ನೆಲಕಚ್ಚಿದ ಬೆಂಬಲ ಬೆಲೆ: ನೊಂದು ಬೆಳೆ ನಾಶಪಡಿಸಿದ ರೈತ
ಹುಬ್ಬಳ್ಳಿ, ನವೆಂಬರ್3: ಜೂನ್ನಲ್ಲಿ ಆರಂಭವಾದ ಮಳೆಯ ಅವಾಂತರ ಇನ್ನೂ ನಿಂತಿಲ್ಲ. ಈ ಬಾರಿ ನಿರೀಕ್ಷೆ ಮೀರಿ ಸುರಿದ ಭಾರಿ ಮಳೆಯಿಂದ ರಾಜ್ಯದ ರೈತರು ಇನ್ನಿಲ್ಲದ ಸಂಕಷ್ಟವನ್ನು ಪಡುತ್ತಿದ್ದಾರೆ.
ಈ ವರ್ಷ ರೈತರ ಜೀವನದಲ್ಲಿ ಪ್ರಕೃತಿಯೊಂದಿಗೆ ಸರ್ಕಾರ ಕೂಡ ಚೆಲ್ಲಾಟವಾಡುತ್ತಿದೆ. ಅತಿಯಾದ ಮಳೆ ಪ್ರವಾಹದಿಂದ ಕಂಗೆಟ್ಟಿದ್ದ ರೈತ ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಉಳಿಸಿಕೊಂಡು ಖುಷಿ ಪಟ್ಟಿದ್ದರು. ಮಳೆಯ ಅವಾಂತರದಿಂದ ಉಳಿದ ಬೆಳೆಯಿಂದ ಈ ವರ್ಷದ ಬದುಕು ಕಟ್ಟಿಕೊಳ್ಳಲು ರೈತರು ಮುಂದಾಗಿದ್ದಾರೆ.
ಧಾರವಾಡದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ 24 ಗಂಟೆ ಗಡುವು
ಆದರೆ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರದಿಂದ ರೈತರ ಬದುಕು ಅತಂತ್ರವಾಗಿದೆ. ಮಳೆಯಿಂದ ಉಳಿದ ಬೆಳೆಗೆ
ಸರಿಯಾದ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳು ಇಲ್ಲದೆ ರೈತರು ಪರದಾಡುತ್ತಿದ್ದಾರೆ.
ಮೂರು ಎಕರೆ ಮೆಣಸಿನ ಬೆಳೆ ನಾಶ
ಈ ಎಲ್ಲಾ ಕಾರಣಗಳಿಂದ ಹುಬ್ಬಳ್ಳಿಯ ರೈತರೊಬ್ಬರು ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನು ತಾನೇ ತನ್ನ ಕೈಯಾರೆ ಹಾಳು ಮಾಡಿದ್ದಾರೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತ ಬೆಳೆಗೆ ಸರಿಯಾದ ಬೆಲೆ ಸಿಗದೆ ನೊಂದು ತನ್ನ ಜಮೀನಿನಲ್ಲಿ ಇರುವ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ್ದಾರೆ. ಜೈಪಾಲ ಯೋಗಪ್ಪನವರ ಎಂಬ ರೈತ ಮೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ. ರೈತರು ಸಾಲ ಸೋಲ ಮಾಡಿ ಬೆಳೆದ ಬೆಳೆಯನ್ನು ತಾವೇ ನಾಶ ಮಾಡುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ: ವಾಣಿಜ್ಯ ನಗರಿಯಲ್ಲಿ ಕಂಗೊಳಿಸಿದ ಕನ್ನಡದ ತೇರು
ಕಳೆದ ಬಾರಿಗಿಂತ ಈ ಬಾರಿ ನೆಲಕಚ್ಚಿದ ಮೆಣಸಿನ ಬೆಲೆ
ಅಕಾಲಿಕ ಮಳೆಗೆ ಹಾಳಾಗಿದ್ದ ಮೆಣಸಿನಕಾಯಿ ಬೆಳೆಯಲ್ಲಿ ಇದೀಗ ಅಳಿದುಳಿದ ಮೆಣಸಿನಕಾಯಿಗೂ ಬೆಲೆ ಇಲ್ಲದೆ ಇರುವುದರಿಂದ ರೈತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ಮತ್ತು ಕಳೆದ ವರ್ಷ ಕ್ವಿಂಟಲ್ಗೆ 50 ಸಾವಿರವರೆಗೆ ಮಾರಾಟವಾಗಿದ್ದರಿಂದ ಈ ವರ್ಷ ರೈತರು ಅತಿಯಾದ ಕಾಳಜಿಯಿಂದ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಪ್ರಾರಂಭದಿಂದಲೂ ತೇವಾಂಶ ಹೆಚ್ಚಳದಿಂದ ಹಳದಿ, ಮುಟುರು, ಬೂದು ರೋಗಕ್ಕೆ ಒಳಗಾದ ಬೆಳೆ ಸಂರಕ್ಷಣೆಗಾಗಿ ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಮಾರುಕಟ್ಟೆಯಲ್ಲಿ ಈಗ ಬೆಳೆ ಇಲ್ಲದ ಪರಿಸ್ಥಿತಿ ಉಂಟಾಗಿದ್ದು ಇದೇ ಬೆಳೆ ನಂಬಿದ ರೈತರು ಕಂಗಾಲಾಗಿದ್ದಾರೆ.
ಮಳೆಯಿಂದ ಬಹುತೇಕ ಮೆಣಸಿನಕಾಯಿ ಬೆಳೆ ನಾಶ
ಈ ಬಾರಿಯ ಸಮೃದ್ಧವಾಗಿ ಬೆಳೆದ ಬೆಳೆ ಕಂಡು ಹರ್ಷಗೊಂಡಿದ್ದ ರೈತರು ಖರ್ಚು ಮಾಡಲು ಹಿಂದೇಟು ಹಾಕದೆ ನಾ ಹೆಚ್ಚು, ನೀ ಹೆಚ್ಚು ಎನ್ನುವಷ್ಟರ ಮೆಟ್ಟಿಗೆ ಪ್ರತಿಷ್ಠೆಯಾಗಿಸಿಕೊಂಡಿದ್ದರು. ಆದರೆ ರೈತರ ದುರಾದೃಷ್ಟವೋ ಎನ್ನುವಂತೆ ಅತಿಯಾದ ಮಳೆಯಿಂದ ಸೂಕ್ಷ್ಮವಾದ ಬೆಳೆ ಬೇರು ಕೊಳೆ, ಸಿಡಿ ರೋಗ, ಮಚ್ಚೆ ರೋಗಕ್ಕೆ ಬಲಿಯಾಗಿತ್ತು. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಕುಂದಗೋಳ ತಾಲೂಕಿನ 3000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದೆ. ಕಪ್ಪು ಮಣ್ಣಿನ ಪ್ರದೇಶಗಳಾದ ಕುಂದಗೋಳ ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಕಡ್ಡಿ, ಡಬ್ಬಿ ಮೆಣಸಿನ ಕಾಯಿ ಬೆಳೆಯಲಾಗಿತ್ತು.
ಬೆಂಬಲ ಬೆಲೆ ಇಲ್ಲದೆ ರೈತರ ಪರದಾಟ
ಸದ್ಯ ಮಾರುಕಟ್ಟೆಯಲ್ಲಿ ಕಡ್ಡಿಗಾಯಿ ಮೆಣಸಿನ ಕಾಯಿಗೆ 15,000 ರಿಂದ 20,000 ರೂಪಾಯಿ ಮತ್ತು ಡಬ್ಬಿ ಮೆಣಸಿನ ಕಾಯಿಗೆ 25,000 ರಿಂದ 30,000 ರೂಪಾಯಿ ಇದೆ. ಬೆಲೆಯೂ ಕಡಿಮೆ ಹಾಗೂ ಬೆಳೆ ಬಾರದ್ದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಶಾದಾಯಕವಾದ ಈ ಬೆಳೆಗೆ ರೈತರು ಬಿತ್ತನೆ, ಸಸಿ ಬೆಳೆಸುವುದು, ನಾಟಿ ಮಾಡುವುದು, ಗೊಬ್ಬರ, ರಸಾಯನಿಕ ಸಿಂಪಡಣೆ ಸೇರಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಮಳೆ ಹಾಗೂ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ಬೆಲೆ ಸಂಪೂರ್ಣ ನೆಲಕಚ್ಚಿದ್ದರಿಂದ ರೈತರು ಪರದಾಡುವಂತಾಗಿದೆ.