ಉಪಚುನಾವಣೆ ಬಳಿಕ ಋಣಮುಕ್ತ ಪತ್ರಗಳು ರೈತರ ಮನೆಬಾಗಿಲಿಗೆ : ಸಿಎಂ
ಬೆಂಗಳೂರು, ಅಕ್ಟೋಬರ್ 23: ಕುಮಾರಸ್ವಾಮಿ ಅವರ ಬಹುದೊಡ್ಡ ಭರವಸೆ ಸಾಲಮನ್ನಾ ಇನ್ನೂ ಫಲಾನುಭವಿಗಳಿಗೆ ತಲುಪದ ಬಗ್ಗೆ ಇಂದಿನ ಮುಖ್ಯಮಂತ್ರಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುನ್ನೆಲೆಗೆ ಬಂತು.
ಉಪಚುನಾವಣೆ ಮುಗಿದ ನಂತರ ಮಾಧ್ಯಮಗಳ ಮೂಲಕ ವಿವರವಾಗಿ ಜಾಹೀರಾತು ನೀಡಿ ಸಾಲಮನ್ನಾದ ಪೂರ್ಣ ಮಾಹಿತಿಯನ್ನು ರೈತರಿಗೆ ಒದಗಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು
ಮೈತ್ರಿ ಸರ್ಕಾರಕ್ಕೆ 150 ವರ್ಷ ತುಂಬಿದ ಕಾರಣ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಈ ವಿಷಯವನ್ನು ಹೇಳಿದರು.
ಈಗಾಗಲೇ ಬ್ಯಾಂಕುಗಳನ್ನು ನಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಸಾಲಮನ್ನಾಕ್ಕೆ ಇದ್ದ ಅಡೆತಡೆಗಳನ್ನೆಲ್ಲಾ ನಿವಾರಿಸಲಾಗಿದೆ. ಉಪಚುನಾವಣೆ ಮುಗಿಯಲಿ ಎಂದು ನಾವು ಕಾಯುತ್ತಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೆ ಭರವಸೆ ನೀಡಿದಂತೆ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಹೇಳಿದರು.
ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ
53 ಸಾವಿರ ಕೋಟಿ ಕೃಷಿ ಸಾಲಮನ್ನಾ ಮಾಡಲಾಗುವುದು. 44 ಲಕ್ಷ ಕುಟುಂಬಗಳು ಕೃಷಿ ಸಾಲದ ಲಾಭವನ್ನು ಪಡೆಯಲಿವೆ ಎಂದು ಸಿಎಂ ಪುನರ್ ಉಚ್ಚರಿಸಿದರು.
ಮಾಹಿತಿ ಸಂಗ್ರಹ ನಡೆಯುತ್ತಿದೆ
ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈಗಾಗಲೇ 15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲಗಳ ಮಾಹಿತಿ ಲಭ್ಯವಾಗಿದೆ. ರೈತರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಎಲ್ಲ ಅರ್ಹ ರೈತರಿಗೆ ಪ್ರಯೋಜನ ದೊರಕಿಸಲು ಸಾಲಗಳ ಮಾಹಿತಿಯನ್ನು ಭೂಮಿ ನಿರ್ವಹಣಾ ಕೋಶದ ನೆರವಿನಿಂದ ಅಭಿವೃದ್ಧಿ ಪಡಿಸಿದ ತಂತ್ರಾಂಶದ ಸಹಾಯದೊಂದಿಗೆ ಪರಿಶೀಲಿಸಲಾಗುತ್ತದೆ.
ಬ್ಯಾಂಕ್ ಅಧಿಕಾರಿಗಳಿಗೆ ತರಬೇತಿ
ಸಹಕಾರಿ ಬ್ಯಾಂಕುಗಳ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ವಾಣಿಜ್ಯ ಬ್ಯಾಂಕುಗಳ ಅಧಿಕಾರಿಗಳಿಗೆ ಮುಂದಿನವಾರ ತರಬೇತಿ ನೀಡಲಾಗುವುದು. ಸಹಕಾರಿ ಬ್ಯಾಂಕುಗಳಲ್ಲಿ ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ಮಾಹಿತಿ ಅಪ್ಲೋಡ್ ಮಾಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
ಹೊಸ ಕ್ರೂಡೀಕರಣ ವ್ಯವಸ್ಥೆ
ಸರ್ಕಾರವು ಸಾಲಮನ್ನಾ ಯೋಜನೆಗೆ ಪ್ರತ್ಯೇಕ ಸಂಪನ್ಮೂಲ ಕ್ರೋಢೀಕರಣ ವ್ಯವಸ್ಥೆ ರೂಪಿಸಿದೆ. ಆಯವ್ಯಯದ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿದೆ.
ಋಣ ಪರಿಹಾರ ಕಾಯ್ದೆ ರಾಷ್ಟ್ರಪತಿಗಳ ಬಳಿ
ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಬಡ ಜನರಿಗೆ ಬಡ್ಡಿ ವ್ಯಾಪಾರಿಗಳು, ಲೇವಾದೇವಿದಾರರ ಕಿರುಕುಳದಿಂದ ಮುಕ್ತಿ ದೊರಕಿಸಲು ಋಣ ಪರಿಹಾರ ಕಾಯ್ದೆ 2018ನ್ನು ರೂಪಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನು ನಿರೀಕ್ಷಿಸಲಾಗುತ್ತಿದೆ. ಕಾಯ್ದೆಯ ರೂಪುರೇಷೆಗಳನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹಾಗೂ ಗೃಹ ಸಚಿವರಿಗೆ ಖುದ್ದು ಭೇಟಿ ಮಾಡಿ ವಿವರಿಸಲಾಗಿದೆ.