ರೈತ ಚಳವಳಿಗಳು ರಾಜಕೀಯ ಪಕ್ಷಗಳನ್ನು ಸೇರುವುದು ವಿಪತ್ತಿನ ಸೂಚನೆ: ಕೆ.ಟಿ. ಗಂಗಾಧರ್
ರೈತ ಚಳವಳಿಗಳು ರಾಜಕಾರಣಿಗಳ, ರಾಜಕೀಯ ಪಕ್ಷಗಳತ್ತ ಒಲವು ತೋರುತ್ತಿರುವ ಈ ಕಾಲಮಾನದಲ್ಲಿ ಹಿರಿಯ ರೈತ ಹೋರಾಟಗಾರರಾದ ಕೆ.ಟಿ, ಗಂಗಾಧರ್ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ, ಅವರು ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈಗ ಕರ್ನಾಟಕಲ್ಲಿ ಮತ್ತು ಭರತ ಖಂಡದಲ್ಲಿ ರೈತ ಚಳವಳಿ ಶುರುವಾದ ಮೇಲೆ ರಾಜ್ಯ ಮತ್ತು ದೇಶಮಟ್ಟದ ಚುನಾವಣೆಗಳನ್ನು ಚಳವಳಿ ನೋಡಿದೆ. ಆ ಚುನಾವಣೆಗಳಿಂದ ರಾಜಕೀಯ ಪಾಠವನ್ನೂ ಚಳವಳಿ ಕಲಿತಿದೆ. ಚುನಾವಣೆಗಳು, ಮುಖ್ಯಮಂತ್ರಿಗಳು ನಮಗೇನು ಹೊಸದಲ್ಲ.
ಗುಂಡೂರಾವ್ರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ಎಲ್ಲಾ ಮುಖ್ಯಮಂತ್ರಿಗಳನ್ನು ಚಳವಳಿ ನೋಡಿದೆ. ಅದೇ ರೀತಿ ರಾಜಕೀಯ ಪಕ್ಷಗಳ ರೈತ ವಿರೋಧಿ ಧೋರಣೆಗಳನ್ನು ಅಧಿಕಾರ ಕೊಟ್ಟೂ ನೋಡಿದೆ. ಉದಾಹರಣೆಗೆ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗುಂಡು ಹಾರಿಸಿತು. ಅವರನ್ನು ರೈತರು ತಿರಸ್ಕರಿಸಿದರು. ಮತ್ತೊಂದು ಸರ್ಕಾರ ಬಂದು ನೀವು ಕೇಳಿದ್ದೆಲ್ಲಾ ಕೊಡುವುದಕ್ಕಾಗಲ್ಲ ಅಂದರು. ಅದಕ್ಕೂ ಚಳವಳಿ ಸಾಕ್ಷಿ ಆಗಿದೆ.
ಚಳವಳಿ ಚುನಾವಣೆಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಮೌಲ್ಯಾಧಾರಿತವಾಗಿ ಗಮನಿಸಿದೆ. ಅಂತೆಯೇ ರಾಜಕೀಯ ಶಕ್ತಿಗಳು ಅಧಿಕಾರ ಬಂದ ಮೇಲೆ ಹೇಗೆ ನಡೆದುಕೊಂಡಿವೆ ಅನ್ನುವುದೂ ರೈತ ಚಳವಳಿ ನೋಡಿದೆ. ಕರ್ನಾಟಕದಲ್ಲಿ ರೈತ ಚಳವಳಿ ಮಾತ್ರ ಸರ್ಕಾರ ಬದಲಾಯಿಸಲಿಲ್ಲ. ದಸಂಸ, ಪ್ರಗತಿಪರ ಚಳವಳಿಗಳು, ಲಂಕೇಶ್ ಪತ್ರಿಕೆ, ರಾಮದಾಸ್ ಅಂತವರು ಎಲ್ಲರೂ ಸೇರಿ ಸರ್ಕಾರಗಳನ್ನು ಬದಲಾಯಿಸಿವೆ.
ಇಂದು ವಿಧಾನಸಭೆಯಲ್ಲಿ ಚುನಾವಣೆಗಳ ಬಗ್ಗೆ ಗಂಭೀರವಾದ ಚರ್ಚೆ ನಡೀತಿದೆ. ಚುನಾವಣೆಗಳು ಜಾತಿ ಆಧಾರಿತ, ಹಣ ಆಧಾರಿತವಾಗಿರುವುದನ್ನು ಅಸೆಂಬ್ಲಿಯಲ್ಲಿ ಹಿರಿಯರು ಚರ್ಚೆ ಮಾಡಿದ್ದಾರೆ. ಅಂದರೆ ಅವರಿಗೆ ಈ ಬಗ್ಗೆ ಬೇಸರವಿದೆ ಅಂತಾಯಿತು.
ಚುನಾವಣೆ ಅಂದರೆ ಅಪತ್ಯವೇನಲ್ಲ. ರಾಜಕೀಯ ಪಕ್ಷಗಳು ಈವರೆಗೆ ನಡೆದು ಬಂದ ಹಾದಿ ಅಥವಾ ಅವರ ಪ್ರಣಾಳಿಕೆಗಳನ್ನು ಗಮನಿಸಿದಾಗ ರೈತರನ್ನು, ರೈತ ಕೂಲಿಕಾರರನ್ನು ಗಮನದಲ್ಲಿಟ್ಟುಕೊಂಡು ಯಾವ ಭರವಸೆಗಳನ್ನೂ ಕೊಟ್ಟಿಲ್ಲ.
ಇವತ್ತು ಕೃಷಿಯನ್ನು ಜಾಗತೀಕರಣದ ವ್ಯಾಪ್ತಿಯಲ್ಲಿ ತಂದ ಮೇಲೆ ನಮ್ಮ ಹೋರಾಟಗಳೇ ಭಿನ್ನವಾಗಿವೆ. ರಾಜಕೀಯ ಪಕ್ಷಗಳಿಗೆ ಇದ್ಯಾವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಭಾರತದ ಕೃಷಿ ಭೂಮಿ, ಮಾರುಕಟ್ಟೆ, ಆಹಾರ ಭದ್ರತೆ ಜೋಪಾನ ಮಾಡಬೇಕು. ಈ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಸ್ಪಷ್ಟತೆ ಇಲ್ಲ.
ಈ ಹಿನ್ನೆಲೆಯಲ್ಲಿ ಜನಪರವಾದ ಚಳವಳಿಗಳು ಬಹಳ ಗಂಭಿರವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಕೇಡರ್ ಅಭಿವೃದ್ಧಿ ಮಾಡಿಕೊಳ್ಳಬೇಕು. ಅದ್ಯಾವುದೂ ಇಲ್ಲದೆ ರಾಜಕಾರಣಿಗಳಿಗೆ ಸರೆಂಡರ್ ಆಗುವುದು ಗ್ರಾಮ ಭಾರತಕ್ಕೆ ಇನ್ನೂ ದೊಡ್ಡ ವಿಪತ್ತು ಕಾದಿದೆ ಎಂಬ ಸೂಚನೆ.
Recommended Video
ಗ್ರಾಮ ಭಾರತದಲ್ಲಿ ಉದ್ಯೋಗ ಇಲ್ಲ, ಜನರಿಗೆ ಕೊಳ್ಳುವ ಶಕ್ತಿ ಇಲ್ಲ. ರಾಜಕೀಯ ಪಕ್ಷಗಳು ಉಚಿತವಾಗಿ ಏನೋ ಕೊಡುತ್ತವೆ ಅಂತೇಳ್ಕೊಂಡು ಅದಕ್ಕೇ ಗೋಣಾಡಿಸಿಕೊಂಡು ಕುಂತರೆ ಆಗಲ್ಲ. ಚಳವಳಿಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಸೂಕ್ಷ್ಮವಾಗಿರಬೇಕಿದೆ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ವಿಷಯ ಹಂಚಿಕೊಂಡರು.