ಹರಿಯಾಣದಲ್ಲಿ 13 ರೈತರ ಮೇಲೆ ಪ್ರಕರಣ ದಾಖಲು
ಚಂಡೀಗಢ, ಡಿಸೆಂಬರ್ 23: ಹರಿಯಾಣ ಮುಖ್ಯಮಂತ್ರಿ ಎಂ.ಎಲ್. ಖತ್ತರ್ ಬೆಂಗಾವಲು ವಾಹನ ತಡೆದು, ವಾಹನದ ಮೇಲೆ ಕೋಲುಗಳನ್ನು ತೂರಿದ ಕಾರಣ ಹದಿಮೂರು ರೈತರ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಯತ್ನ, ಗಲಭೆ ಸೃಷ್ಟಿ ಸೇರಿದಂತೆ ವಿವಿಧ ಆಪಾದನೆಗಳಡಿಯಲ್ಲಿ 13 ಮಂದಿ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಮಂಗಳವಾರ ಹರಿಯಾಣದಲ್ಲಿ ರೈತರ ಗುಂಪು ಪ್ರತಿಭಟನೆ ಕೈಗೊಂಡಿತ್ತು. ಈ ಸಂದರ್ಭ ಅಂಬಾಲಾ ನಗರಕ್ಕೆ ಮುಂದಿನ ಸ್ಥಳೀಯ ಚುನಾವಣೆ ಕಾರಣ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಖತ್ತರ್ ತೆರಳುತ್ತಿದ್ದು, ಅಗ್ರಸೇನ್ ಚೌಕ್ ಬಳಿ ಅವರ ಬೆಂಗಾವಲು ವಾಹನಕ್ಕೆ ತಡೆಯೊಡ್ಡಿದ ರೈತರು ಸಿಎಂ ವಿರುದ್ಧ ಕಪ್ಪು ಧ್ವಜ ಹಾರಿಸಿದ್ದರು. ಕಾಯ್ದೆಗಳನ್ನು ರದ್ದುಪಡಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು ಎಂದು ತಿಳಿದುಬಂದಿದೆ.

ಇದೀಗ ಭದ್ರತಾ ಕಾರಣಗಳೊಂದಿಗೆ ಕೆಲವು ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೆಲವರು ಸಿಎಂ ವಾಹನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು. ಇನ್ನೂ ಕೆಲವರು ಕೋಲುಗಳನ್ನು ವಾಹನದ ಮೇಲೆ ತೂರಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 147 (ಶಸ್ತ್ರಾಸ್ತ್ರದೊಂದಿಗೆ ಗಲಭೆ ಸೃಷ್ಟಿ), 149 (ಕಾನೂನು ವಿರುದ್ಧ ಚಟುವಟಿಕೆ), 353 (ಸಾರ್ವಜನಿಕ ಸೇವೆಯಲ್ಲಿರುವವರ ಮೇಲೆ ಹಲ್ಲೆ), 506 (ಬೆದರಿಕೆ) ಅಡಿಯಲ್ಲಿ ಹದಿಮೂರು ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications