ತಮ್ಮದೇ ಪಕ್ಷದ ಚಿಹ್ನೆಯನ್ನು ಮರೆತರಾ ಕುಮಾರಸ್ವಾಮಿ?
Recommended Video

ಬೆಂಗಳೂರು, ನವೆಂಬರ್ 19: ತೆನೆ ಹೊತ್ತ ರೈತ ಮಹಿಳೆ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷದ ಚಿಹ್ನೆ. ಆದರೆ ತಮ್ಮ ಚಿಹ್ನೆಯನ್ನೇ ಸಿಎಂ ಕುಮಾರಸ್ವಾಮಿ ಮರೆತಂತಿದೆ.
ರೈತ ಮಹಿಳೆಯೊಬ್ಬರ ಬಗ್ಗೆ ಕೀಳಾದ ಹೇಳಿಕೆ ನೀಡಿರುವ ಕುಮಾರಸ್ವಾಮಿ ವಿರುದ್ಧ ರೈತರು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ರೈತ ಮಹಿಳೆಯನ್ನು ಚಿಹ್ನೆಯಾಗಿ ಹೊಂದಿರುವ ಪಕ್ಷದ ಸಿಎಂ ರೈತ ಮಹಿಳೆಗೆ ಅವಮಾನಕಾರಿಯಾಗಿ ಮಾತನಾಡಿರುವುದು ಸಹಜವಾಗಿಯೇ ರೈತರ ಸಿಟ್ಟು ಕೆರಳಿಸಿದೆ.
ಇದೀಗ ಸಿಎಂ ಅವರು 26 ಅಂಶಗಳ ಸ್ಪಷ್ಟನೆ ನೀಡಿದ್ದಾರಾದರೂ. ಸಿಎಂ ಅವರು ಅಂದ ಮಾತನ್ನು ವಾಪಸ್ ಪಡೆಯಲಂತೂ ಸಾಧ್ಯವಿಲ್ಲ. ರೈತರ ಪ್ರತಿಭಟನೆ ಮುಂದುವರೆದಿದೆ. ಅವರಿಗೆ ಸಿಎಂ ಅವರು ಕ್ಷಮೆ ಕೇಳಲೇಕೆಂಬ ಪಟ್ಟು.
ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಹೋರಾಟ ನಡೆಸುತ್ತಿದ್ದ ರೈತ ಮಹಿಳೆ ಜಯಶ್ರೀ ಅವರ ಬಗ್ಗೆ ಸಿಎಂ ಕೀಳಾಗಿ ಮಾತನಾಡಿದ್ದಾರೆ. 'ಕಳೆದ ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದಳಂತೆ' ಎಂದು ಸಿಎಂ ಅವರು ಪದ ಪ್ರಯೋಗಿಸಿದ್ದಾರೆ. ಇದು ಸಿಎಂ ಹುದ್ದೆಗೂ, ರೈತರ ಹೆಸರು ಹೇಳಿ ರಾಜಕಾರಣ ಮಾಡುತ್ತಾ ಬಂದಿರುವ ಪಕ್ಷದ ಮುಖಂಡರಿಗೆ ಕಿಂಚಿತ್ತೂ ಶೋಭಿತವಲ್ಲ.

ಕಠು ಶಬ್ದಗಳಲ್ಲಿ ಖಂಡಿಸಿದ ಬಿಜೆಪಿ
ಬಿಜೆಪಿ ಈಗಾಗಲೇ ಸಿಎಂ ಅವರ ಬೇಜವಾಬ್ದಾರಿಯುತ ಮಾತುಗಳನ್ನು ಕಠು ಶಬ್ದಗಳಲ್ಲಿ ಖಂಡಿಸಿದೆ. ಅದು ಈ ವಿಷಯವನ್ನು ಬಹು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಎಲ್ಲ ಹಂತದಲ್ಲಿ ಮುಜುಗರವಾಗುವಂತೆ ಬಳಸಿಕೊಳ್ಳಲಿದೆ. ಬೆಳಗಾವಿ ಅಧಿವೇಶನದಲ್ಲೂ ಈ ವಿಷಯ ಪ್ರತಿಧ್ವನಿಸುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ಗೆ ತೀವ್ರ ಮುಜುಗರ
ಸಿಎಂ ಅವರ ಈ ಹೇಳಿಕೆ ಮಿತ್ರ ಪಕ್ಷ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟುಮಾಡಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರು ಸಿಎಂ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲವೆಂದು ಡಿಸಿಎಂ ಹೇಳಿದ್ದು, ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ.

ಹೇಳಿಕೆಯಿಂದ ಎಚ್ಡಿಕೆಗೆ ನಷ್ಟ
ಈ ಹೇಳಿಕೆ ಸ್ವತಃ ಇದು ಕುಮಾರಸ್ವಾಮಿ ಅವರಿಗೆ ಭಾರಿ ನಷ್ಟ ಉಂಟುಮಾಡಲಿದೆ. ರಾಜಕೀಯ ಭಾಷಣಗಳಲ್ಲಿ ರೈತರನ್ನು ಪದೇ ಪದೇ ಪ್ರಸ್ತಾಪಿಸಿ ಚಪ್ಪಾಳೆ, ವೋಟು ಎರಡೂ ಗಿಟ್ಟಿಸಿಕೊಳ್ಳುವ ಕುಮಾರಸ್ವಾಮಿ ಅವರು ಅದೇ ರೈತರ ಅದರಲ್ಲಿಯೂ ರೈತ ಮಹಿಳೆ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಪೆಟ್ಟು ನೀಡುವ ಸಾಧ್ಯತೆ ಇದೆ.

ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ
ಈಗಾಗಲೇ ರಾಜ್ಯದಾದ್ಯಂತ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಫ್ರೀಡಂಪಾರ್ಕ್ ಬಳಿ ರೈತರು ಸರ್ಕಾರದ ಹಾಗೂ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.












Click it and Unblock the Notifications