ರಾಮನಗರ ಜಿಲ್ಲೆ ರೈತರಿಗೆ ಉಚಿತ ಕೋವಿಡ್ ಲಸಿಕೆ ಹಾಕುವ ಅಭಿಯಾನ!
ಬೆಂಗಳೂರು, ಆ. 13: ರಾಮನಗರ ಜಿಲ್ಲೆಯ ರೈತರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಶುಕ್ರವಾರ ಚಾಲನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಕಲ್ಪ ಫೌಂಡೇಶನ್ ಸಹಯೋಗದಲ್ಲಿ ರೈತರ ಉತ್ಪಾದಕ ಕಂಪನಿಗಳ ಸದಸ್ಯರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ರಾಮನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
"ಕೃಷಿ ಅತ್ಯಗತ್ಯ ಕ್ಷೇತ್ರವಾಗಿದ್ದು, ಯಾವುದೇ ಕಾರಣಕ್ಕೆ ಕೃಷಿ ಚಟುವಟಿಕೆಗಳು ನಿಲ್ಲಲೇಬಾರದು. ಒಂದು ವೇಳೆ ಬೇಸಾಯಕ್ಕೆ ಅಡ್ಡಿ ಉಂಟಾದರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ" ಎಂದು ಇದೇ ಸಂದರ್ಭದಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.
"ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು ಎನ್ನುವುದೇ ಸರಕಾರದ ಉದ್ದೇಶ. ಅದಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದ ಅವರು, ನಗರಗಳಲ್ಲಿ ಸೃಷ್ಟಿಯಾಗುವ ಬಿಕ್ಕಟ್ಟುಗಳನ್ನು ತಂತ್ರಜ್ಞಾನದ ಸಹಕಾರದಿಂದ ಬಗೆಹರಿಸಿಕೊಳ್ಳುವಂತೆ, ಅದೇ ರೀತಿ ಗ್ರಾಮೀಣ ಭಾಗದಲ್ಲಿಯೂ ಪರಿಹಾರಗಳನ್ನು ನೀಡಬೇಕು. ಆ ದಿಕ್ಕಿನಲ್ಲಿ ಕೃಷಿ ಕಲ್ಪ ಕೆಲಸ ಮಾಡುತ್ತಿದೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರೈತರ ಉತ್ಪಾದಕ ಸಂಸ್ಥೆಗಳು (FPO) ಹೆಚ್ಚೆಚ್ಚು ಸಹಕಾರಿ ಎಂದಿದ್ದರು. ಅದು ನಮ್ಮ ಭಾಗದಲ್ಲಿಯೂ ಸಾಕಾರವಾಗಿದೆ. ರೈತರ ಆದಾಯ ದ್ವಿಗುಣವಾಗುತ್ತಿದೆ. ಇಂಥ ಸಂಘಗಳ ಜತೆ ಸೇರಿ ರೈತರು ಕೆಲಸ ಮಾಡಿದರೆ ಅತ್ಯುತ್ತಮ ಲಾಭ ಗಳಿಸಬಹುದು" ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

ಅಗ್ರಿ ಲಿಂಕ್ ಗಟ್ಟಿಯಾಗಿರಬೇಕು
"ಉತ್ಪಾದನೆ, ಖರೀದಿ ಮತ್ತು ಮಾರಾಟ ಎನ್ನುವ ಮೂರು ಅಂಶಗಳು ಕೃಷಿಯಲ್ಲಿ ಬಹಳ ಮುಖ್ಯ. ಈ ಲಿಂಕ್ ಗಟ್ಟಿಯಾಗಿರಬೇಕು. ಉತ್ತಮವಾದ ಫಸಲು ಸಿಕ್ಕಿದ ಮೇಲೆ ರೈತನಿಗೆ ನ್ಯಾಯಯುತ ಬೆಲೆ ಸಿಗಬೇಕು. ಬಳಿಕ ಖರೀದಿದಾರನೂ ಆ ಬೆಳೆಯನ್ನು ಉತ್ತಮ ದರಕ್ಕೆ ಮಾರಬೇಕು. ಈ ಸರಪಳಿ ಎಲ್ಲಿಯೂ ದುರ್ಬಲ ಆಗದಂತೆ ನೋಡಿಕೊಳ್ಳಬೇಕು" ಎಂದು ಡಾ. ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.

ರಾಮನಗರದಲ್ಲಿ ಹೊಸ ಯೋಜನೆ
ರೈತರಿಗೆ ಏನು ಬೆಳೆಯಬೇಕು? ಯಾರಿಗೆ ಮಾರಬೇಕು? ಎಂಬ ಬಗ್ಗೆ ಅರಿವು ಇರಬೇಕು. ಅವರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯಲ್ಲಿ ಮೊದಲ ಫೈಲಟ್ ಪ್ರಾಜೆಕ್ಟ್ ಆರಂಭ ಮಾಡಲಾಗಿದೆ. ಬಳಕ ಇತರೆ ಜಿಲ್ಲೆಗಳಿಗೂ ಯೋಜನೆಯನ್ನು ವಿಸ್ತರಿಸುವ ಕೆಲಸ ಆಗಲಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೈತರ ಉತ್ಪಾದಕ ಸಂಘಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಇಲ್ಲಿ ಬೆಳೆಯಲಾಗುವ ತೆಂಗು ಈಗ ಆಂಧ್ರ ಪ್ರದೇಶದ ವೈಜಾಗ್ (ವಿಶಾಖಪಟ್ಟಣಂ)ನಲ್ಲಿ ಮಾರಾಟವಾಗುತ್ತಿದೆ. ವಾರಕ್ಕೆ ಒಂದು ಲೋಡ್ ತೆಂಗು ಅಲ್ಲಿಗೆ ಹೋಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಕೃಷಿ ಮತ್ತು ರೈತರ ಸಂಘಗಳ ನಡುವೆ ಸೌಹಾರ್ದತೆ
ರಾಮನಗರ ಜಿಲ್ಲೆಯಲ್ಲಿ ಕೃಷಿ ಮತ್ತು ರೈತರ ಸಂಘಗಳ (FPO) ನಡುವೆ ಸೌಹಾರ್ದತೆ ಮತ್ತು ಸಹಯೋಗ ಹೆಚ್ಚಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆದಿದೆ. ಇದೇ ಸಬೆಯಲ್ಲಿ ಕೃಷಿ ಕಲ್ಪ ಪೌಂಢೇಷನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಕೃಷಿ ಕಲ್ಪ ಸಿಇಒ ಸಿ.ಎಂ. ಪಾಟೀಲ್ ಸೇರಿದಂತೆ ಇನ್ನೂ ಹಲವರ ಜತೆ ಸಂವಾದ ನಡೆಸಿದ ಸಚಿವ ಡಾ. ಅಶ್ವಥ್ ನಾರಾಯಣ ವಿವಿಧ ಸಮಸ್ಯೆಗಳು-ಸವಾಲುಗಳ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್
ಈಗ ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲೀಕರಣ ಆಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿ ಡಿಜಿಟಲೀಕರಣ ಮಾಡುವ ಬಗ್ಗೆ ಮೊದಲ ಪೈಲೆಟ್ ಪ್ರಾಜೆಕ್ಟ್ ಜಾರಿಗೆ ಬರುತ್ತಿದೆ. ರೈತರಿಗೆ ತಾಂತ್ರಿಕತೆ ಕಲಿಸುವ ಉದ್ದೇಶದ ಜತೆಗೆ, ಸಣ್ಣ ಜಿಲ್ಲೆ ಹಾಗು ಹಳ್ಳಿಗಳಲ್ಲಿ ಉದ್ದಿಮೆದಾರರು ಸೃಷ್ಟಿಯಾಗಬೇಕು. ರೈತರ ಉತ್ಪಾದಕ ಸಂಘಗಳು ಮತ್ತು ರೈತರ ನಡುವೆ ಹೆಚ್ಚೆಚ್ಚು ಸಂಪರ್ಕ ಕಲ್ಪಿಸಿ ರೈತರ ಆದಾಯ ಹೆಚ್ಚಿಸಬೇಕು ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.












Click it and Unblock the Notifications