ಚಾಮರಾಜನಗರದಲ್ಲಿ ಟೊಮೆಟೋ ಬೆಲೆ 3 ರೂಪಾಯಿ ಕೆಜಿಗೆ ಕುಸಿತ; ಕಂಗಾಲಾದ ರೈತ
ಚಾಮರಾಜನಗರ, ಜುಲೈ, 29 : ಮೊದಮೊದಲು ಕೆ.ಜಿ ಟೊಮೆಟೋ ಬೆಲೆ 80 ರೂಪಾಯಿವರೆಗೆ ಏರಿಕೆಯಾಗಿ ಮಾರುಕಟ್ಟೆಗಳಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಇದೀಗ 3 ರೂಪಾಯಿಗೆ ಕುಸಿದಿರುವ ಹಿನ್ನೆಲೆ ಚಾಮರಾಜನಗರದ ರೈತರು ಮಾರುಕಟ್ಟೆ ಪ್ರಾಂಗಣದಲ್ಲೇ ಟೊಮೆಟೋಗಳನ್ನು ಸುರಿದು ಹೋಗುತ್ತಿದ್ದಾರೆ. ರೈತರು ನಷ್ಟ ಸಂಭವಿಸಿದ್ದು, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಕಳೆದ 20 ದಿನದಿಂದಲೂ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಹಾಗೂ ಅಧಿಕ ಮಂದಿ ರೈತರು ಒಮ್ಮಲೆ ಮಾರುಕಟ್ಟೆಗೆ ಟೊಮೊಟೋ ತರುತ್ತಿದ್ದರು. ಈ ಹಿನ್ನೆಲೆ ಕಳೆದ 2 ದಿನಗಳಿಂದ ಕೆ.ಜಿ. ಟೊಮೆಟೋ ಬೆಲೆ 3 ರೂಪಾಯಿಗೆ ಕುಸಿದಿದೆ. ಇದರಿಂದ ಹಾಕಿದ ಬಂಡವಾಳ ಸಿಗದಂತಾಗಿದ್ದು, ಟೊಮೊಟೋ ಬೆಳೆದು ರೈತ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಿಂಗಳುಗಟ್ಟಲೆ ಟೊಮೊಟೋ ಬೆಳೆ ಬೆಳೆದು, ಕೂಲಿಕಾರರನ್ನು ಇಟ್ಟು ಅವುಗಳನ್ನು ಅರೆದು ತಂದರು ಸಹ 3 ರೂಪಾಯಿಗೆ ಕುಸಿದಿದೆ. ಈ ಹಿನ್ನೆಲೆ ರೈತರು ವಿಧಿಯಿಲ್ಲದೆ ಮಾರುಕಟ್ಟೆ ಪ್ರಾಂಗಣದಲ್ಲಿ ಟೊಮೊಟೋಗಳನ್ನು ರಾಶಿಗಟ್ಟಲೇ ಸುರಿದಿದ್ದಾರೆ.
ಈ ಸಮಯದಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆಯಿಂದ ರೈತರು ಹೆಚ್ಚಾಗಿ ಟೊಮೆಟೋ ಬೆಳೆ ಬೆಳೆದಿದ್ದರು. ಕಷ್ಟಪಟ್ಟು ಬಿಸಿಲು, ಮಳೆಯನ್ನದೇ ಬೆವರಿಳಿಸಿ ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದರೆ ನೆಲಕಚ್ಚಿಬಿಡುತ್ತಾರೆ. ಇನ್ನು ಮಾರ್ಟ್ಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ತರಕಾರಿಗಳನ್ನು ಕೊಳ್ಳುತ್ತಾರೆ. ಆದರೆ ಬೆವರಿಳಿಸಿ ಯಾವುದೇ ಕೆಮಿಕಲ್ಗಳನ್ನು ಬಳಸದೇ ಬೆಳೆ ಬೆಳೆದಿರುವ ರೈತರ ಬಳಿ ಮಾತ್ರ ಚೌಕಾಸಿ ಮಾಡುತ್ತಾರೆ. ದಿಕ್ಕು ತೋಚದೇ ರೈತರು ಹೀಗೆ ಸೂಕ್ತ ಬೆಲೆ ಸಿಗದಿದ್ದಾಗ ಬೆಳೆದ ಬೆಳೆಗಳನ್ನು ಬೀದಿಗೆ ಚೆಲ್ಲಿ ಹೋಗುತ್ತಾರೆ.
ಅನ್ನದಾತನ ಟೊಮೆಟೋ ದನಗಳ ಪಾಲು
ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆದ ಟೊಮೊಟೋಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಇದೀಗ ಪ್ರಾಂಗಣದಲ್ಲಿ ಸುರಿದ ಟೊಮೆಟೋ ಜಾನುವಾರುಗಳ ಆಹಾರವಾಗಿದೆ. ಮಾರುಕಟ್ಟೆಗೆ ದೂರದ ಊರುಗಳಿಂದ ಅಧಿಕ ಮಂದಿ ರೈತರು ಆಟೋವನ್ನು ಬಾಡಿಗೆ ಮಾಡಿಕೊಂಡು ಟೊಮೆಟೋವನ್ನು ತರುತ್ತಿದ್ದಾರೆ. ಬೆಲೆ ಕುಸಿದಿರುವ ಹಿನ್ನೆಲೆ ಆಟೋಗೆ ಬಾಡಿಗೆ ಕೊಡಲು ಆಗದೆ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಿಢೀರ್ ಕುಸಿತ ಕಂಡ ಟೊಮೆಟೋ ಬೆಲೆ
"ಕಳೆದ 2 ತಿಂಗಳ ಹಿಂದೆ ಕೆ.ಜಿ ಟೊಮೊಟೋ 90 ರೂಪಾಯಿವರೆಗೆ ಏರಿಕೆಯಾಗಿತ್ತು. ಆ ವೇಳೆ ಟೊಮೆಟೋ ಬೆಳೆ ಬೆಳೆದ ರೈತರು ಅಧಿಕವಾಗಿ ಲಾಭ ಮಾಡಿಕೊಂಡರು. ಆಗಿನಿಂದ ರೈತರು ಹೆಚ್ಚಿನದಾಗಿ ಟೊಮ್ಯಾಟೊ ಬೆಳೆಯಲು ಆರಂಭಿಸಿದರು. ಈ ಕಾರಣದಿಂದ ಇದೀಗ ಬೆಲೆ ಕುಸಿತ ಆಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಕೆಲವು ದಿನಗಳಿಂದ ಮಾರಕಟ್ಟೆಗೆ ನಿಗಧಿಗಿಂತ ಅಧಿಕವಾಗಿ ಟೊಮೊಟೋ ಬರಲಾಂಭಿಸಿತು. ಕಳೆದ 20 ದಿನದಿಂದ ನಿರಂತವಾಗಿ ಮಳೆಯಾದ ಕಾರಣ ಬೆಲೆ ದಿಢೀರ್ ಕುಸಿತ ಕಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ," ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಆಕ್ರೋಶ ಹೊರ ಹಾಕಿದರು.
ಅಳಲು ತೋಡಿಕೊಂಡ ಅನ್ನದಾತ
ಈ ಬಗ್ಗೆ ರೈತರಾದ ಹೊಸಪುರದ ಮಹದೇವೇಗೌಡ ಅವರು ಮಾತನಾಡಿ, "ತಿಂಗಳುಗಟ್ಟಲೆ ಶ್ರಮವಹಿಸಿ ಟೊಮೊಟೋವನ್ನು ಮಾರುಕಟ್ಟೆಗೆ ತಂದರೆ ಕೇಲವ 3 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವುಂಟಾಗಿದೆ. 1 ಲಕ್ಷ ರೂಪಾಯಿ ಸಾಲ ಮಾಡಿ ಟೊಮೆಟೊ ಬೆಳೆದಿದ್ದೆ. ಹಾಕಿದ ಬಂಡವಾಳವು ಕೈ ಸೇರದೆ, ನಷ್ಟದ ಭೀತಿ ಎದುರಾಗಿದೆ. ವಿಧಿಯಿಲ್ಲದೆ ಮಾರುಕಟ್ಟೆಯಲ್ಲೇ 40 ಬಾಕ್ಸ್ ಟೊಮೊಟೋ ಸುರಿದಿದ್ದೇನೆ," ಎಂದು ಅಳಲು ತೋಡಿಕೊಂಡರು.
ಬೆಳೆಗಳನ್ನು ಬೆಳೆಯುವ ಬಗ್ಗೆ ಸಲಹೆ
ನಂತರ ಗುಂಡ್ಲುಪೇಟೆಯ ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಮಾತನಾಡಿ, ಮಾರುಕಟ್ಟೆಗೆ ಅಧಿಕ ಟೊಮಾಟೋ ಬಾಕ್ಸ್ ಒಮ್ಮೆಲೆ ಬಂದ ಕಾರಣ ಹಾಗೂ ನಿರಂತರವಾಗಿ ಮಳೆಯಾಗಿ ಕೆ.ಜಿ ಟೊಮಾಟೋ ಬೆಲೆ 3 ರೂಪಾಯಿಗೆ ಕುಸಿದಿದೆ. ಆದ್ದರಿಂದ ರೈತರು ಸಂದರ್ಭಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.
Recommended Video