ರೈತರಿಗಾಗಿ 'ಮಣ್ಣಿನ ಮಗ' ಗೌಡ್ರರಿಂದ ಉಪವಾಸ ಸತ್ಯಾಗ್ರಹ
ನವದೆಹಲಿ, ಜುಲೈ 25: ಸಾಲದ ಶೂಲಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿಲ್ಲ. ರೈತರ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸದಿರುವುದನ್ನು ಖಂಡಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದಾರೆ.
ನವದೆಹಲಿಯ ಜಂತರ್-ಮಂತರ್ನಲ್ಲಿ ಸೋಮವಾರ (ಜುಲೈ 27) ದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
ಯಾರಿಗೂ ಪುರುಸೊತ್ತಿಲ್ಲ : ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ರೈತರು ಬೆಳೆ ನಷ್ಟ, ಸಾಲಬಾಧೆ, ಬೆಲೆ ಕುಸಿತ ಸೇರಿದಂತೆ ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನ್ನದಾತನ ಬಗ್ಗೆ ಮಾತನಾಡಲು ಯಾರಿಗೂ ಪುರುಸೊತ್ತಿಲ್ಲ ಎಂದು ದೇವೇಗೌಡರು ವ್ಯಥೆ ವ್ಯಕ್ತಪಡಿಸಿದರು. [ಒಂದೇ ದಿನ 13 ರೈತರ ಆತ್ಮಹತ್ಯೆ, ಸಾವಿನಲ್ಲೂ ರಾಜ್ಯ ದಾಖಲೆ]

ರೈತರ ಬಗ್ಗೆ ಚರ್ಚಿಸಲು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ . ಹೀಗಾಗಿ ರೈತರ ಬಗ್ಗೆ ಚರ್ಚಿಸಲು ಸಮಯ ನಿಗದಿಪಡಿಸುವವರೆಗೂ ನಾನು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ. ಆಡಳಿತ ಪಕ್ಷದ ನಾಯಕರು ಇಲ್ಲವೇ ಸ್ಪೀಕರ್ ಅವರು ಕರೆಯುವವರೆಗೂ ಉಪವಾಸ ಮುಂದುವರೆಸುತ್ತೇನೆ ಎಂದಿದ್ದಾರೆ.[ಉತ್ತರ ಕರ್ನಾಟಕದಲ್ಲಿ ಮೋಡ ಬಿತ್ತನೆ, ಕೃತಕ ಮಳೆ?]
ಎರಡೂ ರಾಷ್ಟ್ರೀಯ ಪಕ್ಷಗಳ ಹಿತಾಸಕ್ತಿಯಿಂದ ಅನ್ನದಾತನ ಬದುಕು ಅಯೋಮಯವಾಗಿದೆ. ಸತ್ವಯುತವಾದ ಚರ್ಚೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ನಮ್ಮಂಥ ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳ ಸದಸ್ಯರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರೈತರ ಮನೆಗೆ ಭೇಟಿ ಕೊಟ್ಟ ಮೇಲೆ ಸಿದ್ದರಾಮಯ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.ಅದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕರ್ನಾಟಕದ ರೈತರ ಮನೆಗೆ ಭೇಟಿ ನೀಡಲು ಇನ್ನೂ ಮುಹೂರ್ತ ಸಿಕ್ಕಿಲ್ಲ. ರೈತರ ಸಾವಿನ ಸಂಖ್ಯೆ ಏರುತ್ತಿರುವುದು ತುಂಬಾ ದುಃಖಕರ ಸಮಾಚಾರ ಎಂದು ದೇವೇಗೌಡರು ನೊಂದುಕೊಂಡರು.
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಪಕ್ಷಗಳು ಇಂದು ಮೋಸ ಮಾಡಲು ಹೊರಟಿವೆ. ಮುಂದೆ ಇದೇ ಪರಿಸ್ಥಿತಿ ಮುಂದುವರೆದರೆ ಜನತೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.












Click it and Unblock the Notifications