ಮಳೆಯಿಂದಾಗಿ ನೆಲಕಚ್ಚಿದ ಮೆಕ್ಕೆಜೋಳ: ಕಂಗಾಲಾದ ರೈತರು!
ದಾವಣಗೆರೆ, ಜುಲೈ 25: ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1 ಲಕ್ಷದ 12 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಕಳೆದ 20 ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ 1 ಲಕ್ಷಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿದೆ.
ತಾಲೂಕಿನ ಹುಚ್ಚವ್ವನಹಳ್ಳಿಯ ರೈತ ಎಚ್. ಎನ್. ಮೂರ್ತಿ ಸೇರಿದಂತೆ ಹಲವು ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಇದೀಗ ಗೇಣುದ್ದ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಕೊಳೆತು ಹೋಗಿದೆ. ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 29 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕೊಳೆತುಹೋಗಿದೆ.
ದೇಶದಲ್ಲಿ ಮುಂಗಾರು ಚುರುಕು: ಭತ್ತ ಬಿತ್ತನೆ ಕೊರತೆ ನೀಗಲಿದೆ
ಈ ಬೆಳೆಗೆ ಎಷ್ಟೇ ಗೊಬ್ಬರ, ಔಷಧಿ ಸಿಂಪಡಿಸಿದರೂ ಪ್ರಯೋಜನ ಇಲ್ಲ. ಈ ಹಾನಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಇದು ಎನ್ಡಿಆರ್ಫ್ ನಿಯಮಕ್ಕೆ ಅನ್ವಯಿಸುವುದಿಲ್ಲ ಎಂಬಿತ್ಯಾದಿ ಸಬೂಬು ಹೇಳುತ್ತಾರೆ. ಆದರೆ ನಮಗೆ ಎನ್ಡಿಆರ್ಎಫ್ ಅಡಿ ಪರಿಹಾರ ಕೇಳುತ್ತಿಲ್ಲ. ಮೆಕ್ಕೆಜೋಳಕ್ಕೆ ಫಸಲ್ ಭೀಮಾ ಯೋಜನೆಯಡಿ ನೀಡಿ ಎಂಬ ರೈತರು ಆಗ್ರಹಪಡಿಸಿದ್ದಾರೆ.
ಕಾಫಿನಾಡಿನಲ್ಲಿ ಭಾರಿ ಮಳೆಯಿಂದ ಕಪ್ಪು ಬಣ್ಣಕ್ಕೆ ತಿರುಗುತ್ತಿದೆಯಾ ಕಾಫಿ ಹಣ್ಣು ಮತ್ತು ಎಲೆ!?
ಮೊಳಕೆಯಾಗದೆ ಕೊಳೆತ ಬೀಜಗಳು
ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆ ಮೆಕ್ಕೆಜೋಳ ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಎಡೆಬಿಡದೇ ಬಿದ್ದ ಭಾರೀ ವರ್ಷಧಾರೆಯಿಂದ, ಮೆಕ್ಕೆಜೋಳ ಬೆಳೆಗೆ ಶೀತ ಬಾಧೆ ಆವರಿಸಿಕೊಂಡಿದೆ. ಇದರಿಂದ ಬೆಳೆದ ಬೆಳೆಯು ಹಾಳಾಗಲಾರಂಭಿಸಿದೆ. ಎಲೆಗಳು ಒಣಗಿದ ರೀತಿಯಲ್ಲಿ ಮಾರ್ಪಡುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಹಲವೆಡೆ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆಯೊಡೆಯದೆ ಕೊಳೆತು ಹೋಗಿವೆ.
ರೈತರಿಗೆ ನಷ್ಟ ತಂದ ಮಳೆ
ಇದರಿಂದಾಗಿ ಜಮೀನುಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ, ಗೊಬ್ಬರ, ಔಷಧಕ್ಕೆ ಸಾವಿರಾರು ರೂಪಾಯಿ ವೆಚ್ಚ ಭರಿಸಿದ್ದ ರೈತರಿಗೆ ಚಿಂತೆಯಾಗಿದೆ. ಪ್ರತಿನಿತ್ಯ ತಾಲೂಕಿನ ಗ್ರಾಮಗಳ ಹತ್ತಾರು ರೈತರು ದೂರದಿಂದ ಮಳೆಯಿಂದ ಹೊಲದಲ್ಲಿ ಜಲಾವೃತವಾದ ನೋಡಿ ಬೇಸರದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಭಾರೀ ಮಳೆಯಿಂದ ಮೆಕ್ಕೆಜೋಳ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಮತ್ತೊಮ್ಮೆ ಬೆಳೆ ಬಿತ್ತನೆ ಮಾಡುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಅನುಕೂಲವಾಗಲಿದೆ ಎಂದು ರೈತರು ಮನವಿ ಮಾಡಿದ್ದಾರೆ.
ಶೀಘ್ರ ಪರಿಹಾರ ಸಿಕ್ಕರೆ ರೈತರಿಗೆ ಅನುಕೂಲ
ಜುಲೈ 31 ಫಸಲ್ ಭೀಮಾ ಯೋಜನೆಯಡಿ ಕಂತು ತುಂಬಲು ಕಡೆ ದಿನಾಂಕ ನಿಗದಿ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಇದೀಗ ಹೊಲದಲ್ಲಿ ಕೊಳೆತು ಹೋಗಿರುವ ಬೆಳೆಯನ್ನು ಹಾಗೇಯೇ ಬಿಟ್ಟುಕೊಂಡು ಇರಬೇಕಾ? ವಿಮಾ ಸಂಸ್ಥೆಯ ಅಧಿಕಾರಿಗಳ ಸ್ಥಳ ಪರಿಶೀಲನೆಗೆ ಬರುವುದು ಯಾವಾಗ? ಸರ್ಕಾರಕ್ಕೆ ವರದಿ ನೀಡುವುದು ಯಾವಾಗ? ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ದೊರಕುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ವಿಮಾ ಸಂಸ್ಥೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈಗಾಗಲೇ ವಿಮಾ ಕಂತು ತುಂಬಿರುವ ರೈತರ ಪಟ್ಟಿಯೊಂದಿಗೆ ಅಧಿಕಾರಿಗಳು ರೈತರ ಜಮೀನಿಗೆ ಬರಬೇಕು. ನಷ್ಟವಾಗಿದ್ದರೆ ಪರಿಹಾರ ನೀಡಬೇಕು. ಈ ಹಣದಲ್ಲಿ ರೈತ ಹಾಳಾಗಿರುವ ಬೆಳೆಯನ್ನು ತೆಗೆದು ಬೇರೆ ಬೆಳೆ ಬಿತ್ತನೆ ಮಾಡಲು ಅನುಕೂಲವಾಗುತ್ತದೆ. ಆದರೆ ಜುಲೈ ನಂತರ ನಾವು ಬರುತ್ತೇವೆ. ಆಗಸ್ಟ್ ನಂತರ ಪರಿಹಾರ ಕೊಡುತ್ತೇವೆ ಎಂದರೆ ಅಲ್ಲಿಯವರೆಗೂ ರೈತರ ಗತಿ ಏನು ಎಂದಿದ್ದಾರೆ.
ಸಮೀಕ್ಷೆ ಮಾಡಲು ಒತ್ತಾಯ
ಬೆಳೆ ನಷ್ಟ ಪರಿಹಾರಕ್ಕಾಗಿ ಈಗಾಗಲೇ ಸಿಎಂ 500 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಸರಕಾರ ಹೇಳುತ್ತದೆ. ಇದರ ಸಮೀಕ್ಷೆಯನ್ನಾದರೂ ಮಾಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಫಸಲ್ ಭೀಮಾ ಯೋಜನೆಯಡಿ ಪರಿಹಾರ ವಿತರಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಈಗಾಗಲೇ ತಹಶೀಲ್ದಾರ್ ಅವರು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಮಾಡಲು ಸೂಚಿಸಿದ್ದರೂ ಯಾರೂ ಕೂಡ ಜಮೀನುಗಳಿಗೆ ಭೇಟಿ ನೀಡಿಲ್ಲ. ಅವರ ಸೂಚನೆ ಮೇರೆಗೆ ಕೂಡಲೇ ನಷ್ಟದ ಸಮೀಕ್ಷೆ ಮಾಡದೇ ಹೋದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.