ಮುದ್ದೆ ಚರ್ಮ ರೋಗದಿಂದ ಪಶುಗಳನ್ನು ರಕ್ಷಿಸಲು ಸಲಹೆಗಳು
ಬೆಂಗಳೂರು, ಸೆಪ್ಟೆಂಬರ್ 03: ಕಲಬುರಗಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಉದ್ಯಮಕ್ಕೆ ಮುದ್ದೆ ಚರ್ಮ ರೋಗದ ಭೀತಿ ಎದುರಾಗಿದೆ. ಪಶುಗಳಿಗೆ ವೈರಸ್ನಿಂದ ಬರುವ ಇದು ಸಾಂಕ್ರಾಮಿಕ ರೋಗವಾಗಿದೆ.
ಮುದ್ದೆ ಚರ್ಮ ವೈರಸ್ ರೋಗ (Lumpy Skin Disease)ದಿಂದ ಪಶುಗಳನ್ನು ಕಾಪಾಡಿಕೊಳ್ಳಲು ರೈತರಿಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ. ರೈತರು ಮುಂಜಾಗ್ರತಾ ಹಾಗೂ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.
ರೈತರು ಈ ರೋಗದ ಬಗ್ಗೆ ಭಯಪಡದೇ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕು. ರೋಗಗ್ರಸ್ಥ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅವುಗಳಿಗೆ ಯಾವುದೇ ಹಾನಿಯಾಗದಂತೆ ತಡೆಯಬಹುದಾಗಿದೆ. ನೆರೆಯ ರಾಜ್ಯಗಳಿಂದ ಹರಡಿರುವ ಈ ರೋಗಕ್ಕೆ ಜಾನುವಾರುಗಳು ತುತ್ತಾದರೆ ಹಾಲಿನ ಇಳುವರಿ ಕಡಿಮೆ ಆಗುತ್ತದೆ.
ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಮುದ್ದೆ ಚರ್ಮ ರೋಗ ಮೊದಲು ಒಡಿಶಾದಲ್ಲಿ ಕಂಡುಬಂದಿತು. ನಂತರ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿತು. ಬಳಿಕ ಯಾದಗಿರಿ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಗೆ ಹರಡಿತು.

ಮುದ್ದೆ ಚರ್ಮ ರೋಗದ ಲಕ್ಷಣಗಳು
ಮುದ್ದೆ ಚರ್ಮ ರೋಗವು ಪಶುಗಳಿಗೆ ಕ್ಯಾಪ್ರಿ ಪಾಕ್ಸ್ ಎಂಬ ವೈರಸ್ನಿಂದ ಬರುತ್ತದೆ. ಈ ರೋಗ ಎತ್ತು, ಆಕಳು, ಎಮ್ಮೆ ಮತ್ತು ಕರುಗಳಲ್ಲಿ ಮಾತ್ರ ಕಾಣಿಸುತ್ತದೆ. ಈ ವೈರಾಣು ನೊಣ, ಸೊಳ್ಳೆ ಹಾಗೂ ಉಣ್ಣೆ ಕಚ್ಚುವ ಮೂಲಕ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಿಗೆ ಹರಡುತ್ತದೆ. ಮಿಶ್ರತಳಿಗಳು ಹಾಗೂ ಹೆಚ್ಚು ಹಾಲು ಕೊಡುವ ಆಕಳು ಮತ್ತು ಕರುಗಳಿಗೆ ಅತಿ ಹೆಚ್ಚಾಗಿ ಈ ರೋಗ ಭಾದಿಸುತ್ತದೆ. ಲಂಪಿ ಸ್ಕಿನ್ ಡಿಸೀಸ್ ಎಂದು ಕರೆಯಲ್ಪಡುವ ಈ ವೈರಸ್ ರೋಗ ಅತಿ ವೇಗವಾಗಿ ಒಂದು ಜಾನುವಾರದಿಂದ ಇನ್ನೊಂದಕ್ಕೆ ಹರಡುತ್ತದೆ.

ಜ್ವರ, ಚರ್ಮದ ಮೇಲೆ ಗಡ್ಡೆ
2 ರಿಂದ 3 ದಿನಗಳವರೆಗೆ ಸಾಧಾರಣ ಜ್ವರ ಪಶುಗಳಿಗೆ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳ ಚರ್ಮದ ಮೇಲೆ ಚಿಕ್ಕ ಗಡ್ಡೆಗಳಾಗುತ್ತದೆ, ಗಂಟು ಕಟ್ಟುತ್ತದೆ. ರೂಪಾಯಿ ನಾಣ್ಯದಷ್ಟು ಚರ್ಮದ ಮೇಲೆ ಹುಣ್ಣು ಬೀಳುವುದು ಈ ಕಾಯಿಲೆಯ ಮುಖ್ಯ ಲಕ್ಷಣಗಳಾಗಿವೆ. ಬಾಯಿ ಹಾಗೂ ಉಸಿರಾಟದ ನಾಳದಲ್ಲಿ ಗಾಯಗಳಾಗಬಹುದು, ಜಾನುವಾರು ಬಡಕಲಾಗುವುದು ಮತ್ತು ಗರ್ಭಧರಿಸಿದ ದನಗಳಲ್ಲಿ ಗರ್ಭಪಾತವಾಗಬಹುದು. ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ಜಾನುವಾರಗಳು ಸಾವನ್ನಪ್ಪಬಹುದು.

ಹತೋಟಿ ಕ್ರಮಗಳ ಮಾಹಿತಿ
ಮುದ್ದೆ ಚರ್ಮ ರೋಗ ಬಂದಿರುವ ಜಾನುವಾರುಗಳನ್ನು ಉಳಿದ ಆರೋಗ್ಯವಂತಹ ಜಾನುವಾರುಗಳಿಂದ ಬೇರ್ಪಡಿಸಬೇಕು. ಜಾನುವಾರುಗಳ ಮೈ ಮೇಲೆ ಚಿಕ್ಕ-ಚಿಕ್ಕ ಗಡ್ಡೆಗಳು ಕಾಣಿಸಿಕೊಂಡಿದ್ದರೆ ದನದ ಕೊಟ್ಟಿಗೆಯಲ್ಲಿ ಕಟ್ಟದೆ ಹೊರಗಡೆ ಕಟ್ಟಬೇಕು. ನೊಣ, ಸೊಳ್ಳೆ ಹಾಗೂ ಉಣ್ಣೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ಜಾನುವಾರಗಳಿಗೆ ಅತಿಯಾಗಿ ಕಚ್ಚುತ್ತವೆ. ದಪ್ಪನೆಯ ಸೊಳ್ಳೆ ಪರದೆಯ ಒಳಗಡೆ ಜಾನುವಾರುಗಳನ್ನು ಕಟ್ಟಬೇಕು.

ಪಶುಗಳ ಸಾಗಾಟವನ್ನು ನಿಲ್ಲಿಸಿ
ಬೇವಿನ ಎಲೆಗಳ ಹೊಗೆಯಿಂದ ಸೊಳ್ಳೆಗಳ ಕಡಿತವನ್ನು ನಿಯಂತ್ರಿಸಿ. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಜಾನುವಾರುಗಳ ಸಾಗಾಟ ನಿಲ್ಲಿಸಿ. ರೋಗ ಬಂದಂತಹ ಪ್ರದೇಶದಿಂದ ಯಾವುದೇ ಜಾನುವಾರುಗಳ ಮಾರಾಟ /ಖರೀದಿ ಮಾಡಬಾರದು. ಜಾನುವಾರುಗಳನ್ನು ಕಟ್ಟುವಂತಹ ಸ್ಥಳ, ಹಗ್ಗ, ಸರಪಳಿ ಅಥವಾ ಇತ್ಯಾದಿ ವಸ್ತುಗಳನ್ನು ಕ್ರಿಮಿನಾಶಕಗಳಿಂದ ಸ್ವಚ್ಚಗೊಳಿಸಬೇಕು. ಮುದ್ದೆ ರೋಗದ ಲಕ್ಷಣಗಳು ಕಂಡ ಕೂಡಲೇ ಸಮೀಪದ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಬೇಕು. ಈ ಕಾಯಿಲೆಗೆ ಲಕ್ಷಣದ ಅನುಗುಣವಾಗಿ ಔಷಧ ಲಭ್ಯವಿದ್ದು, ಸಾವಿನ ಪ್ರಮಾಣ ಕಡಿಮೆ ಇರುತ್ತದೆ. ಆದರೂ ಮುಂಜಾಗ್ರತೆಗಾಗಿ ಜಾನುವಾರುಗಳಿಗೆ ತಮ್ಮ ಸಮೀಪದ ಪಶು ಚಿಕಿತ್ಸಾ ಸಂಸ್ಥೆಯಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.












Click it and Unblock the Notifications