ಕಾಫಿ ಕೊಯ್ಲಿಗೆ ಕೇರಳದತ್ತ ಮುಖ ಮಾಡಿದ ಚಾಮರಾಜನಗರ ಕಾರ್ಮಿಕರು

ಚಾಮರಾಜನಗರ, ಜನವರಿ 20: ಇದೀಗ ಕಾಫಿ ಕೊಯ್ಲಿನ ಸಮಯ. ಹೀಗಾಗಿ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬಿಡುವಿಲ್ಲದ ಕೆಲಸ. ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ. ಆದ್ದರಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಬಹಳಷ್ಟು ಸಣ್ಣ ಪ್ರಮಾಣದ ರೈತರು ಮತ್ತು ಕೂಲಿ ಕಾರ್ಮಿಕರು ಕೇರಳದತ್ತ ಮುಖ ಮಾಡಿದ್ದಾರೆ.

ಕೇರಳದ ಕೆಲವು ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ಈಗ ಕಾಫಿ ಕೊಯ್ಲು ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಬೇಕಾಗಿರುವುದರಿಂದ ಬೇರೆ ಕಡೆಗಳಿಂದ ಕಾಫಿ ಕೊಯ್ಲು ಮಾಡಲು ಬರುವವರಿಗೆ ಆದ್ಯತೆ ನೀಡಲಾಗುತ್ತಿದೆ.

 ಕೇರಳದತ್ತ ಮುಖ ಮಾಡಿರುವ ಚಾಮರಾಜನಗರ ಕಾರ್ಮಿಕರು

ಕೇರಳದತ್ತ ಮುಖ ಮಾಡಿರುವ ಚಾಮರಾಜನಗರ ಕಾರ್ಮಿಕರು

ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಅವರು ಕೊಯ್ಲು ಮಾಡುವ ಕಾಫಿಯ ಪ್ರಮಾಣದ ಮೇಲೆ ಕೂಲಿ ನೀಡುವುದರಿಂದ ಕಾರ್ಮಿಕರು ಒಂದಷ್ಟು ಹೆಚ್ಚಿನ ಶ್ರಮ ವಹಿಸಿ ಕೊಯ್ಲು ಮಾಡಿ ಹಣ ಸಂಪಾದಿಸಿಕೊಂಡು ಬರುವ ಉದ್ದೇಶದಿಂದಾಗಿ ಕೇರಳದತ್ತ ಮುಖ ಮಾಡಿದ್ದಾರೆ.

ಹಾಗೆನೋಡಿದರೆ ಗುಂಡ್ಲುಪೇಟೆ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ಸಮರ್ಪಕ ಕೆಲಸ ಸಿಗದಂತಾಗಿದೆ. ಇಷ್ಟೇ ಅಲ್ಲದೆ ಕೃಷಿ ಮಾಡುತ್ತಿದ್ದ ಸಣ್ಣಪುಟ್ಟ ರೈತರು ಸಂಕಷ್ಟಕ್ಕೆ ಸಿಲುಕಿ ಸಾಲ ಮಾಡಿಕೊಂಡಿರುವುದರಿಂದ ಅದನ್ನು ತೀರಿಸುವ ಸಲುವಾಗಿಯೂ ಕೆಲಸ ಹುಡುಕಿಕೊಂಡು ಕೇರಳದತ್ತ ತೆರಳುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

 ಕುಟುಂಬಸಮೇತ ಹೊರಟ ಮಂದಿ

ಕುಟುಂಬಸಮೇತ ಹೊರಟ ಮಂದಿ

ಈ ಸಮಯದಲ್ಲಿ ಕೇರಳಕ್ಕೆ ತೆರಳಿದರೆ ಹಿಂತಿರುಗುವಾಗ ಒಂದಷ್ಟು ಹಣವನ್ನು ಸಂಪಾದನೆ ಮಾಡಿಕೊಂಡು ಬರಬಹುದು ಎಂಬ ಉದ್ದೇಶದಿಂದ ಕುಟುಂಬ ಸಮೇತ ತೆರಳುತ್ತಿದ್ದಾರೆ. ಆದರೆ ಹೀಗೆ ಹೋಗುವ ಕುಟುಂಬಗಳು ತಮ್ಮ ಮಕ್ಕಳನ್ನು ಕೂಡ ತಮ್ಮ ಜತೆಯಲ್ಲಿ ಕರೆದೊಯ್ಯುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಪ್ರತಿ ವರ್ಷವೂ ಜನವರಿ ತಿಂಗಳಲ್ಲಿ ಗುಂಡ್ಲುಪೇಟೆಗೆ ಹೊಂದಿಕೊಂಡಂತೆ ಇರುವ ಭೀಮನಬೀಡು, ಕೂತನೂರು, ಮಲ್ಲಯ್ಯನಪುರ, ಬನ್ನಿತಾಳಪುರ, ಕೋಡಹಳ್ಳಿ ಅಣ್ಣೂರುಕೇರಿ ಸೇರಿದಂತೆ ಹಲವು ಗ್ರಾಮಗಳ ಜನರು ಕೂಲಿಗಾಗಿ ಕೇರಳದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೇರಳದ ಸುಲ್ತಾನ್ ಬತ್ತೇರಿ, ಕಲ್ಪೆಟ, ಮೀನಾಂಗಡಿ, ಕಲ್ಲಿಕೋಟೆ ಮೊದಲಾದ ಊರುಗಳಿಗೆ ಗುಳೆ ಹೋಗುತ್ತಾರೆ. ಇದಕ್ಕೆ ಕಾರಣ ಇಲ್ಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ಸಿಗದಿರುವುದು ಎಂಬ ಆರೋಪವೂ ಇದೆ. ಆದರೆ ಕೇರಳಕ್ಕೆ ತೆರಳುವ ಕಾರ್ಮಿಕರು ಹೇಳುವ ಮಾತೇ ಬೇರೆಯಾಗಿದೆ.

 ಸಾಲ ತೀರಿಸಲು ಹೋಗುವುದು ಅನಿವಾರ್ಯ

ಸಾಲ ತೀರಿಸಲು ಹೋಗುವುದು ಅನಿವಾರ್ಯ

ಅದು ಏನೆಂದರೆ, ತಾವಿರುವ ಊರಲ್ಲಿ ಕೂಲಿ ಕೆಲಸದ ಅನಿಶ್ಚಿತತೆಯಿದೆ. ತಮಗೆ ಕೇರಳದಲ್ಲಿ ಸಿಗುವಷ್ಟು ಕೂಲಿ ಹಾಗೂ ಕೆಲಸ ಸಿಗುವುದಿಲ್ಲ. ಹೀಗಾಗಿ ಒಂದೆರಡು ತಿಂಗಳ ಕಾಲ ಅಲ್ಲಿದ್ದು ಕಾಫಿ ಕೊಯ್ಲು ಮಾಡಿ ಹಿಂತಿರುಗಿದರೆ ಸ್ವಲ್ಪಮಟ್ಟಿಗೆ ತಮ್ಮ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ. ಜತೆಗೆ ಒಡವೆ ವಸ್ತ್ರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಾವು ಕೇರಳದತ್ತ ತೆರಳುತ್ತಿರುವುದಾಗಿ ಹೇಳುತ್ತಾರೆ. ಕುಟುಂಬ ಸಮೇತ ಕೇರಳಕ್ಕೆ ತೆರಳುತ್ತಿರುವುದರಿಂದ ಹೆಚ್ಚಿನ ಗ್ರಾಮಗಳ ಕುಟುಂಬಗಳ ಮನೆಯಲ್ಲಿ ವಯಸ್ಸಾದವರನ್ನು ಮಾತ್ರ ಕಾಣುವಂತಾಗಿದೆ. ಇನ್ನೊಂದೆಡೆ ಕೇರಳಕ್ಕೆ ತೆರಳುವ ಬಸ್‌ಗಳಲ್ಲಿ ನೂಕು ನುಗ್ಗಲು ಕಾಣಸಿಗುತ್ತಿದೆ.

 ಕೇರಳದಲ್ಲಿ ಹೆಚ್ಚು ಕೂಲಿ

ಕೇರಳದಲ್ಲಿ ಹೆಚ್ಚು ಕೂಲಿ

ಸ್ಥಳೀಯವಾಗಿ ಕೆಲಸ ಮಾಡಿದರೆ ದಿನಕ್ಕೆ ಕೇವಲ 250 ರಿಂದ 300ರೂ ಕೂಲಿ ದೊರೆತರೆ, ಕೇರಳದಲ್ಲಿ 600 ರಿಂದ 800 ಸಂಪಾದಿಸಬಹುದು. ಹೀಗಾಗಿ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ತೆರಳುತ್ತಿದ್ದಾರೆ. ರಾಜ್ಯದಿಂದ ಕೇರಳದತ್ತ ಕೆಲಸಕ್ಕಾಗಿ ತೆರಳುವುದನ್ನು ತಪ್ಪಿಸುವ ಸಲುವಾಗಿ ವಿಶೇಷ ಯೋಜನೆಯ ಅನಿವಾರ್ಯತೆಯಿದ್ದು, ಕೂಲಿ ಕಾರ್ಮಿಕರಿಗೆ ತಮ್ಮ ಸ್ವಗ್ರಾಮದಲ್ಲಿಯೇ ಕೆಲಸ ದೊರೆಯುವ ಯೋಜನೆ ಜಾರಿಯಾಗಬೇಕಾಗಿದೆ. ಬಹಳಷ್ಟು ಬಡ ಕುಟುಂಬಗಳು ಹಣ ಸಂಪಾದನೆಗಾಗಿ ಕೇರಳದತ್ತ ಮುಖ ಮಾಡುವುದರಿಂದ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಇದನ್ನು ತಪ್ಪಿಸುವ ಕೆಲಸವಾಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+