ಮೃತ ರೈತನ ಕುಟಂಬಕ್ಕೆ ಸಾಂತ್ವನ ಹೇಳಿದ ಶಾಸಕಿ ಡಾ. ಅಂಜಲಿ ನಿಂಬಾಳಕರ
ಬೆಳಗಾವಿ, ಜೂನ್.17 : ತಾಲೂಕಿನ ಕೌಂದಲ್ ಗ್ರಾಮದ ಬಳಿ ಇತ್ತೀಚೆಗೆ ಕರಡಿ ದಾಳಿಯಿಂದ ಮೃತಪಟ್ಟ ರೈತ ಗಣಪತಿ ಪಾಟೀಲ ಅವರ ಮನೆಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯಿಂದ ಅಗತ್ಯ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಖಾನಾಪುರ ಉಪ ವಿಭಾಗದ ಎಸಿಎಫ್ ಸಿ.ಬಿ. ಪಾಟೀಲ, ಆರ್ಎಫ್ಒ ಎಸ್.ಎಸ್. ನಿಂಗಾಣಿ, ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ ಸೇರಿದಂತೆ ಉಪಸ್ಥಿತರಿದ್ದರು.
ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ರೈತ ಗಣಪತಿ ಪಾಟೀಲನ ಮೇಲೆ ಕರಡಿ ದಾಳಿ ನಡೆಸಿತ್ತು. ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಕೌಂದಲ್ ಗ್ರಾಮದಲ್ಲಿ ಗಣಪತಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಎಸಿಎಫ್ ಸಿ.ಬಿ. ಪಾಟೀಲ ತಾಲೂಕಿನ ಅರಣ್ಯದಲ್ಲಿ ಕರಡಿಗಳ ಸಂಖ್ಯೆ ವೃದ್ಧಿಸಿದೆ. ಇಲ್ಲಿಯವರೆಗೆ ಗೋಲಿಹಳ್ಳಿ, ನಾಗರಗಾಳಿ, ಲೋಂಡಾ ಮತ್ತು ಕಣಕುಂಬಿ ವಲಯಗಳ ಅರಣ್ಯದಲ್ಲಿ ಕರಡಿಗಳ ಚಲನವಲನದ ಬಗ್ಗೆ ಇಲಾಖೆಗೆ ಮಾಹಿತಿ ಇತ್ತು.
ಆದರೆ ಇದೇ ಮೊದಲ ಸಲ ಖಾನಾಪುರ ವಲಯದ ಕೌಂದಲ್ ಭಾಗದಲ್ಲಿ ಕರಡಿ ಕಾಣಿಸಿಕೊಂಡಿದೆ. ಕೌಂದಲ್, ಕರಂಬಳ, ಹೊಣಕಲ್, ನಾವಗಾ ಮತ್ತು ಗಂಗವಾಳಿ ಪ್ರದೇಶದಲ್ಲಿ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಕರಡಿಯನ್ನು ಮರಳಿ ಅರಣ್ಯಕ್ಕೆ ಅಟ್ಟುವ ಕೆಲಸ ಮಾಡಲಿದ್ದಾರೆ.

ಇದಕ್ಕೆ ಸ್ವಲ್ಪ ಸಮಯ ತಗುಲುವ ಕಾರಣ ಒಂದೆರಡು ದಿನಗಳ ಕಾಲ ಈ ಭಾಗದ ರೈತರು ಒಂಟಿಯಾಗಿ ಸಂಚರಿಸಬಾರದು ಎಂದು ಸಲಹೆ ನೀಡಿದ್ದರು.











Click it and Unblock the Notifications