ಕಬ್ಬಿಗೆ ದರ ನಿಗದಿ ಮಾಡುವಂತೆ ಮೈಸೂರಿನಲ್ಲಿ ಹೆದ್ದಾರಿ ತಡೆದು ಉರುಳು ಸೇವೆ
ಮೈಸೂರು, ಅಕ್ಟೋಬರ್, 27; ಕಬ್ಬುದರ ನಿಗದಿ ಸೇರಿದಂತೆ ಮತ್ತಿತರ ಒತ್ತಾಯಗಳ ಬಗ್ಗೆ ಮೈಸೂರು ಎಪಿಎಂಸಿ ವೃತ್ತದ ಬಳಿ ರೈತರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಉರುಳುಸೇವೆ ಚಳುವಳಿ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು.
ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ನೂರಾರು ಕಬ್ಬು ಬೆಳೆಗಾರರು ರಸ್ತೆ ಬಂದ್ ಚಳುವಳಿ ನಡೆಸಿ ಉರುಳು ಸೇವೆ ಮಾಡಿದರು. ಸರ್ಕಾರ, ಜಿಲ್ಲಾ ಉಸ್ತುವಾರಿ, ಎಂಎಲ್ಎಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ನಾಲ್ಕು ದಿಕ್ಕುಗಳಿಂದ ಬರುತ್ತಿದ್ದ ವಾಹನಗಳನ್ನು ತಡೆದು ಉರುಳು ಸೇವೆ ನಡೆಸಿ, ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದರು.
ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಗಳು ಸುಳ್ಳು ಹೇಳಿ ರೈತರನ್ನು ಮರಳು ಮಾಡುವುದು ನಿರಂತರವಾಗಿ ಮುಂದುವರಿಯುತ್ತಿದೆ. ರೈತರ ವೋಟ್ನಿಂದ ಗೆದ್ದ ಎಂಎಲ್ಎಗಳು, ಮಂತ್ರಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರ, ಭೂ ಮಾಫಿಯಾ, ಮಧ್ಯ ಮಾರಾಟಗಾರ ಮಾಲೀಕರ ಪರವಾಗಿ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ರೈತರ ಪರವಾಗಿ ಯಾರೂ ಮಾತನಾಡುತ್ತಿಲ್ಲ. ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಕೂಡ ಮೌನವಾಗಿದ್ದು, ಇದು ಬೆಕ್ಕಿಗೆ ಚೆಲ್ಲಾಟ ಇಲಿಗೆ ಸಂಕಟ ಎನ್ನುವಂತಾಗಿದೆ.
ಅವರಿಗೆ ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಣಿಸುತ್ತಿಲ್ಲವೇ? ಮುಂದಿನ ಚುನಾವಣೆಯಲ್ಲಿ ರಾಜ್ಯದ 38 ಸಕ್ಕರೆ ಕಾರ್ಖಾನೆ ಮಾಲಿಕತ್ವದ ಎಂಎಲ್ಎ, ಎಂಪಿ, ಮಂತ್ರಿಗಳನ್ನು ಸೋಲಿಸಿ ಮನೆಗೆ ಕಳಿಸಬೇಕು. ಹಾಗಾದರೆ ಮಾತ್ರ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುತ್ತದೆ. ಈ ಬಗ್ಗೆ ರಾಜ್ಯದ ರೈತರು ಚಿಂತನೆ ನಡೆಸಬೇಕು ಎಂದರು.

3,500 ರೂ. ನಿಗದಿ ಮಾಡುವಂತೆ ಆಗ್ರಹ
ಇಂದು ರಾಜ್ಯದ ಬೆಳಗಾವಿ ದಾವಣಗೆರೆ, ಧಾರವಾಡ ಕಲಘಟಗಿ, ಹಳಿಯಾಳ, ಮೈಸೂರು, ಬಳ್ಳಾರಿ ಹಡಗಲಿ, ಗುಲ್ಬರ್ಗ ಅಫ್ಜಲ್ಪುರ, ಬಿಜಾಪುರ, ಬಾಗಲಕೋಟೆ, ಗದಗ ಮುಂಡರಗಿ, ಯಲಹಂಕ ರಾಜಾನುಕುಂಟೆ, ಚಾಮರಾಜನಗರ, ಹಾಸನ, ಬೀದರ್, ಚನ್ನರಾಯಪಟ್ಟಣ, ಕೊಪ್ಪಳದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಚಳುವಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅಕ್ಟೋಬರ್ 31ರಂದು ಆಯಾ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು. ಪಂಜಾಬ್ನಲ್ಲಿ 3,800 ರೂಪಾಯಿ, ಉತ್ತರ ಪ್ರದೇಶದಲ್ಲಿ 3,500 ರೂಪಾಯಿ, ಗುಜರಾತ್ನಲ್ಲಿ 4,400 ರೂಪಾಯಿ ದರ ನಿಗದಿ ಮಾಡಿದ್ದಾರೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದ ವಿಚಾರವೇ ಆಗಿದೆ. ಇದನ್ನು ಗಮನಿಸಿ ಎಫ್ಆರ್ಪಿ ಬೆಲೆಯನ್ನು ಕನಿಷ್ಠ ಟನ್ಗೆ 3,500 ರೂಪಾಯಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಕುರುಬೂರು ಶಾಂತಕುಮಾರ್ ಆಕ್ರೋಶ
ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕಬ್ಬು ಕಟಾವಿಗೆ ಬರಲು 16 ತಿಂಗಳಾಗುತ್ತಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋ ಮೀಟರ್ ಆಧಾರದ ದರವನ್ನು ಕಡಿತ ಮಾಡಬೇಕು. ಕಾನೂನು ಬಾಹಿರವಾಗಿ ದರ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು, ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಬ್ಬು ಕಟಾವು 16-18 ತಿಂಗಳು ವಿಳಂಬವಾಗುತ್ತಿದ್ದು, ಈ ರೀತಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು ಎಂದು ಆಗ್ರಹಿಸಿದರು.

ಕೃಷಿಕರಿಗೆ ಉಚಿತ ವಿದ್ಯುತ್ ನೀಡಿ
ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಡಿತಗೊಳಿಸಬೇಕು. ಹಾಗೂ ಸಕ್ಕರೆ ಕಾರ್ಖಾನೆ
ಬಿಲ್ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು. ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಪತ್ರ ಒಪ್ಪಂದ ಆಗಬೇಕು. ಕೃಷಿ ಲಾಭದಾಯಕ ಆಗುವವರೆಗೂ ರೈತರ ಎಲ್ಲಾ ಸಾಲಗಳು ಮನ್ನಾ ಆಗಬೇಕು. ಕೃಷಿ ಪಂಪ್ಸೆಟ್ಗಳಿಗೆ ರೈತರು ಹಾಗೂ ಕೃಷಿ ಅವಲಂಬಿತ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡಬೇಕು. ಬ್ಯಾಂಕ್ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿಯನ್ನು ಕೈಬಿಡಬೇಕು, ಇದು ಕೃಷಿ ಉದ್ದೇಶಕ್ಕೆ ಅನ್ವಯಿಸಬಾರದು. ಸರ್ಕಾರ ನೀಡುವ ಪರಿಹಾರ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಸಾಲದ ಖಾತೆಗಳಿಗೆ ಜಮಾ ಮಾಡಬಾರದು.

ನಿರ್ಲಕ್ಷ್ಯ ತೋರಿದರೆ ಡಿಸಿ ಕಚೇರಿಗೆ ಮುತ್ತಿಗೆ
ಬಗರ್ ಹುಕುಂ ಮತ್ತು ಹಿಂದಿನಿಂದಲೂ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ, ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವವರಿಗೆ ಸಾಗುವಳಿ ಪಟ್ಟಿಯನ್ನು ನೀಡಬೇಕು.ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು. ಕಾಡುಪ್ರಾಣಿಗಳಿಂದ ಬೆಳೆಗಳು ಹಾನಿ ಆಗುತ್ತಿದ್ದು, ವೈಜ್ಞಾನಿಕ ನಷ್ಟವನ್ನು ತುಂಬಿಕೊಡಬೇಕು. ನಂತರ ಚಳವಳಿ ಸ್ಥಳಕ್ಕೆ ಆಮಿಸಿದ ಆಹಾರ ಇಲಾಖೆ ಉಪ ನಿರ್ದೇಶಕ ರಮಣಿ, ರೈತರ ಒತ್ತಾಯ ಪತ್ರ ಪಡೆದು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ನಿರ್ಲಕ್ಷ್ಯ ಮಾಡಿದರೆ 31ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ನಿರಂತರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ವೆಂಕಟೇಶ್, ಹಾಡ್ಯರವಿ, ಕಿರಗಸೂರುಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications