ಅ.16ಗೆ FAOಗೆ 75 ವರ್ಷ; ಹಸಿವು, ಅಪೌಷ್ಟಿಕತೆ ನಿವಾರಣೆಯೇ ಗುರಿ
ಆಹಾರ ಮತ್ತು ಕೃಷಿ ಸಂಸ್ಥೆ (FAO) ಆರಂಭವಾಗಿ ಇದೇ ಅಕ್ಟೋಬರ್ 16ಕ್ಕೆ 75 ವರ್ಷ ತುಂಬಲಿದೆ. ಅದರ ಅಂಗವಾಗಿ ಭಾರತದಲ್ಲಿ 75 ರೂಪಾಯಿ ಸ್ಮಾರಕ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಎಂಟು ಪ್ರಮುಖ ಬೆಳೆಗಳ 17 ಜೈವಿಕ ತಳಿಗಳನ್ನೂ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಪ್ರಧಾನಿ ಕಚೇರಿ ತಿಳಿಸಿದೆ.
ವಿಶ್ವದೆಲ್ಲೆಡೆ ಸೂಕ್ಷ್ಮ ಹಾಗೂ ದುರ್ಬಲ ವರ್ಗದ ಸಮುದಾಯಗಳನ್ನು ಆರ್ಥಿಕವಾಗಿ ಮತ್ತು ಪೌಷ್ಟಿಕವಾಗಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ FAO ಕೈಗೊಂಡಿರುವ ಕಾರ್ಯ ಯೋಜನೆಗಳಿಗೆ ಸರಿಸಮನಾದುದು ಯಾವುದೂ ಇಲ್ಲ. ಇಂಥ ಸಂಸ್ಥೆಯೊಂದಿಗೆ ಭಾರತ ಐತಿಹಾಸಿಕವಾದ ಸಂಬಂಧ ಹೊಂದಿದೆ. 1956-1967ರ ಅವಧಿಯಲ್ಲಿ FAO ಮಹಾನಿರ್ದೇಶಕರಾಗಿ ಭಾರತೀಯ ನಾಗರೀಕ ಸೇವಾ ಅಧಿಕಾರಿ ಡಾ.ವಿನಯ್ ರಾಜನ್ ಸೇನ್ ಸೇವೆ ಸಲ್ಲಿಸಿದ್ದರು. ಇದೀಗ 2020ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ "ವಿಶ್ವ ಆಹಾರ ಯೋಜನೆ: WFP ಆರಂಭವಾಗಿದ್ದೂ ಇವರ ಸೇವಾ ಅವಧಿಯಲ್ಲಿಯೇ ಎಂಬುದು ಗಮನಾರ್ಹ. ಮುಂದೆ ಓದಿ...

ಅಪೌಷ್ಟಿಕತೆ ನಿವಾರಣೆ
ಭಾರತದಲ್ಲಿ ಸುಮಾರು 100 ಮಿಲಿಯನ್ ಜನರನ್ನು ಗುರಿಯಾಗಿಸಿಕೊಂಡು ಬೆಳವಣಿಗೆಯ ಕುಂಠಿತ ಕಡಿಮೆ ಮಾಡಲು, ಅಪೌಷ್ಟಿಕತೆ ನಿವಾರಿಸಲು, ರಕ್ತಹೀನತೆ ತಗ್ಗಿಸಲು ಮತ್ತು ನವಜಾತ ಶಿಶುಗಳ ತೂಕ ಹೆಚ್ಚಿಸಲು ಮಹತ್ವಾಕಾಂಕ್ಷೆಯ 'ಪೋಷಣ್' ಅಭಿಯಾನವನ್ನು ಕೈಗೆತ್ತುಕೊಂಡಿದೆ. ಅಪೌಷ್ಟಿಕತೆ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಸುಮಾರು ಎರಡು ಬಿಲಿಯನ್ ಜನರು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಸಾವಿನಲ್ಲಿ ಸುಮಾರು ಶೇಕಡಾ 45ರಷ್ಟು ಅಪೌಷ್ಟಿಕತೆಗೆ ಸಂಬಂಧಿಸಿದವು. ಹಾಗಾಗಿ ವಿಶ್ವ ಸಂಸ್ಥೆ ತನ್ನ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದನ್ನಾಗಿ ಪರಿಗಣಿಸಿದೆ.

ಊಟದ ತಟ್ಟೆ ಪೌಷ್ಟಿಕತೆಯ ತಟ್ಟೆಯಾಗಿ ಪರಿವರ್ತನೆ
ಇತ್ತೀಚೆಗೆ ಅಭಿವೃದ್ಧಿಪಡಿಸಿರುವ 8 ಬೆಳೆಗಳ 17 ಜೀವಿಕ ತಳಿಗಳಲ್ಲಿ 3.0 ಪಟ್ಟು ಪೌಷ್ಟಿಕಾಂಶ ಅಧಿಕವಾಗಿದೆ. ಭತ್ತದ ತಳಿ ಸಿಆರ್ ಧಾನ್ 315ನಲ್ಲಿ ಹೆಚ್ಚಿನ ಸತುವಿನ ಅಂಶವಿದೆ, ಗೋಧಿ ತಳಿ ಎಚ್ ಐ 1633ಯಲ್ಲಿ ಪ್ರೊಟೀನ್, ಕಬ್ಬಿಣಾಂಶ ಮತ್ತು ಸತುವಿನ ಅಂಶ ಅಧಿಕವಾಗಿರಲಿದೆ.
ಎಚ್ ಡಿ 3298ನಲ್ಲಿ ಪ್ರೊಟೀನ್ ಮತ್ತು ಕಬ್ಬಿಣಾಂಶ ಅಧಿಕವಾಗಿದ್ದರೆ, ಡಿಬಿಡಬ್ಲೂ 303 ಮತ್ತು ಡಿಡಿಡಬ್ಲೂ 48 ಗೋಧಿಯ ತಳಿಗಳಲ್ಲಿ ಹೆಚ್ಚಿನ ಪ್ರೊಟೀನ್ ಇರಲಿದೆ. ಲಾದೋವಾಲ್ ಗುಣಮಟ್ಟದ ಪ್ರೊಟೀನ್ ಹೈಬ್ರೀಡ್ ಜೋಳ 1,2 ಮತ್ತು 3 ತಳಿಗಳಲ್ಲಿ ಲೈಸಿನ್ ಮತ್ತು ಟ್ರಿಫ್ಟೊಪಾನ್ ಅಂಶಗಳಿರುತ್ತವೆ, ಸಿಎಫ್ ಎಂವಿ1 ಮತ್ತು 2 ರಾಗಿಯಲ್ಲಿಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಸತುವಿನ ಅಂಶ ಅಧಿಕವಾಗಿರುತ್ತದೆ. ಸಿಎಲ್ ಎಂವಿ1 ರಾಗಿಯಲ್ಲಿ ಅಧಿಕ ಕಬ್ಬಿಣಾಂಶ ಮತ್ತು ಸತು ಇರುತ್ತದೆ. ಸಾಸಿವೆ 32ರಲ್ಲಿ ಎರುಸಿಕ್ ಆಮ್ಲ ಕಡಿಮೆ ಇರುತ್ತದೆ. ಗಿರಿನಾರ್ 4 ಮತ್ತು 4 ತಳಿಯ ಶೇಂಗಾದಲ್ಲಿ ಒಲಿಸಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಮರಗೆಣಸು ಶ್ರೀ ನಿಲೀಮ ಮತ್ತು ಡಿಎ 340ಯಲ್ಲಿ ಸತು, ಕಬ್ಬಿಣಾಂಶ ಮತ್ತು ಅಂಥೋಸಯಾನಿನ್ ಅಂಶ ಹೆಚ್ಚಿರುತ್ತದೆ.

ಸ್ಥಳೀಯ ತಳಿಯಿಂದ ಅಭಿವೃದ್ಧಿ
ಈ ಎಲ್ಲ ವೈವಿಧ್ಯ ತಳಿಗಳು ಮತ್ತು ಇತರೆ ಆಹಾರ ಪದಾರ್ಥಗಳು, ಸಾಮಾನ್ಯ ಭಾರತೀಯ ಊಟವನ್ನು ಪೌಷ್ಟಿಕ ಆಹಾರವಾಗಿ ಪರಿವರ್ತಿಸಲಿವೆ. ಈ ತಳಿಗಳನ್ನು ಸ್ಥಳೀಯವಾಗಿ ರೈತರ ಬಳಿ ಇದ್ದ ತಳಿಗಳನ್ನು ಮತ್ತು ಭೂ ಗುಣವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಅಸ್ಸಾಂನ ಗಾರೋ ಗುಡ್ಡಗಾಡು ಪ್ರದೇಶದಿಂದ ಸಂಗ್ರಹಿಸಿದ ಭತ್ತದ ತಳಿಯನ್ನು ಮತ್ತು ಗುಜರಾತ್ ನ ಡಾಂಗ್ ಜಿಲ್ಲೆಯಲ್ಲಿ ಸಂಗ್ರಹಿಸಿದ ಸಿರಿಧಾನ್ಯವನ್ನು ಆಧರಿಸಿ ಹೆಚ್ಚಿನ ಸತುವಿನ ಅಂಶವಿರುವ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಪೌಷ್ಟಿಕ ಸೂಕ್ಷ್ಮ ಕೃಷಿ ಸಂಪನ್ಮೂಲ ಮತ್ತು ಆವಿಷ್ಕಾರ (ನಾರಿ) ಕಾರ್ಯಕ್ರಮ
ಐಸಿಎಆರ್, ಕೌಟುಂಬಿಕ ವ್ಯವಸಾಯ ಪದ್ಧತಿಯನ್ನು ಕೃಷಿ ಮತ್ತು ಪೌಷ್ಟಿಕಾಂಶದೊಂದಿಗೆ ಸಂಯೋಜಿಸಿ ಉತ್ತೇಜನ ನೀಡಲು ಪೌಷ್ಟಿಕ ಸೂಕ್ಷ್ಮ ಕೃಷಿ ಸಂಪನ್ಮೂಲ ಮತ್ತು ಆವಿಷ್ಕಾರ (ನಾರಿ) ಕಾರ್ಯಕ್ರಮವನ್ನು ಆರಂಭಿಸಿದೆ. ಅದರಲ್ಲಿ ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸಲು ನ್ಯೂಟ್ರಿ ಸ್ಮಾರ್ಟ್ ಗ್ರಾಮಗಳು ಮತ್ತು ಪ್ರದೇಶಾವಾರು ನಿರ್ದಿಷ್ಠ ಕೈ ತೋಟಗಳ ಮಾದರಿಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಮತ್ತು ಸೂಕ್ತ ಪೌಷ್ಟಿಕಾಂಶ ಮತ್ತು ಪೌಷ್ಟಿಕ ಅಂಶಗಳನ್ನು ಒಳಗೊಂಡಿರುವ ವೈವಿಧ್ಯಮಯ ಆಹಾರ ಪದ್ಧತಿಯನ್ನು ಉತ್ತೇಜಿಸಲಾಗುತ್ತಿದೆ.
ಜೈವಿಕವಾಗಿ ಅಭಿವೃದ್ಧಿಪಡಿಸಲಾಗಿರುವ ತಳಿಗಳನ್ನು ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆ, ಅಂಗನವಾಡಿ ಇತ್ಯಾದಿಗಳ ಜೊತೆ ಸಂಯೋಜಿಸಲಾಗಿದ್ದು, ಆ ಮೂಲಕ ಅಪೌಷ್ಟಿಕತೆ ನಿವಾರಣೆ ಮತ್ತು ಉತ್ಕೃಷ್ಟ ಆಹಾರ ಧಾನ್ಯಗಳ ಮೂಲಕ ಭಾರತವನ್ನು ಕುಪೋಷಣ ಮುಕ್ತಗೊಳಿಸುವ ಗುರಿ ಇದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ದೊರಕುವುದಲ್ಲದೆ ಅವರಿಗೆ ಉದ್ಯಮಶೀಲತೆ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.












Click it and Unblock the Notifications