ಭಾರತ: ರಾಬಿ ಬೆಳೆ ಬಿತ್ತನೆಯಲ್ಲಿ ಹೆಚ್ಚಳ, ಆರ್ಥಿಕತೆ ಸುಧಾರಣೆ: RBI
ಬೆಂಗಳೂರು, ಡಿಸೆಂಬರ್ 08: ಭಾರತದಲ್ಲಿ ಕೃಷಿ ವಲಯ ಸುಧಾರಣೆ ಕಾಣುತ್ತಿದೆ. ಚಳಿಗಾಲ (ರಾಬಿ) ಋತುವಿನ ಆರಂಭದಲ್ಲೇ ಬಿತ್ತನೆಯು ವೇಗ ಪಡೆದುಕೊಂಡಿತು. ಡಿಸೆಂಬರ್ 2ರವರೆಗೆ ದೇಶದಲ್ಲಿ ಬಿತ್ತನೆಯು ಸಾಮಾನ್ಯ ಪ್ರಮಾಣಕ್ಕಿಂತ ಶೇ.6.8 ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಹಿಂಗಾರು ಮಳೆ ಆರಂಭವಾಗುತ್ತಿದ್ದಂತೆ ರಾಬಿ ಪ್ರಮುಖ ಬೆಳೆಗಳಾದ ಗೋಧಿ, ಬಾರ್ಲಿ, ಸಾಸುವೆ, ಕಡಲೆ, ಅಗಸೆ ಬಿತ್ತನೆ ಶುರುವಾಗುತ್ತದೆ. ಈ ಪೈಕಿ ದೇಶದಲ್ಲಿ ಪ್ರಸಕ್ತ ರಾಬಿ ಹಂಗಾಮಿನಲ್ಲಿ ಮೊದಲ ಎರಡು ತಿಂಗಳಲ್ಲಿ ಇದುವರೆಗೆ ಗೋಧಿ ಬಿತ್ತನೆ ಅಧಿಕವಾಗಿದೆ. ಈ ವರ್ಷ ಗೋಧಿ ಬಿತ್ತನೆ ಶೇ.5.36 ರಷ್ಟು ಏರಿಕೆ ಆಗಿದೆ. ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಇದುವರೆಗೆ 211.62 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಗೋಧಿ ಬಿತ್ತಲಾಗಿದೆ. ಅದರಲ್ಲಿ ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಅವರು ತಿಳಿಸಿದರು.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಆರಂಭದಲ್ಲಿ ಉತ್ತಮವಾಗಿ ದೇಶದ ಖಾರಿಫ್ ಋತುವಿನಲ್ಲಿ ಕೃಷಿ ಉತ್ಪಾದನೆಯು ಮಳೆ, ಹವಾಮಾನ ವೈಪರಿತ್ಯಗಳ ಪರಿಣಾಮದಿಂದ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಆಯಿತು. ಕೃಷಿ ಸಚಿವಾಲಯದ ಅಂದಾಜಿನ ಪ್ರಕಾರ ಭಾರತದ ಒಟ್ಟು ಖಾರಿಫ್ ಬೆಳೆ ಉತ್ಪಾದನೆಯು ಕಳೆದ ವರ್ಷ ಇದ್ದ 156.04 ಮಿಲಿಯನ್ ಮೆಟ್ರಿಕ್ ಟನ್ (MMT) ನಿಂದ 149.92 ಮಿಲಿಯನ್ ಮೆಟ್ರಿಕ್ ಟನ್ಗಳಿಗೆ ಇಳಿಕೆ ಆಗಿದೆ ಎಂದರು.
ದೇಶದ ಆರ್ಥಿಕತೆ ಸ್ಥಿತಿಗತಿ ಸುಧಾರಣೆ
ಪ್ರಮುಖ ರಾಬಿ ಬೆಳೆಯಾದ ಗೋಧಿಯ ಬಿತ್ತನೆ ಅಕ್ಟೋಬರ್ನಲ್ಲಿ ಪ್ರಾರಂಭವಾಗುತ್ತದೆ. ಮರುವರ್ಷ ಮಾರ್ಚ್-ಏಪ್ರಿಲ್ನಲ್ಲಿ ಕೊಯ್ಲು ಮಾಡುತ್ತದೆ. ಈ ಋತುವಿನಲ್ಲಿ ಗೋಧಿ, ಅಕ್ಕಿ ಮತ್ತು ದ್ವಿದಳ ಧಾನ್ಯಗಳಲ್ಲದೆ, ಉದ್ದಿನ ಬೇಳೆ ಮತ್ತು ಕಡಲೆಕಾಯಿ ಮತ್ತು ಸಾಸಿವೆ ಮುಂತಾದ ಎಣ್ಣೆಕಾಳುಗಳನ್ನು ಬೆಳೆಯಲಾಗುತ್ತದೆ.
ಉತ್ತಮವಾಗಿರುವ ರಾಬಿ ಬೆಳೆ ಬಿತ್ತನೆಯಿಂದ ಅಧಿಕ ಇಳುವರಿ ಸಿಗಲಿದೆ. ಅದರಿಂದ ಬೇಡಿಕೆಯಷ್ಟು ಪೂರೈಕೆ, ರೈತರ ಹಾಗೂ ದೇಶದ ಕೃಷಿ ಆರ್ಥಿಕ ಸ್ಥಿತಿಗತಿ ಸುಧಾರಣೆ ಆಗುತ್ತದೆ. ಪ್ರಸಕ್ತದಲ್ಲಿ ಕಂಡು ಬಂದ ಹಣ್ಣದುಬ್ಬರದ ಪರಿಸ್ಥಿತಿಯು 2023-24ವರ್ಷದ ಮೊದಲ ತ್ರೈಮಾಸಿಕದ ಹೊತ್ತಿಗೆ ಸರಾಗವಾಗಲಿದೆ. ಅದೇ ವರ್ಷದ ಮಧ್ಯದ ತ್ರೈಮಾಸಿಕದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಣಕಾಸು ಮಾರುಕಟ್ಟೆಯ ಅಸ್ತಿರತೆ ಹಾಗೂ ಇನ್ನಿತರ ಕಾರಣಗಳಿಂದ ಹಣದುಬ್ಬರದಲ್ಲಿ ನಿಶ್ಚಿತತೆ ಕಂಡು ಬರುವ ಸಾಧ್ಯತೆ ಇದೆ ಎಂದು ಹೇಳಿದರು.
2022-23ರ ಸಮೀಕ್ಷೆಗಳ ಪ್ರಕಾರ, 2023-24ರ ಮೊದಲ ಅರ್ಧ ವರ್ಷದಲ್ಲಿ (ಜನವರಿ-ಜೂನ್ವರೆಗೆ) ಕೃಷಿ ಮಾತ್ರವಲ್ಲದೇ ಇನ್ನಿತರ ಉತ್ಪಾದನಾ ಕಂಪನಿಗಳ ಗ್ರಾಹಕರ ವಿಶ್ವಾಸವು ಹೆಚ್ಚಲಿದೆ. ಉತ್ಪಾದನೆ ಜೊತೆಗೆ ಮೂಲಸೌಕರ್ಯ ವಲಯದ ಸಂಸ್ಥೆಗಳು ವಹೀವಾಟು ಸುಧಾರಣೆ ಕಾಣಲಿದೆ. ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಪರಿಣಾಮದಿಂದ ಕೆಲವು ಋಣಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಯು ಇದೆ. ಎಲ್ಲ ಅಂಶಗಳು 2023-2024ನೇ ಸಾಲಿನಲ್ಲಿ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಶಕ್ತಿಕಾಂತ್ ದಾಸ್ ವಿವರಿಸಿದರು.