ಫಸಲಿಗೆ ಬಾರದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸುತ್ತಿರುವ ಅನ್ನದಾತರು
ದಾವಣಗೆರೆ, ಜುಲೈ, 29: ದಾವಣಗೆರೆಯ ವ್ಯಾಪ್ತಿಯಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ರೈತರು ಕಂಗೆಟ್ಟಿದ್ದಾರೆ. ಮೆಕ್ಕೆಜೋಳ, ಟೊಮೊಟೋ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದ್ದು, ಸಿಟ್ಟಿಗೆದ್ದ ರೈತರು ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ.
ಅತಿಯಾದ ಮಳೆಯಿಂದ ಅಪೂರ್ಣ ಬೆಳವಣಿಗೆಯಾಗಿರುವ ಮೆಕ್ಕೆಜೋಳ ಬೆಳೆಯನ್ನು ರೈತರೇ ತಮ್ಮ ಕೈಯಾರೆ ತೆಗೆದು ಹಾಕುತ್ತಿದ್ದಾರೆ. ಫಸಲ್ ಭಿಮಾ ಯೋಜನೆಯಡಿ ಪರಿಹಾರ ಸಿಗದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಫಸಲು ಬರದ ಕಾರಣ ಮೆಕ್ಕೆಜೋಳ ಬೆಳೆಯನ್ನು ಹಸುಗಳಿಗೆ ಆಹಾರವಾಗಿ ಕತ್ತರಿಸಿ ಹಾಕುತ್ತಿದ್ದಾರೆ. ಮತ್ತೆ ಕೆಲವರು ಟ್ರ್ಯಾಕ್ಟರ್ ಬಳಸಿ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಹುಚ್ಚವ್ವನಹಳ್ಳಿ, ಎಚ್.ಬಸವಾಪುರ, ನಲ್ಕುಂದ, ಕ್ಯಾತನಹಳ್ಳಿ, ಮಾಯಕೊಂಡ, ಗಂಗನಕಟ್ಟೆ, ಅಣಜಿ, ನೀರ್ಥಡಿ ಭಾಗದಲ್ಲಿ ಅತಿಯಾದ ಮಳೆಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ನೆಕಚ್ಚಿವೆ. ಆದ್ದರಿಂದ ಈ ರೀತಿ ಬೆಳೆಗಳನ್ನು ನಾಶಪಡಿಸಿ ಹಿಂಗಾರು ಅಲಸಂದೆ, ರಾಗಿ ಬಿತ್ತನೆ ಮಾಡಲು ಸಜ್ಜುಗೊಂಡಿದ್ದಾರೆ.
ಇದುವರೆಗೂ ಬೆಳೆವಿಮೆ ಪಾವತಿಸಿಕೊಳ್ಳುವ ಯಾವ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಮತ್ತೊಂದು ಕಡೆ ಸರ್ಕಾರ ನೀಡಿರುವ ಸಹಾಯವಾಣಿ ಕೆಲಸ ಮಾಡುತ್ತಿಲ್ಲ. ಇಂಥಹ ತುರ್ತು ಸಂದರ್ಭದಲ್ಲಾದರೂ ಇನ್ಸುರೆನ್ಸ್ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡಲು ವ್ಯವಸ್ಥೆ ಮಾಡಿದರೆ ಮುಂದಿನ ಬೆಳೆಗಾದರೂ ಬೀಜ, ಗೊಬ್ಬರದ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಬೆಳೆ ವಿಮೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪ್ರತಿ ಎಕರೆಗೆ 12 ಸಾವಿರ ರೂಪಾಯಿವರೆಗೂ ಖರ್ಚು ಮಾಡಿದ್ದ ರೈತರು ಅತಿಯಾದ ಮಳೆಯಿಂದ ಬೆಳೆ ಕಳೆದುಕೊಂಡು ಆತಂಕದಲ್ಲಿದ್ದಾರೆ. ಕೂಡಲೇ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕಿದೆ. ಇದು ಕೇವಲ ದಾವಣಗೆರೆ ತಾಲೂಕಿನ ರೈತರ ವ್ಯಥೆಯಲ್ಲ.
ಜಿಲ್ಲೆಯಾದ್ಯಂತ ಶೇಕಡಾ 70ರಷ್ಟು ರೈತರು ದಾರಿ ಕಾಣದೆ ಇದೇ ರೀತಿಯಲ್ಲಿ ಅಪೂರ್ಣವಾಗಿ ಬೆಳೆದಿರುವ ಮೆಕ್ಕೇಜೋಳ ಬೆಳೆಯನ್ನು ನಾಶಮಾಡುತ್ತಿದ್ದಾರೆ. ಕೂಡಲೇ ವಿಮೆ ಕಂಪನಿ ಅಧಿಕಾರಿಗಳು ಬೆಳೆಗಳ ನಷ್ಟದ ಮಾಹಿತಿ ಪಡೆದು ಸಮರೋಪಾದಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಎಂದು ಹುಚ್ಚವ್ವನಹಳ್ಳಿ ಮಂಜುನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಫಸಲ್ ಬಿಮಾ ಯೋಜನೆಯಡಿ ಪರಿಹಾರ ವಿತರಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು.ಈಗಾಗಲೇ ಜಿಲ್ಲಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೃಷಿ ಇಲಾಕೆ ಅಧಿಕಾರಿಗಳು ಜಂಟಿ ಸರ್ವೆ ಮಾಡಲು ಸೂಚಿಸಿದ್ದರೂ ಯಾರೂ ಕೂಡ ಜಮೀನುಗಳಿಗೆ ಭೇಟಿ ನೀಡಿಲ್ಲ.
ಅವರ ಸೂಚನೆ ಮೇರೆಗೆ ಕೂಡಲೇ ನಷ್ಟದ ಸಮೀಕ್ಷೆ ಮಾಡದೇ ಹೋದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳಾದ ಗುಮ್ಮನೂರು ಬಸವರಾಜ್, ವಿ.ಎಚ್.ಪ್ರಕಾಶ್, ಕೆಂಚಮ್ಮನಹಳ್ಳಿ ಹನುಮಂತ, ನೀರ್ಥಡಿ ತಿಪ್ಪೇಶ್, ಗೊಲ್ಲರ ರಂಗಪ್ಪ, ಶಿವಪುರದ ಕೃಷ್ಣಮೂರ್ತಿ, ಆಲೂರು ಪರಶುರಾಮ್, ಸಿದ್ದಪ್ಪ ನಾಯಕ ಮೊದಲಾದವರು ಒತ್ತಾಯಿಸಿದ್ದಾರೆ.
Recommended Video