Chikkaballapur: ಮಹಾ ಮಳೆಗೆ ಬೆಳೆ ನಾಶ- ನೋಡ ನೋಡುತ್ತಿದ್ದಂತೆ ಕೊಚ್ಚಿಹೋದ ಕಾರುಗಳು!
ಚಿಕ್ಕಬಳ್ಳಾಪುರ ಅಕ್ಟೋಬರ್ 22: ಸೋಮವಾರ ರಾತ್ರಿ ಸುರಿದ ಬಾರಿ ಮಳೆಗೆ ಜಕ್ಕಲಮಡುಗು ಜಲಾಶಯ ತುಂಬಿ ತುಳುಕಿ ರಭಸವಾಗಿ ಕೋಡಿ ಹರಿಯುತ್ತಿದೆ. ಉಕ್ಕಿ ಹರಿಯುವ ನೀರನ್ನು ನೋಡಲು ಜಲಾಶಯದ ಕಡೆಗೆ ಜನಸಾಗರವೇ ಹರಿದು ಬರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಸುತ್ತಮುತ್ತಲಿನ ಪಂಚಗಿರಿಗಳ ಸಾಲಲ್ಲಿ ಸುರಿದ ಮಹಾ ಮಳೆಯಿಂದಾಗಿ ಜಕ್ಕಲಮಡುಗು ಜಲಾಶಯ ಭರ್ತಿಯಾಗಿ ಹರಿಯುತ್ತಿದೆ. ಸದ್ಯ ಜಲಾಶಯ ತುಂಬಿರುವುದರಿಂದ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ಜನರ ಕುಡಿಯುವ ನೀರಿನ ದಾಹವನ್ನ ತೀರಿಸುವಲ್ಲಿ ಆಸರೆಯಾಗಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಒಂದಿಷ್ಟು ನಿರಾಳವಾಗಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ನೀರು ಪೂರೈಸುವ ಜಕ್ಕಲಮೊಡಗು ಜಲಾಶಯದಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಉತ್ತಮ ಮಳೆಯಾಗದೆ ಜಲಾಶಯದ ನೀರಿಮಟ್ಟ ಕುಸಿತ ಕಂಡಿತ್ತು. ಇದರಿಂದ ಜಲಾಶಯದ ನೀರನ್ನ ಅವಲಂಬಿತ ಎರಡು ನಗರಗಳ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ಹಿಂಗಾರು ಮಳೆ ಅಬ್ಬರದಿಂದ ಜಲಾಶಯ ತುಂಬಿ ಜನರ ಆತಂಕವನ್ನು ದೂರ ಮಾಡಿದೆ.
ಜಕ್ಕಲಮಡಗು ಜಲಾಶಯದಲ್ಲಿ ಗರಿಷ್ಠ 64 ಅಡಿಗಳವರೆಗೂ ನೀರು ಸಂಗ್ರಹವಾಗುತ್ತೆ. ಆದರೆ ಮಳೆಯ ಕೊರತೆಯಿಂದ ನೀರಿನ ಮಟ್ಟ ಡೆತ್ ಸ್ಟೋರೇಜ್ ಸೇರಿ 22 ಆಡಿಗಳಿಗೆ ಕುಸಿದಿತ್ತು. ಅದೃಷ್ಟವಶಾತ್ ಹಿಂಗಾರು ಮಳೆಯಿಂದ ಜಲಾಶಯಕ್ಕೆ ನೀರು ಬಂದಿದ್ದು, ಜಲಾಶಯ ತುಂಬಿ ಕೋಡಿ ಹರಿದಿದೆ.
ಬಗೆ ಹರಿದ ಕುಡಿಯುವ ನೀರಿನ ಸಮಸ್ಯೆ -
ಕಳೆದ ವರ್ಷ ಮಳೆಯಿಲ್ಲದೆ ಎರಡು ನಗರಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ಇತ್ತು, ಈಗ ಜಲಾಶಯ ಕೋಡಿ ಬಿದ್ದಿರುವ ಕಾರಣ ನೆಮ್ಮದಿ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ವರದಾನ: ಜಕ್ಕಲಮಡುಗು ಜಲಾಶಯ ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ವರದಾನವಾಗಲಿದ್ದು, ರೈತರಿಗೆ ಸಂತಸ ತಂದಿದೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.
ಕೊಚ್ಚಿಹೋದ ಕಾರುಗಳು:
ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ಸಂಪರ್ಕ ಕಲ್ಪಿಸುವ ಮೇಲು ಸೇತುವೆ ಕೆಳಗೆ ಅಪಾರ ಪ್ರಮಾಣದ ನೀರು ಸೇರಿಕೊಂಡಿದ್ದು, ಎರಡು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಆರು ಜನ ಪ್ರಾಣಪಾಯದಿಂದ ಪಾರಗಿದ್ದಾರೆ, ಕಾರುಗಳು ನೀರಿನಲ್ಲಿ ಮುಳುಗಿದ್ದು, ನೀರು ತಗ್ಗಿದ ನಂತರ ಕ್ರೇನ್ ಗಳ ಮೂಲಕ ಕಾರುಗಳನ್ನು ಹೊರ ತೆಗೆಯ ಬಹುದು.
ಕಳೆದ ಮೂರು ವರ್ಷಗಳ ಹಿಂದೆಯೂ ಸಹ ಇದೇ ಸ್ಥಳದಲ್ಲಿ ಇದೆ ರೀತಿಯ ಅವಾಂತರ ಸೃಷ್ಟಿಯಾಗಿತ್ತು, ಆಗಿನ ಬಿಜೆಪಿ ಸರಕಾರದ ಸಚಿವ ಡಾ.ಕೆ. ಸುಧಾಕರ್ ರವರು ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದ್ದರು. ಆದರೆ ಮೂರು ವರ್ಷಗಳು ಕಳೆದರು ಇದುವರೆಗೂ ಸಮಸ್ಯೆ ಬಗೆಹರಿಸುವಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿಫಲವಾಗಿದ್ದರೆ.
ಕೈಗೆ ಬಂದ ತುತ್ತು ಬಾಯಿಗೆ ಇಲ್ಲ-
ಜಿಲ್ಲೆಯ ರೈತರ ಪರಿಸ್ಥಿತಿ ಇಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಹೌದು ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನೀರು ಪಲಾಗಿದ್ದು ಫಸಲು ಕಟಾವು ಮಾಡುವ ಸಮಯಕ್ಕೆ ಮಹಾ ಮಳೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿವೆ.
ಚೆಂಡು, ಸೇವಂತಿ ಹೂವು ತಿಪ್ಪೆ ಪಾಲು- ಧಾರಾಕಾರವಾದ ಮಳೆಯ ನಡುವೆಯೂ ಕಷ್ಟ ಪಟ್ಟು ರೈತರು ಹೂವು ಕಟಾವು ಮಾಡಿ, ಮಾರುಕಟ್ಟೆಗೆ ತಂದರೆ ಹೂವು ಕೇಳುವವರಿಲ್ಲದೆ, ಮಾರಾಟವಾಗದ ಹಿನ್ನಲೆಯಲ್ಲಿ ಹೂವನ್ನು ರಸ್ತೆ ಅಕ್ಕ ಪಕ್ಕ ಬಿಸಾಡಿ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ.












Click it and Unblock the Notifications