ದಾವಣಗೆರೆ; ಮೂಕ ರೈತನ ಸಜೀವ ದಹಿಸಿದ ಗುಡ್ಡದಲ್ಲಿನ ಆಕಸ್ಮಿಕ ಬೆಂಕಿ
ದಾವಣಗೆರೆ, ಫೆಬ್ರವರಿ 04: ಗುಡ್ಡದಲ್ಲಿ ದನ ಮೇಯಿಸಲು ಹೋಗಿದ್ದ ಮೂಕ ರೈತರೊಬ್ಬರು ಗುಡ್ಡಕ್ಕೆ ಬಿದ್ದಿದ್ದ ಆಕಸ್ಮಿಕ ಬೆಂಕಿಯಲ್ಲಿ ಸಿಲುಕಿ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.
ಕಂಚುಗಾರಹಳ್ಳಿ ಗ್ರಾಮದ ಮಾತು ಬಾರದ ಹಾಗೂ ಅಂಗವಿಕಲ ರೈತ ಚಂದ್ರಪ್ಪ (55) ಮೃತ ದುರ್ದೈವಿ. ದನಗಳ ಮೇಯಿಸಲು ಗುಡ್ಡಕ್ಕೆ ಹೋದಾಗ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ. ಪ್ರತಿದಿನ ಚಂದ್ರಪ್ಪ ಒಬ್ಬರೇ ದನಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದರು.
ದುರ್ಘಟನೆ ನಡೆದ ಸಮಯದಲ್ಲಿ ಯಾರೂ ಇಲ್ಲದ ಕಾರಣ ಹಾಗೂ ಮೂಕನಾಗಿರುವುದರಿಂದ ಕೂಗಲು ಆಗದೆ ಬೆಂಕಿಗೆ ಆಹುತಿಯಾಗಿದ್ದಾರೆ. ಇದೇ ಸಮಯದಲ್ಲಿ ಜಮೀನು ನೋಡಲು ಹೋಗುತ್ತಿದ್ದ ಸ್ಥಳೀಯರು ಬೆಂಕಿಯಲ್ಲಿ ರೈತ ಚಂದ್ರಪ್ಪನ ಮೂಕ ವೇದನೆಯ ಕಿರುಚಾಟ ಗಮನಿಸಿದ್ದಾರೆ.

ನಂತರ ಸ್ಥಳೀಯರು ಬಂದು ಬೆಂಕಿಯಲ್ಲಿ ಸುಟ್ಟು ಇನ್ನೂ ಸ್ವಲ್ಪ ಉಸಿರಾಡುತ್ತಿದ್ದ ಮೂಕ ರೈತ ಚಂದ್ರಪ್ಪನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾನೆ.
ದಾವಣಗೆರೆ ಜಿಲ್ಲೆಯ ಸೂಳೆಕೆರೆ ಗುಡ್ಡ ಬಸವಾಪಟ್ಟಣ ದುರ್ಗನಗುಡ್ಡ, ದಾಗಿನಕಟ್ಟೆಯ ಚಿಕ್ಕುಡದಮ್ಮನ ಗುಡ್ಡ, ಮರಬನಹಳ್ಳಿಯ ಬಸವನಗುಡ್ಡಗಳಲ್ಲಿ ಕಾಡಿಚ್ಚು ಮತ್ತು ಕೆಲ ಕಿಡಿಗೇಡಿಗಳು ಬೀಡಿ, ಸಿಗರೇಟ್ ಸೇದಿ ಪೊದೆಗಳ ಮೇಲೆ ಎಸೆಯುವುದರಿಂದ ಕಾಡಿಗೆ ಬೆಂಕಿ ಹರಡುತ್ತಿದೆ.

ಇದರಿಂದ ವನ್ಯ ಜೀವ ಸಂಕುಲ ನಾಶವಾಗುತ್ತಿದ್ದು, ಅಂತಹದೇ ಬೆಂಕಿ ಇದೀಗ ಮೂಕ ರೈತನ ಬಲಿ ಪಡೆದಿದ್ದು, ತಪ್ಪಿತಸ್ಥರನ್ನು ಆದಷ್ಟು ಬೇಗ ಸೆರೆ ಹಿಡಿಯಬೇಕು ಎಂದು ಅರಣ್ಯ ರಕ್ಷಕರನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನು ಸ್ಥಳಕ್ಕೆ ಡಿವೈಎಸ್ಪಿ ಪ್ರಶಾಂತ ಮನುಗೋಳಿ, ವೃತ್ತ ನಿರೀಕ್ಷಕ ಆರ್.ಆರ್.ಪಟೇಲ್, ಕಿಲೋವತಿ ಭೇಟಿ ನೀಡಿ ಪರಿಶೀಲಿಸಿದ್ದು, ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications