ಮಿಡತೆ ದಾಳಿ; “ತಿನ್ನೋ ಅನ್ನಕ್ಕೆ ಮಣ್ಣಾಕಿ” ಬೆಳೆ ಉಳಿಸಿಕೊಳ್ಳಬಹುದಂತೆ...!
ಭಾರತದ ಹಲವು ರಾಜ್ಯಗಳು ಮರುಭೂಮಿ ಮಿಡತೆಗಳ ಸಮೂಹದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ಚಿಂತೆಗೀಡಾಗಿರುವ ಈ ದಿನಗಳಲ್ಲಿ ತೆಲಂಗಾಣದ ಪದ್ಮಶ್ರೀ ಪ್ರಶಸ್ತಿ ವಿಜೇತ ರೈತ ಚಿಂತಾಲ ವೆಂಕಟರೆಡ್ಡಿ ರೈತರು ಮರುಭೂಮಿ ಮಿಡತೆಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿಶಿಷ್ಟವಾದ ಉಪಾಯವೊಂದನ್ನು ಹೇಳಿಕೊಟ್ಟಿದ್ದಾರೆ.
ತಿನ್ನೋ ಅನ್ನಕ್ಕೆ ಮಣ್ಣಾಕೋದು ಅಂತೀವಲ್ಲ. ಅದೇ ಉಪಾಯ. ಈಗ ಮರುಭೂಮಿ ಮಿಡತೆ ರೈತರಿಗೆ ಮತ್ತು ದೇಶಕ್ಕೆ ತಲೆನೋವಾಗಿರೋದೇ ಅವುಗಳು ಬೆಳೆದು ನಿಂತ ಬೆಳೆಗಳನ್ನೆಲ್ಲಾ ಮುಕ್ಕಿ ಖಾಲಿ ಮಾಡುತ್ತಿರುವುದರಿಂದ. ಅದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅದಕ್ಕೆ ಪರಿಹಾರ ರೈತರು ಬೆಳೆ ಬೆಳೆದ ಮಣ್ಣಿನಲ್ಲೇ ಇದೆ ಎನ್ನುತ್ತಿದ್ದಾರೆ ಎಂದು ರೈತ ಚಿಂತಾಲ ವೆಂಕಟರೆಡ್ಡಿ. ಈ ಕುರಿತ ವಿವರ ಇಲ್ಲಿದೆ...

ಇದೇ ವೇಗದಲ್ಲಿ ದಾಳಿ ಮುಂದುವರೆದರೆ ಆಹಾರ ಭದ್ರತೆಗೂ ಕುತ್ತು
ಈಗಾಗಲೇ ದೇಶದ 7 ರಾಜ್ಯಗಳಲ್ಲಿ ತನ್ನ ಹಾವಳಿ ಪ್ರಾರಂಭಿಸಿರುವ ಮಿಡತೆಗಳು, ಬೆಳೆಗಳಿಗೆ ಮುತ್ತಿಗೆ ಹಾಕಿವೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಂಡುಬಂದ ಮಿಡತೆಗಳು ಗುರುವಾರ ಉತ್ತರಪ್ರದೇಶ ಮತ್ತು ಪಂಜಾಬ್ ಗಡಿಯಲ್ಲೂ ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ಇದೇ ವೇಗದಲ್ಲಿ ಇವುಗಳ ಉಪಟಳ ಮುಂದುವರೆದರೆ ದೇಶದ ಆಹಾರ ಭದ್ರತೆಗೂ ಕುತ್ತು ಬರುವ ಸಂಭವ ಇರುವುದರಿಂದ ಇವುಗಳನ್ನು ನಿಯಂತ್ರಿಸಬೇಕು ಎಂಬುದು ದೇಶದ ಆದ್ಯತೆಯ ವಿಷಯವಾಗಿದೆ.

“ತಿನ್ನೋ ಅನ್ನಕ್ಕೆ ಮಣ್ಣಾಕಿ” ಎಂದ ವೆಂಕಟರೆಡ್ಡಿ
ದೇಶದ ಉತ್ತರ ದಿಕ್ಕಿನಲ್ಲಿ ವಿಜ್ಞಾನಿಗಳು ಮರುಭೂಮಿ ಮಿಡತೆಗಳನ್ನು ನಿಯಂತ್ರಿಸಲು/ಸಾಯಿಸಲು ಏನೆಲ್ಲಾ ಕೀಟನಾಶಕಗಳನ್ನು ಕೊಡಬಹುದು ? ಜೈವಿಕ ಕೀಟನಾಶಕಗಳಾದರೆ ಉತ್ತಮ. ಪರಿಸರಕ್ಕೆ ಹಾನಿಯಿರುವುದಿಲ್ಲ. ಇನ್ನು ರಾಸಾಯನಿಕ ಕೀಟನಾಶಕಗಳಾದರೆ ಇತರೆ ಜೀವಿಗಳಿಗೆ ಅಪಾಯಕಾರಿಯಲ್ಲದ ಪರಿಕರಗಳನ್ನು ಕೊಡಬಹುದು ಎಂದೆಲ್ಲಾ ದಿನಪೂರ್ತಿ ಚರ್ಚೆ, ಪ್ರಯೋಗಗಳಲ್ಲಿ ಕುಳಿತಿದ್ದರೆ, ಇತ್ತ ದಕ್ಷಿಣ ದಿಕ್ಕಿನಲ್ಲಿ ವೆಂಕಟರೆಡ್ಡಿ ಅವರು ರೈತರಿಗೆ ಮಿಡತೆ "ತಿನ್ನೋ ಅನ್ನಕ್ಕೆ ಮಣ್ಣಾಕಿ" ಎಂದು ಹೇಳಿದ್ದಾರೆ !

"ಮಣ್ಣನ್ನು ನೀರಿಗೆ ಬೆರೆಸಿ ಸಿಂಪರಣೆ ಮಾಡಿ"
ತಮ್ಮ ಹೊಲಗಳಲ್ಲಿ ನಾಲ್ಕೈದು ಅಡಿ ಆಳಕ್ಕೆ ಗುಂಡಿ ತೆಗೆದು ಅಲ್ಲಿನ ಮಣ್ಣನ್ನು ತೆಗೆದು ನೀರಿಗೆ ಬೆರೆಸಿ ಚೆನ್ನಾಗಿ ಕಲೆಸಿ ಸೋಸಿ ಬೆಳೆಗಳಿಗೆ ಸಿಂಪರಣೆ ಕೊಡಿ, ಮಣ್ಣು ಮೆತ್ತಿರುವ ಎಲೆ-ಗಿಡಗಳನ್ನು ಮರುಭೂಮಿ ಮಿಡತೆ ತಿನ್ನುವುದಿಲ್ಲ, ಮುಂದಕ್ಕೆ ಹಾರಿ ಹೋಗುತ್ತವೆ. ನಿಮ್ಮ ಬೆಳೆ ಸೇಫ್ ಎಂದು ಹೇಳಿದ್ದಾರೆ. ಈ ತಂತ್ರಜ್ಞಾನಕ್ಕೆ ಅವರಿಗೆ ಪೇಟೆಂಟ್ ಕೂಡಾ ಇದೆಯಂತೆ.

ಕಾರ್ಯಸಾಧುವಾದರೆ ರೈತರು ಬೆಳೆ ಉಳಿಸಿಕೊಳ್ಳಬಹುದು
200 ಲೀಟರ್ ಅಳತೆಯ ಡ್ರಮ್ ನಲ್ಲಿ 30-40 ಕೆ.ಜಿ ಮಣ್ಣು ಮಿಶ್ರಣ ಮಾಡಿ ಸಿಂಪರಣೆ ಕೊಟ್ಟರೆ ಸಾಕಂತೆ. ಅದೂ ಆಗಲಿಲ್ಲವೆಂದರೆ ಮೊದಲು ಬೆಳೆಗಳ ಮೇಲೆ ನೀರನ್ನು ಸಿಂಪಡಿಸಿ ನಂತರ ಅದರ ಮೇಲೆ ಮಣ್ಣು ಎರಚಲೂಬಹುದಂತೆ. ಹೀಗೆ ಮಾಡಿದಾಗ ನಿಮ್ಮ ಬೆಳೆ ಮರುಭೂಮಿ ಮಿಡತೆಗೆ ಆಹಾರವಾಗುವುದು (ಮೇವಾಗುವುದು) ತಪ್ಪುತ್ತದೆ. ಬೆಳೆ ಉಳಿಸಿಕೊಳ್ಳಬಹುದು ಎಂದಿದ್ದಾರೆ. ಈ ಬಗ್ಗೆ ತೆಲಂಗಾಣ ರಾಜ್ಯದಲ್ಲಿ ಸುದ್ದಿಯಾಗಿದೆ. ಇದು ಕಾರ್ಯಸಾಧುವಾದ ಐಡಿಯಾ ಆದಲ್ಲಿ ರೈತರು ಮಿಡತೆ ತಿನ್ನೋ ಅನ್ನಕ್ಕೆ ಮಣ್ಣಾಕಿ ಬೆಳೆ ಉಳಿಸಿಕೊಳ್ಳಬಹುದು.












Click it and Unblock the Notifications