ಮುರಿದು ಬಿದ್ದ ರೈತರ ಸಭೆ? ಜನವರಿ 4ಕ್ಕೆ ಮುಂದಿನ ಚರ್ಚೆ ನಿಗದಿ
ನವದೆಹಲಿ, ಡಿಸೆಂಬರ್ 30: ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆ ಈ ಮೂರು ಕಾಯ್ದೆಗಳ ಚರ್ಚೆಗೆ ಬುಧವಾರ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಸಭೆ ನಡೆದಿದ್ದು, ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡು ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಮುಂದಿನ ಮಾತುಕತೆಯನ್ನು ಜನವರಿ 4ರಂದು ನಡೆಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ರೈತರು ತಂದ ಊಟ ಸೇವಿಸಿದ ಕೇಂದ್ರ ಸಚಿವರು
ರೈತರೊಂದಿಗೆ ಉತ್ತಮ ರೀತಿ ಚರ್ಚೆ ನಡೆದಿದ್ದು, ಸಭೆ ಸಕಾರಾತ್ಮಕವಾಗಿ ಕೊನೆಗೊಂಡಿದೆ ಎಂದು ತಿಳಿಸಿದ್ದಾರೆ. ಬುಧವಾರ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್, ಸೋಮ್ ಪ್ರಕಾಶ್ ಅವರು ರೈತ ಮುಖಂಡರೊಂದಿಗೆ ಆರನೇ ಸುತ್ತಿನ ಮಾತುಕತೆ ನಡೆಸಿದ್ದು, ಸಭೆಯಲ್ಲಿ ಈ ಕಾಯ್ದೆಗಳನ್ನು ರದ್ದುಪಡಿಸುವ ಬೇಡಿಕೆಯನ್ನು ರೈತರು ಮುಂದಿಟ್ಟಿದ್ದಾರೆ. ಆದರೆ ಆ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ, ಈ ಕೃಷಿ ಕಾಯ್ದೆಗಳನ್ನು ಪರಿಶೀಲಿಸಲು ಸಮಿತಿ ರಚನೆಗೆ ಪ್ರಸ್ತಾವ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.
ಇದುವರೆಗಿನ ಎಲ್ಲಾ ಮಾತುಕತೆಯಲ್ಲೂ ರೈತ ಮುಖಂಡರು ಈ ಕಾಯ್ದೆಗಳ ರದ್ದತಿ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಕೇಂದ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣಕ್ಕೆ ಡಿಸೆಂಬರ್ 5ರಂದು ನಡೆಯಬೇಕಿದ್ದ ಸಭೆ ಮುರಿದುಬಿದ್ದಿತ್ತು. ದೀರ್ಘ ಅಂತರದ ನಂತರ ಬುಧವಾರ ಸಭೆ ನಡೆದಿದ್ದು, ರೈತರು- ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟಿನ ಕುರಿತು ಸೂಕ್ತ ಅಂತ್ಯ ದೊರೆತಿಲ್ಲ ಎನ್ನಲಾಗಿದೆ. ಇನ್ನಷ್ಟು ಚರ್ಚೆಯನ್ನು ಜನವರಿ 4ರಂದು ನಡೆಸಲಾಗುವುದು ಎಂದು ತಿಳಿದುಬಂದಿದೆ.
ನವೆಂಬರ್ 26ರಿಂದಲೂ ಕಾಯ್ದೆಗಳ ರದ್ದತಿಗೆ ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ಕೈಗೊಂಡಿದ್ದು, ಮೂವತ್ತನಾಲ್ಕು ದಿನಗಳು ಕಳೆದಿವೆ.