ರೈತ ಸಂಘಟನೆಗಳ ಒಕ್ಕೂಟದಿಂದ ಪ್ರಧಾನಿ ಮೋದಿಗೆ ಪತ್ರ
ದೇಶದ ರೈತ ಸಂಘಟನೆಗಳ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (27-11-2020) ಪತ್ರ ಬರೆದಿದೆ. ತಮ್ಮ ಪತ್ರದ ಮೊದಲನೆಯ ಸಾಲಿನಲ್ಲೇ "ನಿಮಗೆ ತಿಳಿದಿರಬಹುದು, ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ರೈತರು ದಿಲ್ಲಿಯಲ್ಲಿ ತಮ್ಮ ಅಹವಾಲು ಹೊತ್ತು ಬರುತ್ತಿದ್ದಾರೆ." ಎಂಬುದಾಗಿ ಛೇಡಿಸಲಾಗಿದೆ.
"ದಿಲ್ಲಿ ಚಲೋ" ಕಾರ್ಯಕ್ರಮದ ಅಂಗವಾಗಿ "ಸಂಯುಕ್ತ ಕಿಸಾನ್ ಮೋರ್ಚಾ" ವೇದಿಕೆ ಇತ್ತೀಚೆಗಷ್ಟೇ ಆರಂಭಿಸಲಾಗಿದೆ. ಆ ವೇದಿಕೆಯ ಮೂಲಕವೇ ಈ ಪತ್ರ ರವಾನಿಸಿರುವುದು.
ದಿಲ್ಲಿಯತ್ತ ಲಕ್ಷೋಪಲಕ್ಷ ರೈತರು, ಯುವಕರು ಹೆಜ್ಜೆ ಹಾಕುತ್ತಿರುವಾಗ ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ ರೈತರು ದಿಲ್ಲಿ ಮುಟ್ಟುವುದನ್ನು ತಡೆಯಲು ಇನ್ನಿಲ್ಲದ ತೊಡಕುಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಅಲ್ಲಿನ ಸರ್ಕಾರಗಳು ರಸ್ತೆಗೆ ತಡೆಗೋಡೆಗಳು, ಮರಳು ಟ್ರಕ್ ಗಳು, ಬೇಲಿ, ಕಲ್ಲು, ಅಶ್ರುವಾಯು, ವಾಟರ್ ಗನ್ ಬಳಸಿ ರೈತರನ್ನು ಮಾರ್ಗ ಮಧ್ಯದಲ್ಲೇ ತಡೆಯುವ ಹೀನ ಪ್ರಯತ್ನ ನಡೆದಿಸಿವೆ. ಆದಾಗ್ಯೂ ರೈತರು ಛಲಬಿಡದೆ ದಿಲ್ಲಿಯತ್ತ ಮುನ್ನುಗ್ಗುತ್ತಿದ್ದಾರೆ. ಅದೃಷ್ಟವಶಾತ್ ಇನ್ನೂ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

ಈಗಾಗಲೇ ದಿಲ್ಲಿಯ ಹೊರವಲಯಕ್ಕೆ ಸಾವಿರಾರು ರೈತರು ತಲುಪಿದ್ದಾರೆ. ನಮ್ಮ ನಿರ್ಧಾರ ಅಚಲವಾಗಿದೆ. ನಾವು ಮುನ್ನಡೆಯುವವರೇ..
ದೇಶ ಮತ್ತು ಸರ್ಕಾರ ಒಂದು ಸಂದಿಗ್ಧ ಸ್ಥಿತಿಗೆ ಬಂದು ತಲುಪಿದೆ. ಇಂತಿಪ್ಪ ಪರಿಸ್ಥಿತಿಯಲ್ಲಿ ದೇಶದ 'ಅನ್ನದಾತ'ನಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಬೇಕು. ನಮ್ಮ ಮಾತುಗಳನ್ನು ಕೇಳಿಸಿಕೊಳ್ಳದೆ ಕೃಷಿ ಕಾಯಿದೆಗಳನ್ನು ಅಂಗೀಕಾರ ಮಾಡಿರುವ ಹಿನ್ನೆಲೆಯಲ್ಲಿ ಈ ಹೋರಾಟ ಮಾಡಬೇಕಾಗಿದೆ. ದೇಶದ ದಿಕ್ಕು ದಿಕ್ಕುಗಳಿಂದಲೂ ಕಾಯಿದೆಗಳ ಕರಾಳತೆಯ ಬಗ್ಗೆ ತಮಗೆ ತಿಳಿಸುವ ನಮ್ಮ ಯತ್ನವನ್ನು ತಾವು ಕಡೆಗಣಿಸಿದ್ದೀರಿ. ನಮಗ್ಯಾರಿಗೂ ನಿಮ್ಮಿಂದ ಉತ್ತರ ಬಂದಿಲ್ಲ.
ಈಗಲಾದರೂ ದೇಶದ ಬಹುಪಾಲು ಜನರ-ರೈತರ ಮಾತುಗಳನ್ನು ಸರ್ಕಾರ ಕೇಳಿಸಿಕೊಳ್ಳಬೇಕು. ತಮಗೆ ಸರಿ ಅನಿಸಿದ್ದನ್ನೇ ಮಾಡದೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಪ್ರಜೆಗಳ ಧ್ವನಿಗೆ ಕಿವಿಯಾಗಬೇಕು. ಮಾತುಕತೆಗೆ ಬರಲಿ ಎಂದು ಆಹ್ವಾನಿಸುವುದು ಮತ್ತೆ ಅಂಥ ವಾತಾವರಣ ಬಾರದೆ ಇರುವ ವಾತಾವರಣ ಸೃಷ್ಟಿಯಾಗುವಂತೆ ನಡೆದುಕೊಳ್ಳುವುದು ತಮಗೆ ಶೋಭೆ ತರುವುದಿಲ್ಲ.
ಇವೆಲ್ಲದರ ಹಿನ್ನೆಲೆಯಲ್ಲಿ ಇದೀಗ ತಾವು ನಿಮಗೆ ಹೇಳುವುದಿಷ್ಟೇ, ರೈತರು ದಿಲ್ಲಿ ತಲುಪಲು ಯಾವುದೇ ಅಡೆತಡೆ ಮಾಡದೆ, ಮಾರ್ಗ ಮಧ್ಯೆ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಈವರೆಗೆ ನಾವು ಶಾಂತಿಯುವಾಗಿಯೇ ನಮ್ಮ ಚಳವಳಿ ಮಾಡಿಕೊಂಡು ಬಂದಿದ್ದೇವೆ.
ರಾಮಲೀಲಾ ಮೈದಾನದಂತಹ ಜಾಗವನ್ನು ನಮ್ಮ ಚಳವಳಿಗೆ ಕೊಡಿ. ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಆಸ್ಪದ ಮಾಡಿಕೊಡಿ.
ನಿಮ್ಮ ಸರ್ಕಾರದ ಪ್ರಮುಖ ಮಂತ್ರಿಗಳೊಡನೆ ಮೂರು ಕೃಷಿ ಕಾಯಿದೆಗಳು ಹಾಗೂ ವಿದ್ಯುತ್ ನೀತಿ 2020ರ ಬಗ್ಗೆ ಚರ್ಚಿಸಲು ನಮಗೆ ಆಹ್ವಾನ ನೀಡಿ.
ಈ ರೀತಿಯಾಗಿ ಪತ್ರ ಬರೆದವರು ಹಿರಿಯ ರೈತ ಮುಖಂಡರಾದ ಬಲ್ ಬೀರ್ ಸಿಂಗ್ ರಾಜೇವಾಲ್, ದಲ್ ಜೀತ್ ಸಿಂಗ್ ದಲ್ಲೇವಾಲ, ಗುರುನಾಮ್ ಸಿಂಗ್ ಚಡೂನಿ. ವಿ.ಎಂ.ಸಿಂಗ್, ರಾಜು ಶೆಟ್ಟಿ, ಶಿವಕುಮಾರ್ ಶರ್ಮಾ ಕಕ್ಕಾಹಿ, ಯೋಗೇಂದ್ರ ಯಾದವ್, ಕುರುಬೂರು ಶಾಂತಕುಮಾರ್ ಒಳಗೊಂಡಂತೆ ದೇಶದ ನೂರಾರು ರೈತ ಸಂಘಟನೆಗಳ ಮುಖಂಡರು.












Click it and Unblock the Notifications