ರಸಗೊಬ್ಬರ ವೆಚ್ಚ ಹೆಚ್ಚಳ, ಜಾಗತಿಕವಾಗಿ ಧಾನ್ಯ ಉತ್ಪಾದನೆ ಇಳಿಕೆ
ಬೆಂಗಳೂರು ಜು.10: ರಸಗೊಬ್ಬರದ ಮೇಲಿನ ಅಧಿಕ ವೆಚ್ಚ ಮುಂತಾದ ಕಾರಣಗಳಿಂದ ಪ್ರಸಕ್ತ ವರ್ಷ ಜಾಗತಿಕವಾಗಿ ಅಕ್ಕಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಇದು ಆಹಾರ ಭದ್ರತೆ ಹಾಗೂ ಹಣದುಬ್ಬರ ನಿಯಂತ್ರಣ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿದು ಬಂದಿದೆ.
ಕಾನಿಕಾರ್ನ್ ಬ್ಯಾಂಕ್ ಪಿಎಲ್ಸಿ ಸಂಶೋಧನಾ ಘಟಕದ ಪ್ರಕಾರ, ಬೆಳೆಗಳಿಗೆ ಒದಗಿಸುವ ಪೋಷಕಾಂಶವಾದ ರಸಗೊಬ್ಬರ, ಕೀಟನಾಶಕದಂತಹ ಸಾಮಾಗ್ರಿಗಳ ಬೆಲೆ ಹೆಚ್ಚಳವು ಉತ್ಪಾದನೆ ಮೇಲೆ ಪ್ರಭಾವ ಉಂಟು ಮಾಡಲಿದೆ. ಹೀಗಾಗಿ ಭತ್ತದ ಬೆಳೆಯ ಅತಿ ದೊಡ್ಡ ರಫ್ತುದಾರ ಥೈಲ್ಯಾಂಡ್ನಲ್ಲಿ ಈ ಸಲ ಉತ್ಪಾದನೆ ಕುಸಿಯಲಿದೆ.
ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಫಿಲಿಫೈನ್ಸ್ನಲ್ಲಿ ಸಹ ಅಕ್ಕಿಗೆ ಬೇಡಿಕೆ ಹೆಚ್ಚಾಗಬಹುದು. ನೆರೆ ರಾಷ್ಟ್ರ ಚೀನಾದಲ್ಲಿ ಬೆಳೆಗಳಿಗೆ ಕೀಟಗಳ ಬಾಧೆ ಮತ್ತು ರಸಗೊಬ್ಬರ ಬೆಲೆ ಏರಿಳಿತದಿಂದ ನಿರೀಕ್ಷಿತ ಉತ್ಪಾದನೆ ಕಷ್ಟ ಸಾಧ್ಯ ಎಂದು ಅಂದಾಜಿಸಲಾಗಿದೆ.
ಈ ಕಾರಣಗಳಿಂದ ಮುಂಗಾರು ಚುರುಕಾಗಿರುವ ಭಾರತದಲ್ಲಿ ಈ ಭಾರೀ ಉತ್ಪಾದನೆ ಹೆಚ್ಚಾಗಬಹುದು. ಜಾಗತಿಕವಾಗಿ ಅಕ್ಕಿ ಬೇಡಿಕೆ, ಆಮದು ಮತ್ತು ಉತ್ಪಾದನೆಯ ದೃಷ್ಟಿ ಭಾರತದತ್ತ ನೆಟ್ಟಿದೆ ಎಂದು ಸಂಶೋಧನಾ ಘಟಕ ಉಲ್ಲೇಖಿಸಿದೆ.
ಪ್ರಪಂಚದಲ್ಲೇ ಏಷ್ಯಾ ಖಂಡ ಅಕ್ಕಿ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಅಕ್ಕಿ ಬಳಕೆಯಲ್ಲೂ ಸಹ ಇದೇ ಖಂಡ ಮುಂಚೂಣಿಯಲ್ಲಿದೆ. ಇದು ರಾಜಕೀಯ, ಆರ್ಥಿಕ ಸ್ಥಿರತೆ ಮೇಲೆ ಪ್ರಭಾವ ಬೀರುತ್ತದೆ. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ರಷ್ಯಾ, ಉಕ್ರೇನ್ ನಡುವಿನ ಯುದ್ಧದ ಕಾರ್ಮೋಡ ಇತರ ದೇಶಗಳ ಮೇಲೂ ಬಿದ್ದಿದೆ.

ರಷ್ಯಾ-ಉಕ್ರೇನ್ ಯುದ್ಧ ಪರಿಣಾಮ
ರಸಗೊಬ್ಬರ ಆಮದು, ರಫ್ತು, ಬೆಲೆ ಏರಿಕೆ ಮೇಲೆ ಯುದ್ಧದ ಪರಿಣಾಮ ಉಂಟಾಗಿದೆ. ಗೋಧಿ ಮತ್ತು ಜೋಳದ ಬೆಲೆಗಳು ಏರಿಕೆ ಆಗಿವೆ. 2008ರಲ್ಲಿ 1,000ಡಾಲರ್ ಇದ್ದ ಬೆಲೆ ಪೂರೈಕೆ ಅಮರ್ಪಕತೆಯಿಂದಾಗಿ ಇದೀಗ ಆ ಬೆಲೆಗಳು ದುಪಟ್ಟಿ ಪ್ರಮಾಣದಲ್ಲಿ ಏರಿದೆ.ಈ ವರ್ಷ ಗೋಧಿ, ಜೋಳ, ಅಡುಗೆ ಎಣ್ಣೆಯ ಆಮದು ರಫ್ತು ಸುಧಾರಿಸಿದಂತೆ ಕಂಡರೂ ಸಹ ಕೃಷಿ ಉತ್ಪಾದನೆ ಹವಾಮಾನ ಮೇಲೆ ನಿರ್ಧರಿತವಾಗಿದೆ. ಹೀಗಾಗಿ ಈ ವರ್ಷ ಅಕ್ಕಿ ಸೇರಿದಂತೆ ಇನ್ನಿತರ ಬೆಳೆಗಳ ಉತ್ಪಾದನೆ, ಪೂರೈಕೆ ಕುರಿತು ಸ್ಪಷ್ಟತೆ ಸಿಗಬೇಕಿದೆ.

ನಿರೀಕ್ಷೆಯಂತೆ ಭಾರತದಲ್ಲಿ ಅಕ್ಕಿ ಉತ್ಪಾದನೆ ಸಾಧ್ಯತೆ
ಭಾರತ ಶೇ.40ರಷ್ಟು ಅಕ್ಕಿಯನ್ನು ಬೇರೆಗೆ ರಫ್ತುಮಾಡುತ್ತದೆ. ಆದರೆ ಹವಾಮಾನ ಬದಲಾವಣೆ, ಜಾಗತಿಕ ಬೇಡಿಕೆ ಹೆಚ್ಚಳ, ಬೆಲೆ ಏರಿಕೆಯ ಒತ್ತಡ ಭಾರತದ ಅಕ್ಕಿ ಉತ್ಪಾದನೆ ಮೇಲೆ ಉಂಟಾಗಲಿದೆ. ಹೀಗಿದ್ದರು ಭಾರತದಲ್ಲಿ ಈ ಭಾರಿ ಅಕ್ಕಿ ಉತ್ಪಾದನೆಯು ನಿರೀಕ್ಷಿತ ಮಟ್ಟದಲ್ಲಿದೆ ಎಂದು ಸಂಶೋಧಕ ಮತ್ತು ದಿ ರೈಸ್ ಟ್ರೇಡರ್ ಉಪಾಧ್ಯಕ್ಷ ವಿ.ಸುಬ್ರಮಣಿಯನ್ ಹೇಳಿದ್ದಾರೆ.

ಗೋಧಿ ಇಳುವರಿ ಕಡಿಮೆ ಆಗುವ ಸಾಧ್ಯತೆ
ಅಕ್ಕಿ ರಫ್ತು, ಉತ್ಪಾದನೆ ಬಳಿಕ ನಂತರದ ಸ್ಥಾನದಲ್ಲಿ ಗೋಧಿ ಬೆಳೆ ಇದೆ. ಆಹಾರ ಭದ್ರತೆಯ ಅಪಾಯ ಕಾರಣದಿಂದ ಭಾರತ ಈಗಾಗಲೇ ಗೋಧಿಯ ರಫ್ತಿನ ವೇಗಕ್ಕೆ ಕಡಿವಾಣ ಹಾಕಿದೆ. ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿರಫ್ತು ಮಾಡುತ್ತಿರುವ ಭಾರತವು ಗೋಧಿ ರಫ್ತು ಪ್ರಮಾಣ ಹೆಚ್ಚಿಸುವುದನ್ನೆ ಇತರ ರಾಷ್ಟ್ರಗಳು ಕಾಯುತ್ತಿವೆ. ಆದರೆ ಈ ಎಲ್ಲ ನಿರೀಕ್ಷೆಗಳು ಈ ಭಾರಿ ಮುಂಗಾರು ಹಂಗಾಮಿನ ಬೆಳೆ ಬಿತ್ತನೆ, ಮಳೆ ಮೇಲೆ ಅವಲಂಬಿತವಾಗಿದೆ ಎಂದು ತಿಳಿದು ಬಂದಿದೆ.

ರಸಗೊಬ್ಬರಗಳ ಅಭಾವ
ರಷ್ಯಾ-ಉಕ್ರೇನ್ ಯುದ್ದದ ನಂತರ ಆರಂಭದಲ್ಲಿ ರಸಗೊಬ್ಬರಗಳ ಅಭಾವ ಉಂಟಾಯಿತು ಎಂದರು ಸಹ ದುಬಾರಿ ಬೆಲೆ ಏರಿಕೆ ಮಧ್ಯೆ ರೈತರಿಗೆ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆ ಆಗಿದೆ ಎಂದು ಕಾನಿಕಾರ್ನ್ ಬ್ಯಾಂಕ್ ಪಿಎಲ್ ಸಿ ಸಂಶೋಧನಾ ಘಟಕದ ವರದಿ ಮಾಡಿದೆ.
ಪಿಲಿಫೈನ್ಸ್ ದೇಶವು, ರಸಗೊಬ್ಬರ ಬೆಲೆ ಏರಿಕೆಯಿಂದಾಗಿ ಈ ವರ್ಷ ಭತ್ತದ ಇಳುವರಿ ಕುಂಠಿತಗೊಳ್ಳಲಿದೆ. ಇದರಿಂದ ಅಕ್ಕಿ ಬೇಡಿಕೆ ಹೆಚ್ಚಾಗಿ ಬೆಲೆ ಏರಬಹುದು. ಹೀಗಾಗಿ ತನ್ನ ಬಜೆಟ್ ನ ಸುಮಾರು 16ರಷ್ಟು ಹಣವನ್ನು ಪ್ರಮುಖ ಆಹಾರ ಧಾನ್ಯಗಳ ಖರೀದಿಸಲು ವಿನಿಯೋಗಿಸುವ ಪ್ರಮೇಯ ಬರಲಿದೆ. ಇದು ಹಣದುಬ್ಬರಕ್ಕೂ ಕಾರಣವಾಗಲಿದೆ ಎಂದು ಅಂದಾಜಿಸಿದೆ.
ದೇಶದ ಅತಿ ದೊಡ್ಡ ಅಕ್ಕಿ ಬೆಳೆಗಾರ ದೇಶ ಚೀನಾದಲ್ಲಿ ಈ ವರ್ಷ ಕೀಟಬಾಧೆ, ಬೆಳೆ ರೋಗ ಉಲ್ಬಣದಿಂದಾಗಿ ಇಳುವರಿ ಕಮ್ಮಿ ಆಗುವ ಸಾಧ್ಯತೆ ಇದೆ. ವಿಯೆಟ್ನಾಂ ನಲ್ಲಿ ಆಹಾರ ಧಾನ್ಯಗಳ ಸಾಗಾಣೆ, ಉತ್ಪಾದನೆಯಿ ಕೊರತೆಯಿಂದಾಗಿ ಬೆಲೆ ಹಚ್ಚಳದ ಆರ್ಥಿಕ ಸಮಸ್ಯೆ ಉಂಟಾಗಬಹುದು ಎಂದು ಸಂಶೋಧಕ ಮತ್ತು ದಿ ರೈಸ್ ಟ್ರೇಡರ್ ಉಪಾಧ್ಯಕ್ಷ ವಿ.ಸುಬ್ರಮಣಿಯನ್ ಮಾಹಿತಿ ನೀಡಿದ್ದಾರೆ.












Click it and Unblock the Notifications