"ಕಾಂಗ್ರೆಸ್ಸೇ ರಾಹುಲ್ ಗಾಂಧಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ"
ಭೋಪಾಲ್, ಡಿಸೆಂಬರ್ 24: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು, ಗುರುವಾರ ಕಾಯ್ದೆ ವಿರುದ್ಧ ಎರಡು ಕೋಟಿ ರೈತರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಜ್ಞಾಪನಾ ಪತ್ರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಲ್ಲಿಸಿದ್ದಾರೆ.
ಇದೇ ಸಂದರ್ಭ ಮೋದಿ ಸರ್ಕಾರ ರೈತ ವಿರೋಧಿಯಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಈ ಹೇಳಿಕೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಬಾಗ್ ಪತ್ ನಲ್ಲಿ ಗುರುವಾರ ಕಿಸಾನ್ ಮಜ್ದೂರ್ ಸಂಘದ ರೈತರ ನಿಯೋಗವನ್ನು ತೋಮರ್ ಭೇಟಿ ಮಾಡಿದ್ದು, "ಕೇಂದ್ರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಉತ್ತರ ಪ್ರದೇಶದ ರೈತರ ನಿಯೋಗ ನನಗೆ ಪತ್ರ ಬರೆದಿದೆ. ಯಾವುದೇ ಒತ್ತಡದ ನಡುವೆಯೂ ಸರ್ಕಾರ ಈ ಕಾಯ್ದೆಗಳನ್ನು ರದ್ದುಗೊಳಿಸಬಾರದು ಎಂದು ಕೇಳಿಕೊಂಡಿದೆ" ಎಂದು ತಿಳಿಸಿದರು.

ಕಾಯ್ದೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಆರಂಭವಾದ ದಿನದಿಂದ ಹಲವು ರೈತ ಸಂಘಗಳನ್ನು ಭೇಟಿ ಮಾಡಿದ್ದೇವೆ. ಈ ಕಾಯ್ದೆಗಳಿಗೆ ಸಾಕಷ್ಟು ರೈತ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಸಮರ್ಥಿಸಿಕೊಂಡರು.
ಇದೇ ಸಂದರ್ಭ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏನನ್ನು ಹೇಳುತ್ತಿದ್ದಾರೋ, ಅದನ್ನು ಕಾಂಗ್ರೆಸ್ ನವರೇ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಂದು ರೈತರ ಸಹಿಗಳನ್ನು ಇಟ್ಟುಕೊಂಡು ರಾಷ್ಟ್ರಪತಿ ಭೇಟಿಯಾಗಿ ಪ್ರತಿಭಟನೆ ಬೆಂಬಲಿಸಲು ಹೋಗಿದ್ದರು. ಆದರೆ ಇಲ್ಲಿನ ರೈತರನ್ನು ವಿಚಾರಿಸಿದರೆ, ಸಹಿ ಪಡೆಯಲು ಕಾಂಗ್ರೆಸ್ ನಿಂದ ಯಾರೂ ಬಂದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು" ಎಂದು ಪ್ರಶ್ನಿಸಿದರು.
"ರಾಹುಲ್ ಗಾಂಧಿಗೆ ರೈತರ ಬಗ್ಗೆ ಅಷ್ಟೊಂದು ಚಿಂತೆಯಿದ್ದರೆ, ತಾನೇ ರೈತರಿಗೆ ಏನಾದರೂ ಮಾಡಬಹುದಿತ್ತು. ಕಾಂಗ್ರೆಸ್ ಯಾವಾಗಲೂ ರೈತ ವಿರೋಧಿಯಾಗಿಯೇ ಇದೆ. ಈಗ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications