ಕೃಷಿ ಕಾಯ್ದೆಗಳ ಪ್ರತಿ ಹರಿದು ಹಾಕಿದ ಅರವಿಂದ್ ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 17: ಗುರುವಾರ ವಿಧಾನ ಸಭೆಯಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ಪ್ರತಿಯನ್ನು ಹರಿದು ಹಾಕಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ದೇಶದ ರೈತರಿಗೆ ವಂಚನೆ ಮಾಡಲು ನನ್ನಿಂದ ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಗುರುವಾರ ವಿಧಾನ ಸಭೆಯಲ್ಲಿ ಕೃಷಿ ಕಾಯ್ದೆಗಳ ಕುರಿತು ಮಾತನಾಡಿ, "ಬಿಜೆಪಿಯ ಫಂಡ್ ಗಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆಯೇ ಹೊರತು ರೈತರಿಗಾಗಿ ಅಲ್ಲ. ನನ್ನ ದೇಶದ ರೈತರಿಗೆ ನಾನು ವಂಚನೆ ಮಾಡಲಾರೆ. ಇಪ್ಪತ್ತು ದಿನಗಳಿಂದಲೂ ಚಳಿಯಲ್ಲಿ ನಡುಗುತ್ತಾ ಕುಳಿತಿರುವ ರೈತರನ್ನು ನೋಡಿದರೆ ನೋವಾಗುತ್ತದೆ" ಎಂದು ಹೇಳಿದ್ದಾರೆ. ಮುಂದೆ ಓದಿ...
"ಅರವಿಂದ್ ಕೇಜ್ರಿವಾಲ್ ಉಪವಾಸ ಬರೀ ಬೂಟಾಟಿಕೆ"
"ಮೊದಲು ನಾನು ಈ ದೇಶದ ಪ್ರಜೆ"
"ನಾನು ಮೊದಲು ಈ ದೇಶದ ಪ್ರಜೆ. ಆನಂತರ ಮುಖ್ಯಮಂತ್ರಿ. ಈ ವಿಧಾನ ಸಭೆ ಕೇಂದ್ರದ ಈ ಮೂರು ಕೃಷಿ ಕಾಯ್ದೆಗಳನ್ನು ತಿರಸ್ಕರಿಸಿದೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತದೆ" ಎಂದು ಹೇಳಿದರು.
"ಬ್ರಿಟಿಷರಿಗಿಂತ ಕಡೆಯಾಗಬೇಡಿ"
"ಕೊರೊನಾ ಸೋಂಕಿನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತುರ್ತಾಗಿ ಈ ಕಾಯ್ದೆಗಳನ್ನು ಜಾರಿಗೆ ತರುವಂಥ ಅವಸರವಾದರೂ ಏನಿತ್ತು" ಎಂದು ಪ್ರಶ್ನಿಸಿರುವ ಅವರು, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳದೇ ಮೊದಲ ಬಾರಿಗೆ ಈ ರೀತಿ ಕಾಯ್ದೆ ಜಾರಿಯಾಗಿದೆ. ನಾನು ಈ ಪ್ರತಿಗಳನ್ನು ಹರಿದುಹಾಕುವ ಮೂಲಕ, ಕೇಂದ್ರಕ್ಕೆ ಬ್ರಿಟಿಷರಿಗಿಂತ ಕಡೆಯಾಗಬೇಡಿ ಎಂದು ಕೇಳಿಕೊಳ್ಳುತ್ತೇನೆ" ಎಂದರು.
"ಎಲ್ಲಾ ರೈತರೂ ಭಗತ್ ಸಿಂಗ್ ಆಗಬೇಕು"
"ಎಲ್ಲಾ ರೈತರೂ ಭಗತ್ ಸಿಂಗ್ ನಂತಾಗಬೇಕು. ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುತ್ತೇವೆ ಎನ್ನುತ್ತಲೇ ಕೃಷಿ ಕಾಯ್ದೆಗಳ ಪ್ರಯೋಜನದ ಕುರಿತು ವಿವರಣೆಗಳನ್ನು ನೀಡುತ್ತಿದೆ. ಈ ಕಾಯ್ದೆಗಳಿಂದ ಪ್ರಯೋಜನವಿದೆ ಎಂದು ವಾದಿಸುತ್ತಿದ್ದಾರೆ. ಆದರೆ ನಿಜಕ್ಕೂ ಇದರಿಂದ ಪ್ರಯೋಜನವಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ಈ ಕಪ್ಪು ಕಾಯ್ದೆಗಳನ್ನು ತಿರಸ್ಕರಿಸುತ್ತೇನೆ"
ಈ ಇಪ್ಪತ್ತು ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಈ ಪ್ರತಿಭಟನೆಯಲ್ಲಿ ದಿನಕ್ಕೆ ಒಬ್ಬರಂತೆ ಹುತಾತ್ಮರಾಗುತ್ತಿದ್ದಾರೆ. ರೈತ ವಿರೋಧಿಯಾಗಿರುವ ಈ ಕಪ್ಪು ಕಾಯ್ದೆಗಳನ್ನು ನಾನು ತಿರಸ್ಕರಿಸುತ್ತೇನೆ. ಸರ್ಕಾರಕ್ಕೆ ಇದನ್ನು ರದ್ದುಪಡಿಸಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.