ಕೃಷಿ ಇಲಾಖೆಯ ಯಡವಟ್ಟು, ರೈತರ ಪರಿಹಾರದ ಹಣ ಏರ್ಟೆಲ್ ಕಂಪನಿಗೆ!
ಬೆಂಗಳೂರು, ಜೂ. 04: ಕೊರೊನಾ ವೈರಸ್, ಲಾಕ್ಡೌನ್ನಿಂದಾಗಿ ಜರ್ಜರಿತರಾಗಿದ್ದ ರೈತರಿಗೆ ಸರ್ಕಾರವೇ ಮತ್ತೊಂದು ಸಂಕಷ್ಟ ತಂದಿಟ್ಟಿದೆ. ಸರ್ಕಾರದ ನಿರ್ಲಕ್ಷದಿಂದ ರೈತರ ಖಾತೆಗೆ ಜಮೆಯಾಗಬೇಕಿದ್ದ ಪರಿಹಾರದ ಹಣ ಏರ್ಟೆಲ್ ಕಂಪನಿಗೆ ಜಮಾ ಆಗಿದೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ರೈತರೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಸರ್ಕಾರ ಕೈತೊಳೆದುಕೊಳ್ಳುವ ನಿಟ್ಟಿನಲ್ಲಿ ರೈತರಿಗೆ ಸೂಚಿಸಿದೆ.
Recommended Video
ಮೊಬೈಲ್ ದೂರವಾಣಿ ಸಂಪರ್ಕ ಸೇವೆ ಒದಗಿಸುವ ಏರ್ಟೆಲ್ ಕಂಪನಿ ಸಿಮ್ ಕೊಡುವಾಗ ಗ್ರಾಹಕರಿಂದ ಆಧಾರ್ ಸಂಖ್ಯೆಯನ್ನು ದಾಖಲೆಗೆ ತೆಗೆದುಕೊಳ್ಳುತ್ತದೆ. ಆಧಾರ್ ಆಧಾರದ ಮೇಲೆ ಮೊಬೈಲ್ ಸಂಪರ್ಕವನ್ನು ಏರ್ಟೆಲ್ ಕೊಡುತ್ತದೆ. ಸ್ಮಾರ್ಟ್ ಫೋನ್ ಹೊಂದಿರುವವರು ಏರ್ಟೆಲ್ ಹಣ ವರ್ಗಾವಣೆ ಖಾತೆ ತೆರೆಯಬಹುದಾಗಿದೆ. ಸ್ಮಾರ್ಟ್ಫೋನ್ ಇಲ್ಲದ ರೈತರ ಹಣ ಕೂಡ ಏರ್ಟೆಲ್ ಕಂಪನಿಗೆ ಹೋಗಿರುವುದು ಮತ್ತೊಂದು ಹಗರಣದ ಸಂಶಯ ಮೂಡಿಸಿದೆ.

ಹಾವೇರಿ ರೈತರ ಹಣ
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ರೈತರ ಖಾತೆಗೆ ಹೋಗಿಲ್ಲ ಎಂದು ಸ್ವತಃ ಕೃಷಿ ಸಚಿವ ಬಿ.ಸಿ. ಪಾಟೀಲ್ ಒಪ್ಪಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ರೈತರ ಖಾತೆಯ ಬದಲು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಹೋಗಿದೆ. ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಏರ್ಟೆಲ್ ಪೇಮೆಂಟ್ ಖಾತೆಗಳಿಗೆ ಫಸಲ್ ಭೀಮಾ ಪರಿಹಾರ ಮೊತ್ತ ಹೋಗಿದೆ. ಏರ್ಟೆಲ್ ಯಾವುದೇ ಶಾಖೆಗಳನ್ನು ಹೊಂದಿಲ್ಲ. ಹೀಗಾಗಿ ಏರ್ಟೆಲ್ ಔಟ್ಲೆಟ್ಗಳಿಗೆ ಹೋಗಿ ಹಣ ಪಡೆಯಬೇಕಾಗಿದೆ.
ಸರ್ಕಾರಕ್ಕೆ, ರೈತರಿಗೂ ಮಾಹಿತಿ ಇಲ್ಲದೇ ಏರ್ಟೆಲ್ ಖಾತೆಗೆ ಹಣ ಜಮಾ ಆಗಿದ್ದು, ಹಾವೇರಿ ಜಿಲ್ಲೆಯೊಂದರಲ್ಲಿಯೆ 68 ರೈತರ ಹಣ ಏರ್ಟೆಲ್ ಕಂಪನಿ ಪಾಲಾಗಿದೆ.
ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಆಗಿದೆ. ಈಗ ಹಣ ವಾಪಸ್ ಪಡೆಯಲು ತಹಶೀಲ್ದಾರರ ಪತ್ರ ಬೇಕು. ನಾವು ನೇರವಾಗಿ ಏರ್ಟೆಲ್ ಕಂಪೆನಿಗೆ ಆದೇಶ ಕೊಡಲು ಆಗುವುದಿಲ್ಲ. ನಾವು ಒಮ್ಮೆ ದುಡ್ಡು ಹಾಕಿದ ಮೇಲೆ ಮತ್ತೆ ಕೇಳೊಕೆ ಆಗುವುದಿಲ್ಲ. ಹೀಗಾಗಿ ರೈತರು ತಹಶೀಲ್ದಾರರ ಬಳಿ ಅರ್ಜಿ ಹಾಕಿ ನಮ್ಮ ಬಳಿ ಆಧಾರ್ ಕಾರ್ಡ್ ಇದೆ ಎಂದು ತಿಳಿಸಬೇಕು ಎಂದಿದ್ದಾರೆ.

ಸರ್ಕಾರದ ನಿರ್ಲಕ್ಷ, ನಮಗೆ ಸಂಕಷ್ಟ
ರಾಜ್ಯ ಕೃಷಿ ಇಲಾಖೆಯಬ ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಹಣ ಮೊಬೈಲ್ ನೆಟ್ವರ್ಕ್ ಕಂಪನಿ ಏರ್ಟೆಲ್ ಪಾಲಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ರೈತರು ಯಾವ ಏರ್ಟೆಲ್ ಕಂಪನಿಗೆ ಹೋಗಿ ಕೇಳಬೇಕು? ಮೊದಲೇ ಲಾಕ್ಡೌನ್ನಿಂದ ನಾವು ತೊಂದರೆಗೆ ಒಳಗಾಗಿದ್ದೇವೆ. ನಮ್ಮಲ್ಲಿರುವುದು ಸಣ್ಣ ಫೋನ್. ಮೊಬೈಲ್ನಿಂದ ನಾವು ಹಿಂದೆ ಯಾವತ್ತೂ ಹಣ ವರ್ಗಾವಣೆ ಮಾಡಿಲ್ಲ. ಏರ್ಟೆಲ್ ಕಂಪನಿಯಲ್ಲಿ ಸಿಮ್ ತೆಗೆದುಕೊಂಡಿದ್ದು ನಿಜ ಎಂದು ಹಾವೇರಿಯ ರೈತರು ಹೇಳುತ್ತಿದ್ದಾರೆ.
ಈಗ ಏರ್ಟೆಲ್ ಕಂಪನಿಯ ಯಾವ ಅಂಗಡಿಗೆ ಹೋಗಬೇಕು? ಲಾಕ್ಡೌನ್ನಿಂದ ಎಲ್ಲಿಯೂ ಹೋಗುವಂತಿಲ್ಲ. ಸರ್ಕಾರವೇ ಇದಕ್ಕೆ ಪರಿಹಾರ ಕೊಡಬೇಕು ಎಂದು ರೈತರು ಹೇಳಿದ್ದಾರೆ.

10 ಲಕ್ಷ ರೈತರಿಗೆ ಸೌಲಭ್ಯ
ರಾಜ್ಯದ ಸುಮಾರು 10 ಲಕ್ಷ ರೈತರಿಗೆ ಯೋಜನೆಯನ್ನು ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಲಾಕ್ಡೌನ್ನಿಂದಾಗಿ ರೈತರ ಖಾತೆಗೆ ತಲಾ 5 ಸಾವಿರ ರೂ.ಗಳ ಸಹಾಯಧನ ಕೊಡಲು ತೀರ್ಮಾನ ಮಾಡಲಾಗಿದೆ.
ಈ ಹಿಂದೆಯೂ ಕೂಡ ಹಾವೇರಿ ಜಿಲ್ಲೆಯಲ್ಲಿ ಬೆಳೆ ವಿಮಾ ಪರಿಹಾರದ ಹಣ ರೈತರಿಗೆ ತಲುಪಿಲ್ಲ. ಆ ಹಗರಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದು, ಈಗಾಗಾಗಲೇ ಅಮಾನತು ಮಾಡಲಾಗಿದೆ. ಆ ಪ್ರಕರಣ ಇತ್ಯರ್ಥವಾಗುವ ಮೊದಲೇ ಮತ್ತೊಂದು ಹಗರಣ ಹಾವೇರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ರೈತರೇ ಹೋಗಬೇಕು
ಇದೀಗ ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಹಣ ಬಹುರಾಷ್ಟ್ರೀಯ ಏರ್ಟೆಲ್ ಕಂಪನಿಯ ಪಾಲಾಗಿದೆ. ಹೀಗಾಗಿ ರೈತರು ತಹಶೀಲ್ದಾರ್ ಕಚೇರಿಗೆ ಹೋಗಿ ಅಲ್ಲಿ ತಹಶೀಲ್ದಾರರಿಂದ ಪ್ರಮಾಣ ಪತ್ರ ಪಡೆದುಕೊಂಡು ಅದನ್ನು ಏರ್ಟೆಲ್ ಕಂಪನಿಗೆ ಕೊಡಬೇಕು. ಅದನ್ನು ಪರಿಶೀಲನೆ ಮಾಡಿದ ಬಳಿಕ ಕಂಪನಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಆದರೆ ಸ್ಮಾರ್ಟ್ ಇಲ್ಲದೆ ಕೇವಲ ಬೇಸಿಕ್ ಮಾಡೆಲ್ ಮೊಬೈಲ್ ಹೊಂದಿರುವ ರೈತರ ಹಣವೂ ಏರ್ಟೆಲ್ ಕಂಪನಿಗೆ ಹೋಗಿದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಕೃಷಿ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣಕ್ರಮ ಆಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ತಕ್ಷಣ ಸರ್ಕಾರವೆ ಮುತುವರ್ಜಿ ವಹಿಸಿ ರೈತರ ಹಣ ಅವರಿಗೆ ತಲುಪಿಸಬೇಕು.












Click it and Unblock the Notifications