ಕಾಡಾನೆಗಳ ಅಟ್ಟಹಾಸ, ರೈತರ ಬೆಳೆ ನಾಶ
ಮೈಸೂರು, ನವೆಂಬರ್, 12 : ಕಾಡಾನೆಗಳ ಹಿಂಡು ನಂಜನಗೂಡು ತಾಲೂಕಿನ ಮಲ್ಕುಂಡಿಗೆ ಹಾಡಹಗಲೇ ಲಗ್ಗೆಯಿಟ್ಟ ಪರಿಣಾಮ ಬೆಳೆಗಳು ನಾಶವಾಗಿದ್ದು, ಕಾಡಾನೆಗಳನ್ನು ಓಡಿಸಲು ರೈತರು ಹರಸಾಹಸ ಪಡಬೇಕಾಯಿತು.
ಹುರಾ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜು ಎಂಬುವರ 6 ಎಕರೆ ಜಮೀನಿಗೆ ನುಗ್ಗಿದ ಕಾಡಾನೆಗಳು ಕಬ್ಬು, ತೊಗರಿ ಸೇರಿದಂತೆ ಹಲವು ಬೆಳೆಗಳು ನಾಶಪಡಿಸಿದ್ದು, ಸುಮಾರು 4 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. 3 ಆನೆಗಳ ಹಿಂಡನ್ನು ಕಂಡ ಗ್ರಾಮಸ್ಥರು ಭಯದಲ್ಲೇ ದಿನ ತಳ್ಳುವಂತಾಗಿದೆ.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]

ಕಷ್ಟಪಟ್ಟು ಬೆಳೆದ ಫಸಲು ಕೈಗೆ ಸಿಗದೆ ಕಾಡಾನೆಗಳ ಪಾಲಾಗುತ್ತಿವೆ. ರಾತ್ರಿ ವೇಳೆ ಬರುತ್ತಿದ್ದ ಕಾಡಾನೆಗಳು ಇದೀಗ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಹಾಡಹಗಲೇ ಜಮೀನು, ರಸ್ತೆಯಲ್ಲೇ ಕಂಡು ಬರುತ್ತಿದೆ. ಇದರಿಂದ ಗ್ರಾಮದ ಜನರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.[ಆನೆ ಹಿಂಡು ದಾಳಿ ಮಾಡಿದಾಗ ಆತ ಏನು ಮಾಡಿದ?]
ಅರಣ್ಯಾಧಿಕಾರಿ ಜಯಶಂಕರ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ರೈತರು , 'ಫಸಲು ನಾಶವಾಗಿರುವುದಕ್ಕೆ ಸೂಕ್ತ ಪರಿಹಾರ ನೀಡಬೇಕು. ಹೀಗೆ ಕಾಡಾನೆಗಳ ಹಾವಳಿ ಮುಂದುವರೆದರೆ ಫಸಲು ನಾಶವಾಗಿ ಸಾಲದ ಹೊರೆ ಹೆಚ್ಚಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಆನೆಗಳ ಹಾವಳಿ ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications