ಸರ್ಕಾರದ ಷರತ್ತುಬದ್ಧ ಮಾತುಕತೆ ನಮಗೆ ಬೇಡವೇ ಬೇಡ: ರಾಕೇಶ್ ಟೀಕಾಯತ್
ನವದೆಹಲಿ, ಜುಲೈ 10: ಕೇಂದ್ರ ಸರ್ಕಾರ ಬಯಸುವ ಷರತ್ತುಬದ್ಧ ಮಾತುಕತೆ ನಮಗೆ ಬೇಕಾಗಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿಯನ್ನು ರೈತರು ತಿರಸ್ಕರಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಏಳು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಈ ಪ್ರತಿಭಟನೆ ವಿಚಾರವಾಗಿ ಸರ್ಕಾರ ಮಾತುಕತೆಗೆ ಕರೆದಿತ್ತು.
ಕೃಷಿ ಮೂಲ ಸೌಕರ್ಯ ನಿಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕೂಡ ಇನ್ಮುಂದೆ ನೆರವು ಪಡೆಯಬಹುದು ಎಂದು ತೋಮರ್ ಪ್ರಕಟಿಸಿದ್ದರು, ಆದರೆ, ಕೃಷಿ ಕಾಯ್ದೆಗಳಿಂದಾಗಿ ಎಪಿಎಂಸಿಗಳು ಮುಚ್ಚಿ ಹೋಗುತ್ತವೆ ಎಂಬ ಭಯವನ್ನು ರೈತರು ಹೊಂದಿದ್ದಾರೆ ಎಂದರು.

ಸರ್ಕಾರವು ಷರತ್ತುಬದ್ಧ ಮಾತುಕತೆಗೆ ಮುಂದಾಗಿದೆ, ಇಂತಹ ಮಾತುಕತೆಗಳು ನಮಗೆ ಬೇಡ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟೀಕಾಯತ್ ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿನ ಹೋರಾಟವನ್ನು ಬಿಡಿ ಎಂದು ರೈತರಿಗೆ ಎಂದಿಗೂ ಹೇಳಲು ಸಾಧ್ಯವಿಲ್ಲ ಎಂದರು. ಕಳೆದ ವರ್ಷ ನವೆಂಬರ್ 26ರಿಂದ ದೆಹಲಿಯ ಘಾಜಿಪುರ, ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಪಂಜಾಬ್, ಹರ್ಯಾ, ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಎಐಎಫ್ ವ್ಯಾಪ್ತಿಗೆ ಬರುವುದರಿಂದ ಎಪಿಎಂಸಿಗಳ ಬಲವರ್ಧನೆ ಸಾಧ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಸರ್ಕಾರದ ಈ ವಾದವನ್ನು ಅಲ್ಲಗಳೆದಿರುವ ರಾಕೇಶ್ ಟೀಕಾಯತ್ , ಖಾಸಗಿ ಮಾರುಕಟ್ಟೆಗಳಿಗೆ ಸಿಗುವಷ್ಟು ವಹಿವಾಟು ಎಪಿಎಂಸಿಗಳಿಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ವರ್ಷಗಳಲ್ಲಿ, ಕಡಿಮೆ ತೆರಿಗೆ ಭರಿಸುವ ಸೌಲಭ್ಯವಿರುವ ಖಾಸಗಿ ಮಾರುಕಟ್ಟೆ ಸಂಸ್ಥೆಗಳ ಏಳಿಗೆಗಾಗಿ, ಎಪಿಎಂಸಿಗಳು ಬಾಗಿಲು ಹಾಕುವುದು ನಿಶ್ಚಿತ ಎಂದು ಹೇಳಿದ್ದಾರೆ.
ಯಾಕೆಂದರೆ ಮಧ್ಯಪ್ರದೇಶದ 38 ಎಪಿಎಂಸಿಗಳ ಪೈಕಿ ಒಂದು ಸಮಿತಿಯು ಕೂಡ ಒಂದೇ ಒಂದು ಕ್ವಿಂಟಾಲ್ ಗೋಧಿಯ ವಹಿವಾಟು ನಡೆಸಿಲ್ಲ, ಬಹುತೇಕ ಎಪಿಎಂಸಿಗಳಲ್ಲಿ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲದೆ ಒದ್ದಾಡುತ್ತಿವೆ ಎಂದಿದ್ದಾರೆ.












Click it and Unblock the Notifications