10 ಪ್ರಗತಿ
ಹಾಲಿ ಖಾರೀಫ್ ಋತುವಿನಲ್ಲಿ ಎಣ್ಣೆಬೀಜಗಳ ಪೈಕಿ ಸೋಯಾಬೀನ್ ಒಟ್ಟು (ಹಿಂದಿನ ವರ್ಷದ ಬಿತ್ತನೆ 90.32 ಎಲ್ಎಚ್) 99.35 ಲಕ್ಷ ಹೆಕ್ಟೇರ್ ಬಿತ್ತುವ ಮೂಲಕ ಈ ವರ್ಷ ಶೇ.10 ಪ್ರಗತಿ ಆಗಿದೆ. ಈವರೆಗೆ ದೇಶದಲ್ಲಿ 102.8ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತಲಾಗಿದೆ. (ಶೇ.6.44 ಅಧಿಕ), 53.31 ಲಕ್ಷ ಹೆಕ್ಟೇರ್ ನಲ್ಲಿ ಕಬ್ಬು ಮತ್ತು 6.89ಲಕ್ಷ ಹೆಕ್ಟೇರ್ ನಲ್ಲಿ ಸೆಣಬು ಬೆಳೆಯಲಾಗಿದೆ ಎಂದು ವರದಿ ತಿಳಿಸಿದೆ.
ಎಣ್ಣೆ ಬೀಜಗಳ ಬಿತ್ತನೆ ಅಧಿಕ
ಭಾರತ ಈ ವರ್ಷ ಎಣ್ಣೆ ಬೀಜಗಳ ಬಿತ್ತನೆಯಲ್ಲಿ ಅಧಿಕ ಪ್ರಗತಿ ಸಾಧಿಸಿದೆ. ಅಂದರೆ ಈ ಬಾರಿ ದೇಶೀಯ ಉತ್ಪಾದನೆ ಹೆಚ್ಚಳವಾಗಿದ್ದು, ಚಿಲ್ಲರೆ ಬೆಲೆಗಳು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಈ ಬಾರಿ ಖಾದ್ಯ ತೈಲ ಆಮದು ಕಡಿಮೆ ಆಗಬಹುದು. ಖಾದ್ಯ ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ ಬಿತ್ತನೆಯಲ್ಲಿ ಪ್ರಗತಿ ಸ್ವಲ್ಪ ಮಟ್ಟಿಗೆ ವರದಾನವಾಗಲಿದೆ.
ಶೇ.60 ರಷ್ಟು ಖಾದ್ಯ ತೈಲ ಆಮದು
ಭಾರತ ವಾರ್ಷಿಕ ತನ್ನ ಅಗತ್ಯತೆಯಲ್ಲಿ ಶೇ.60 ಅನ್ನು ಆಮದು ಮಾಡಿಕೊಳ್ಳುತ್ತದೆ. 2020-21ರಲ್ಲಿ (ನವೆಂಬರ್-ಅಕ್ಟೋಬರ್) ಖಾದ್ಯ ತೈಲಗಳ ಆಮದು ಅಂದಾಜು ವೆಚ್ಚ 1.17 ಲಕ್ಷ ಕೋಟಿ ರೂ.. ದೇಶ ಬೇಳೆಕಾಳುಗಳನ್ನು ಸಹ ಆಮದು ಮಾಡಿಕೊಳ್ಳುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಈ ವರ್ಷ ಸಾಮಾನ್ಯ ಮುಂಗಾರು ಮುನ್ಸೂಚನೆ ನೀಡಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಖಾರಿಫ್ ಬೆಳೆಗಳ ಬಿತ್ತನೆಯಲ್ಲಿ ಸ್ವಲ್ಪ ವಿಳಂಬ ಆಗಿರುವುದು ಕಂಡು ಬಂದಿದೆ.
ಇತ್ತೀಚೆಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಅಕ್ಕಿಗೆ ಬೇಡಿಕೆ ಹೆಚ್ಚಿದ್ದು, ಭತ್ತದ ಬಿತ್ತನೆ ಹೆಚ್ಚಿಸಬೇಕಿದೆ ಎಂದಿದ್ದರು. ಅಲ್ಲದೇ ದೇಶದಲ್ಲಿ ಅಕ್ಕಿ ದಾಸ್ತಾನು ಆಗಿದ್ದು, ಸ್ಥಳೀಯವಾಗಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದರು.