ಜಗಳೂರು; ಉಡಾಫೆ ಉತ್ತರ ನೀಡಿದ ಎಇಇಗೆ ರೈತರಿಂದ ಬಿತ್ತು ಗೂಸಾ
ದಾವಣಗೆರೆ, ಜನವರಿ, 18: ರೈತರಿಗೆ ಉಡಾಫೆ ಉತ್ತರ ನೀಡಿದ ಎಇಇ ಗಿರೀಶ್ ನಾಯ್ಕ್ ಮೇಲೆ ಹಲ್ಲೆ ನಡೆಸಿದ ಘಟನೆ ಜಗಳೂರು ತಾಲೂಕಿನ ಪಲ್ಲಾಗಟ್ಟೆಯಲ್ಲಿನ ಕೆಇಬಿ ಇಲಾಖೆ ಬಳಿ ನಡೆದಿದೆ. ಶಾಸಕ ಎಸ್. ವಿ. ರಾಮಚಂದ್ರಪ್ಪ ಹುಟ್ಟುಹಬ್ಬವಿದೆ. ನೀವೆಲ್ಲಾ ಸುಮ್ಮನಿರಬೇಕು ಎಂದಿದ್ದಕ್ಕೆ ರೈತರು ಎಇಇ ಗಿರೀಶ್ ನಾಯ್ಕ್ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಗಳೂರು ತಾಲೂಕಿನ ಪಲ್ಲಾಗಟ್ಟೆ ಸೇರಿದಂತೆ ಕೆಲ ಪ್ರದೇಶಗಳಲ್ಲಿ ನೀರಾವರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಎಇಇಗೆ ಕೇಳಿದ್ದರು. ವಿದ್ಯುತ್ ಯಾಕೆ ಪೂರೈಸಿಲ್ಲ ಎಂದು ಕೇಳಲು ಬಂದ ವೇಳೆ ಜಗಳೂರು ಶಾಸಕರ ಹುಟ್ಟುಹಬ್ಬ ಇದೆ ಇವಾಗ ಸುಮ್ಮನಿರಿ ಎಂದು ಅಧಿಕಾರಿ ಗಿರೀಶ್ ನಾಯ್ಕ್ ಉಡಾಫೆ ಉತ್ತರ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ತಳ್ಳಾಟ, ನೂಕಾಟ ನಡೆಸಿದ್ದರು. ಅಲ್ಲದೆ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನೂರಾರು ರೈತರು ಸೇರಿ ಅಧಿಕಾರಿಗೆ ಥಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.

ಕಾರ್ಖಾನೆಯ ನಿರ್ಲಕ್ಷ್ಯ, ಆರೋಪ
ಇನ್ನು ಕುಕ್ಕುವಾಡ ಗ್ರಾಮದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಗಣೇಶರ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನರು ಬದುಕುವುದು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ನಿರ್ಲಕ್ಷ್ಯ ವಿರೋಧಿಸಿ ಜನವರಿ 19ರ ಗುರುವಾರ ಬೆಳಗ್ಗೆ 11 ಗಂಟೆಗೆ ಕುಕ್ಕುವಾಡ ಗ್ರಾಮದಲ್ಲಿನ ಚನ್ನಗಿರಿ ರಸ್ತೆ ತಡೆ ಮಾಡಲಾಗುವುದು ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ. ಎಚ್ಚರಿಕೆ ನೀಡಿದ್ದರು.

ಕಾರ್ಖಾನೆ ಬೂದಿಯಿಂದ ಅನಾರೋಗ್ಯ
ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಪ್ರತಿ ನಿತ್ಯ ಸಕ್ಕರೆ ಕಾರ್ಖಾನೆಯ ಚಿಮಣಿಯಿಂದ ಬೂದಿ ಹೊರಬರುತ್ತಿದೆ. ಹಂಚಿನ ಮನೆಗಳ ಮೇಲೆ ಈ ಬೂದಿ ಬಿದ್ದು ಶೇಖರಣೆವಾಗಿ ಗಾಳಿಯಲ್ಲಿ ಎಲ್ಲಾ ಕಡೆ ಪಸರಿಸುತ್ತದೆ. ಈ ಬೂದಿ ಊಟ ಮಾಡುವಾಗ ತಟ್ಟೆಯಲ್ಲಿ ಬೀಳುವುದರಿಂದ ಇದನ್ನೇ ಊಟ ಮಾಡಿದ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಒಣ ಹಾಕಿದ ಬಟ್ಟೆಗಳ ಮೇಲೂ ಈ ಬೂದಿ ಬೀಳುವುದರಿಂದ ಬೂದು ಬಣ್ಣಕ್ಕೆ ತಿರುಗುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದರು.












Click it and Unblock the Notifications