ರೈತರ ಸಾಲ ಮನ್ನಾ : ಒಂದು ವಾರದಲ್ಲಿ ಅಧಿಕೃತ ಆದೇಶ
ಬೆಂಗಳೂರು, ಜುಲೈ 29 : 'ರೈತರ ಸಾಲ ಮನ್ನಾ ಕುರಿತು ಸಹಕಾರ ಸಂಘಗಳಿಗೆ ಅನ್ವಯವಾಗುವಂತೆ ಮಾರ್ಗಸೂಚಿ ಸಹಿತ ಅಧಿಕೃತ ಆದೇಶ ಒಂದು ವಾರದೊಳಗೆ ಹೊರಬೀಳಲಿದೆ' ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸಚಿವರು ಪತ್ರಿಕಾಗೋಷ್ಠಿ ನಡೆಸಿದರು. 'ಸರ್ಕಾರದ ಆಶಯದಂತೆ ಸಾಲ ಮನ್ನಾಸೌಲಭ್ಯ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಿಗುವಂತಾಗಲು ಹಾಗೂ ಸೊಸೈಟಿ ಕಾರ್ಯದರ್ಶಿಗಳು ಹಣ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕಟ್ಟು ನಿಟ್ಟಿನ ವ್ಯವಸ್ಥೆ ಜಾರಿ ಮಾಡಲಾಗುತ್ತದೆ' ಎಂದರು.
'ಕಂತು ಮರುಪಾವತಿ ಕಾಲಾವಧಿಗೆ ಮೊದಲೇ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ತಲುಪಿಸಲು, ಫಲಾನುಭವಿ ರೈತರ ಹೆಸರು, ಮೊತ್ತದ ವಿವರಗಳನ್ನು ಸಹಕಾರ ಸಂಘದ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶನಕ್ಕೆ ಸ್ಪಷ್ಟವಾಗಿ ಸೂಚಿಸಲಾಗುತ್ತಿದೆ' ಎಂದು ಹೇಳಿದರು.

'ಕೆಲವು ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳು ಹಣ ಪಡೆಯುವ ವಿತ್ ಡ್ರಾ ಸ್ಲಿಪ್ ದುರುಪಯೋಗ ಮಾಡಿಕೊಂಡು ರೈತರ ಖಾತೆಗಳನ್ನು ನವೀಕರಣ ಮಾಡಿ ಸಾಲ ಮನ್ನಾದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ವಿಚಾರ ಸರ್ಕಾರದ ಗಮನದಲ್ಲಿದೆ. ಇಂತಹ ದೂರು ಬಂದರೆ ಕಾರ್ಯದರ್ಶಿಗಳನ್ನು ಅಮಾನತು ಮಾಡಲಾಗುತ್ತದೆ' ಎಂದು ತಿಳಿಸಿದರು.
17 ಸಾವಿರ ಕೋಟಿ ಸಾಲ ಮನ್ನಾ : 'ಹಿಂದಿನ ಸಿದ್ದರಾಮಯ್ಯ ಸರ್ಕಾರ ಒಟ್ಟು 8,165 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು 9,448 ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಒಟ್ಟು 17 ಸಾವಿರ ಕೋಟಿ ರೂ. ಸಹಕಾರ ಸಂಘಗಳ ಸಾಲ ಮನ್ನಾ ಆದಂತಾಗಿದೆ' ಎಂದು ಸಚಿವರು ವಿವರಣೆ ನೀಡಿದರು.












Click it and Unblock the Notifications