ಬೆಳಗಾವಿ: ಕಬ್ಬಿನ ಬೆಂಬಲ ಬೆಲೆಗಾಗಿ ಟವರ್ ಮೇಲೇರಿದ ರೈತ
ಬೆಳಗಾವಿ, ನವೆಂಬರ್ 23: ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಸುವರ್ಣ ಸೌಧ ಬಳಿಯಿರುವ ಟವರ್ ಮೇಲೇರಿ ರೈತನೊಬ್ಬ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಸದನದಲ್ಲಿ ಅಧಿವೇಶನ ನಡೆದು ಮುಗಿದಿತ್ತು. ಸಂಜೆ ರೈತ ಚಂದ್ರು ಸುವರ್ಣ ವಿಧಾನ ಸೌಧ ಬಳಿಯಿರುವ ಟವರ್ ಏರಿ ಕುಳಿತು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂಬಂಧ ಕುಣಿಗಲ್ ಶಾಸಕ ಡಿ ನಾಗರಾಜಯ್ಯ ಚಂದ್ರವಿನ ಮನವೊಲಿಸಲು ಪ್ರಯತ್ನಿಸಿದರಾದರೂ ಅವರು ಕೆಳಗಿಳಿಯಲಿಲ್ಲ. ಆ ಹೊತ್ತಿಗಾಗಲೇ ಸುವರ್ಣ ಸೌಧದ ರಕ್ಷಣೆಗಿದ್ದ ಪೊಲೀಸರು ಸಹ ಅಲ್ಲಿಗೆ ಜಮಾಯಿಸಿ ಧ್ವನಿವರ್ಧಕದ ಮೂಲಕ ಮಾತಕತೆ ನಡೆಸಿದರು. ಈ ವೇಳೆ ಕುಣಿಗಲ್ ಶಾಸಕ ಮಾತನಾಡಿ, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿಸಿ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡಿಸುತ್ತೇವೆ ಎಂದರು. ಹಾಗೆಯೇ ಈಗಾಗಲೆ ಸದನದಲ್ಲಿ ಕಬ್ಬು ಬೆಳೆಗಾರರಿಗೆ ಪರಿಹಾರವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಚಂದ್ರು ಮಾತು ಕೇಳದೆ ಮೇಲೆಯೇ ಕುಳಿತಿದ್ದರು.[ರೈತರ ಬಾಕಿ ಪಾವತಿಗಾಗಿ ಸಕ್ಕರೆ ಹರಾಜು]
ಚಂದ್ರು ದೂರದಿಂದಲೇ ಶಾಸಕರು ಮತ್ತು ಪೊಲೀಸರೊಂದಿಗೆ ಮಾತನಾಡಿದರಾದರೂ ನಿಮ್ಮ ಮೇಲೆ ನನಗೆ ಯಾವುದೇ ನಂಬಿಕೆಯಿಲ್ಲ, ನಮಗೆ ಇಷ್ಟುದಿನಗಳ ಕಾಲ ಹಣವನ್ನು ಪಾವತಿಸಿದೇ ಇರುವ ಕಾರಣಕ್ಕೆ ಮೇಲೇರಿ ಕುಳಿತಿರುವುದಾಗಿ ತಿಳಿಸಿದರು. ಕೆಲಹೊತ್ತು ಪೊಲೀಸರು ಆತನ ಸಂಚಾರ ವಾಣಿಗೆ ಕರೆ ಮಾಡಿ ಮಾತನಾಡಿದರು.
ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಿ ಸದನದಲ್ಲಿ ಈ ಬಗ್ಗೆ ಮಾತನಾಡಿದ್ದಾಗಿದೆ, ಕಳಗಿಳಿದು ಬಾ ನಿನಗೆ ಏನು ಪರಿಹಾರ ಬೇಕೋ ಕೊಡಿಸುತ್ತೇವೆ, ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.
ನಂತರ ಚಂದ್ರು ಕೆಳಗಿಳಿದು ಬಂದರು. ಅಲ್ಲಿಯ ವರೆಗೆ ಪೊಲೀಸರು , ಸ್ನೇಹಿತರು, ಎಷ್ಟೇ ಹೇಳಿದರೂ ಕೆಳಗಿಳಿದು ಬಂದಿರಲಿಲ್ಲ.












Click it and Unblock the Notifications