ಬೆಳೆ ಹಾನಿ; ಬೆಳೆ ವಿಮೆ ಬಾಕಿ 8.84 ಕೋಟಿ ರೂ. ಬಿಡುಗಡೆ
ಕಲಬುರಗಿ, ಸೆಪ್ಟೆಂಬರ್ 19; ಈ ಬಾರಿ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ. ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ.
ಆದರೆ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗಿತ್ತು. ನೈಸರ್ಗಿಕ ವಿಕೋಪದಿಂದಾಗಿ ಬೆಳೆಗಳು ಹಾಳಾಗಿತ್ತು. ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಯೋಜನೆ ನೆರವಿಗೆ ಬಂದಿತ್ತು. ಕಲಬುರಗಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬಾಕಿ ಇದ್ದ ವಿಮೆ ಮೊತ್ತ ಪಾವತಿಗೆ 8.84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ ಈ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೈಸರ್ಗಿಕ ವಿಕೋಪದಿಂದ ಹಾಳಾದ ಬೆಳೆಗಳ ವಿಮೆ ಮೊತ್ತ ಪಾವತಿಗೆ ಬಾಕಿ ಇದ್ದ 2,579 ರೈತರಿಗೆ 8,84,97,607 ರೂ. ವಿಮೆ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೆಳೆ ವಿಮೆ ಮೊತ್ತ ಪಾವತಿಗೆ ಅವಕಾಶ; ಕಳೆದ ವರ್ಷ ವಿಕೋಪದಿಂದ ಬೆಳೆ ಹಾಳಾಗಿ ಕೃಷಿ ವಿಮೆ ಮಾಡಿಸಿದ 19,047 ರೈತರುಗಳ ದೂರಿನಂತೆ 9.59 ಕೋಟಿ ಹಣ ಜಮೆ ಮಾಡಲಾಗಿತ್ತು. ಉಳಿದ 2,579 ರೈತರು ತಡವಾಗಿ ನೋಂದಾಯಿಸಿದ ಕಾರಣ ಅದು ಅಕ್ಷೇಪಣೆ ಹಂತದಲ್ಲಿತ್ತು.
ಇದೀಗ ಸದರಿ ಆಕ್ಷೇಪಣೆ ವಿಲೇವಾರಿಗೊಳಿಸಿರುವ ಯುನಿವರ್ಸಲ್ ಸೋಂಪೋ ಜನರಲ್ ಇನ್ಶುರೆನ್ಸ್ ಕಂಪನಿ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಾಶ್ಯಾಳ, ಆಳಂದ ತಾಲೂಕಿನ ಕಿಣ್ಣಿಸುಲ್ತಾನ, ಕೊಡ್ಲಹಂಗರಗಾ ಹಾಗೂ ಕಲಬುರಗಿ ತಾಲೂಕಿನ ಬಸವ ಪಟ್ಟಣ ಗ್ರಾಮದ 2,579 ರೈತರಿಗೆ 8.84 ಕೋಟಿ ರೂ. ಬಿಡುಗಡೆ ಮಾಡಿದೆ.
ಇದರಿಂದ ಕಳೆದ 2022-23ನೇ ಸಾಲಿಗೆ ಒಟ್ಟಾರೆ ಕಲಬುರಗಿ ಜಿಲ್ಲೆಯ 21,626 ರೈತರಿಗೆ 18,44,95,118 ರೂ. ಬೆಳೆ ವಿಮೆ ಪರಿಹಾರ ದೊರಕಿದಂತಾಗಿದೆ. ರೈತರು ಬೆಳೆ ವಿಮೆ ಮಾಡಿಸಿಕೊಂಡರೆ ನೈಸರ್ಗಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಅವರ ನೆರವಿಗೆ ಬರಲಿದೆ.
ಮುಂಗಾರು ಮಳೆ ಕೊರತೆ; ಈ ಬಾರಿಯ ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಉಂಟಾಗಿದೆ. ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆ ಕೊರತೆ ಬಗ್ಗೆ ಮಾತನಾಡಿದ್ದಾರೆ.
"ಪ್ರಸಕ್ತ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಯಿಂದ ಮಳೆ ಇಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 42 ಸೇರಿದಂತೆ ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ" ಎಂದು ಹೇಳಿದ್ದಾರೆ.
"ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರು, ಮೇವು ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಬೆಳೆ ಹಾನಿ ಸಮೀಕ್ಷೆ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications