ದಿಢೀರ್ ಕಾಣಿಸಿಕೊಂಡ ವಿಚಿತ್ರ ಕೀಟಕ್ಕೆ ಬೆಚ್ಚಿಬಿದ್ದ ಗದಗ ರೈತರು!
ಗದಗ, ಸೆಪ್ಟೆಂಬರ್ 21 : ತಾಲೂಕಿನ ಡಂಬಳ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಕಂಬಳಿ ಹುಳು ಆಕಾರದ ವಿಚಿತ್ರ ಕೀಟವೊಂದು ಹರಿದಾಡಿದ ಪರಿಣಾಮ ಆ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ತಮ್ಮ ಜಮೀನು ಕೆಲಸಕ್ಕೆ ಹೋಗಿದ್ದ ಸಿದ್ದಲಿಂಗಪ್ಪ ಕುರ್ತಕೋಟಿ ಮೈ ಮೇಲೆ ಈ ಹುಳು ಹರಿದಾಡಿದೆ. ಹಾಗಾಗಿ ಸಿದ್ದಲಿಂಗಪ್ಪ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಸದ್ಯ ಗುಣಮುಖರಾಗಿರುವ ಸಿದ್ದಲಿಂಗಪ್ಪ ಮನೆಯಲ್ಲಿದ್ದಾರೆ. ಅದೇ ಮಾದರಿಗೆ ಹುಳವೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹುಳು ಮೈ ಮೇಲೆ ಹರಿದ್ರೆ ಸಾವು ಸಂಭವಿಸುತ್ತದೆ ಎಂದು ಸಂದೇಶ ಹರಿಬಿಡಲಾಗುತ್ತಿದೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲು
ಇದರಿಂದ ಆತಂಕಗೊಂಡಿರುವ ಹೊಂಬಳ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು, ಹುಳುವನ್ನು ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿ ಪರೀಕ್ಷೆ ಮಾಡಿಸುವಂತೆ ಆಗ್ರಹಿಸುತ್ತಿದ್ದಾರೆ. ಸುಳ್ಳು ಮಾಹಿತಿಯುಳ್ಳ ಫೊಟೋಗಳೊಂದಿಗೆ ಹರಿದಾಡುತ್ತಿರುವ ಸಂದೇಶದಿಂದ ಜನ ಭಯ ಭೀತರಾಗಿದ್ದಾರೆ. ಎರಡು ಮೃತ ದೇಹದ ಜೊತೆಗೆ ಒಂದು ವಿಚಿತ್ರ ಮಾದರಿಯ ಹುಳು ಫೋಟೋವನ್ನು ಶೇರ್ ಮಾಡುತ್ತಿದಾರೆ.
ಈ ಭಯಾನಕ ಕೀಟ ದೇಹಕ್ಕೆ ಸ್ಪರ್ಶ ಮಾಡಿದ್ರೆ, ವಾಂತಿ ಬರುತ್ತದೆ. ಹಾಗೇ ಮೂರ್ಛೆ ಹೋಗುತ್ತಾರೆ ಎಂಬ ಭೀತಿ ರೈತರರಲ್ಲಿ ಮೂಡಿದ ಕಾರಣ ಗದಗ ಜಿಲ್ಲಾ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ ಅವರಿಗೆ ಈ ಭಯಾನಕ ಕೀಟವನ್ನು ಕೊಟ್ಟಿದ್ದಾರೆ. ಇದನ್ನು ಧಾರವಾಡದ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲು ಕೇಳಿಕೊಂಡಿದ್ದಾರೆ. ಕೀಟದ ಕುರಿತು ಸಂಶೋಧನೆ ಮಾಡಬೇಕಾಗಿದೆ. ಹಾಗಾಗಿ ಮತ್ತೊಮ್ಮೆ ಜಮೀನಿಗೆ ಹೋಗಿ ಇನ್ನೂ ಹೆಚ್ಚಿನ ಕೀಟಗಳನ್ನು ಸಂಗ್ರಹಣೆ ಮಾಡಿ, ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಈ ವರೆಗೆ ಹುಳುವಿನಿಂದ ಸಾವು ಸಂಭವಿಸಿರುವ ಪ್ರಕರಣ ಬೆಳಕಿಗೆ ಬಂದಿಲ್ಲಾ. ಹುಳುಗಳನ್ನು ಮುಟ್ಟಿದಾಗ ತುರುಕೆ ಬರೋದು ಸಮಾನ್ಯ. ಆತಂಕ ಪಡುವ ಅಗತ್ಯ ಇಲ್ಲಾ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. 'ಕ್ಯಾಟರ್ಪಿಲ್ಲರ್' ಮಾದರಿಯ ಹುಳಗಳು ಇವಾಗಿವೆ. ಕಂಬಳಿ ಹುಳುವಿನಂತೆ ಕಾಣುವ ಈ ಕೀಟವನ್ನು ಹಿಡಿದಾಗ ನವೆ ಉಂಟಾಗುತ್ತದೆ. ಜಮೀನು ಪ್ರವೇಶಿಸುವಾಗ ಪೂರ್ಣ ತೋಳಿನ ಅಂಗಿ ಹಾಕಿಕೊಂಡು ಹೋಗಬೇಕು. ಇಷ್ಟು ಜಾಗೃತಿ ಇದ್ದಲ್ಲಿ ಸಾಕು. ರೈತರು ಜಮೀನು ಕೆಸಕ್ಕೆ ಹೋಗದೇ ಮನೆಯಲ್ಲಿ ಭಯಪಟ್ಟು ಕೂರುವ ಅವಶ್ಯಕತೆ ಇಲ್ಲ ಅಂತಿದ್ದಾರೆ ಅಧಿಕಾರಿಗಳು. ಹುಳುಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಭಯ ಬೇಡ ಅಂತಾ ಕೃಷಿ ಅಧಿಕಾರಿ ಜಿಯಾವುಲ್ಲಾ ಕೆ. ಮಾಹಿತಿ ನೀಡಿದ್ದಾರೆ.
ರೈತರು ಬೆಳೆದ ಹೆಸರು ಬೆಳೆಯಲ್ಲಿ ಸಾಮಾನ್ಯವಾಗಿ ಈ ಕೀಟ ಕಂಡು ಬರುತ್ತದೆ, ಆದರೆ ಯಾರೋ ಅರೆ ತಿಳುವಳಿಕೆ ಇರುವ ಹುಡುಗರು ಹೀಗೆ ಮಾಡಿರುತ್ತಾರೆ. ಇಂಥ ಹುಳುಗಳು ಬೆಳೆಗಳಲ್ಲಿ ಸಾಮಾನ್ಯವಾಗಿರುತ್ತವೆ ಅಂತಿದ್ದಾರೆ ಕೃಷಿಯಲ್ಲಿ ಜೀವನ ಕಳೆದ ಹಿರಿಯ ಕೃಷಿಕರು. ಒಟ್ಟಾರೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಎಲ್ಲರೂ ಭಯ ಪಡುವಂತ ಪರಿಸ್ಥಿತಿ ನಿರ್ಮಾಣ ವಾಗಿದ್ದಂತೂ ಮಾತ್ರ ಸುಳ್ಳಲ್ಲಾ.