ರೈತರಿಗೆ ಸರ್ಕಾರದಿಂದ ಬಂತು ಮತ್ತೊಂದು ಪತ್ರ; "ತಾರ್ಕಿಕ ಪರಿಹಾರ"ದ ಉಲ್ಲೇಖ
ನವದೆಹಲಿ, ಡಿಸೆಂಬರ್ 24: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ಗುರುವಾರ 29ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಕೈಗೊಂಡು ತಿಂಗಳಾದರೂ ರೈತರು ಹಾಗೂ ಸರ್ಕಾರದ ನಡುವಿನ ಈ ಬಿಕ್ಕಟ್ಟು ಮಾತ್ರ ಶಮನವಾಗಿಲ್ಲ.
ಒಂದೆಡೆ ಕೃಷಿ ಕಾಯ್ದೆಗಳ ರದ್ದತಿಗೆ ರೈತರು ಪಟ್ಟುಹಿಡಿದಿದ್ದರೆ, ಮತ್ತೊಂದೆಡೆ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸರ್ಕಾರ ಪ್ರಸ್ತಾವ ಮುಂದಿಡುತ್ತಿದೆ. ಇದೇ ಕಾರಣ, ರೈತರು ಹಾಗೂ ಕೇಂದ್ರದ ನಡುವೆ ಮಾತುಕತೆಗೂ ತೊಡಕಾಗಿದೆ. ಭಾನುವಾರವಷ್ಟೇ ಈ ಬಿಕ್ಕಟ್ಟು ಶಮನದ ಚರ್ಚೆ ನಡೆಸಲು ದಿನ ನಿಗದಿಪಡಿಸುವಂತೆ ಸರ್ಕಾರ ರೈತರಿಗೆ ಪತ್ರ ಬರೆದಿದ್ದು, ಹೊಸ ಕಾರ್ಯಸೂಚಿಯೊಂದಿಗೆ ಸರ್ಕಾರ ಮುಂದೆ ಬರದ ಹೊರತು ಮಾತುಕತೆ ನಡೆಯುವ ಪ್ರಸಂಗವೇ ಇಲ್ಲ ಎಂದು ರೈತ ಸಂಘಗಳು ನಿರಾಕರಿಸಿವೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಮತ್ತೊಂದು ಪತ್ರವನ್ನು ಬರೆದಿದೆ.
ಆರನೇ ಸುತ್ತಿನ ಮಾತುಕತೆಗೆ ಮತ್ತೊಮ್ಮೆ ಪತ್ರದ ಮೂಲಕ ಆಹ್ವಾನಿಸಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತುಕತೆಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡಿ ಎಂದು ಪುನರುಚ್ಚರಿಸಿದೆ.

ಕೃಷಿ ಸಚಿವಾಲಯ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ ವಾಲ್ ಅವರ ಸಹಿ ಇರುವ ಈ ಪತ್ರದಲ್ಲಿ, ರೈತರು ಮುಂದಿಟ್ಟಿರುವ ಸಮಸ್ಯೆಗಳಿಗೆ "ತಾರ್ಕಿಕ ಪರಿಹಾರ" ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ. ರೈತರ ಮೇಲಿನ ಗೌರವ ಹಾಗೂ ಮುಕ್ತ ಮನಸ್ಸಿನೊಂದಿಗೆ ಸರ್ಕಾರ ಇದುವರೆಗೂ ಹಲವು ಸುತ್ತಿನ ಮಾತುಕತೆ ನಡೆಸಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂದಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲು ಪ್ರಸ್ತಾಪ ಇಡಲಾಗುತ್ತಿದೆ ಎಂದು ಉಲ್ಲೇಖಿಸಿದೆ.
ಕನಿಷ್ಠ ಬೆಂಬಲ ಬೆಲೆ ಒಳಗೊಂಡಂತೆ ರೈತರ ಹಲವು ಆಕ್ಷೇಪಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ಚರ್ಚೆಯು ನವದೆಹಲಿಯ ವಿಜ್ಞಾನ ಭವನದಲ್ಲಿ ಸಚಿವಾಲಯ ಮಟ್ಟದ ಸಮಿತಿಯೊಂದಿಗೆ ನಡೆಯಲಿದೆ ಎಂದು ತಿಳಿಸಿದೆ.
ಗುರುವಾರಕ್ಕೆ ರೈತರ ಪ್ರತಿಭಟನೆ 29ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ಆರಂಭಗೊಂಡು ತಿಂಗಳು ಕಳೆಯುತ್ತಿದೆ. ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ರಾಷ್ಟ್ರಪತಿಗಳನ್ನುಭೇಟಿ ಮಾಡಿ ಎರಡು ಕೋಟಿ ರೈತರ ಸಹಿ ಸಂಗ್ರಹದ ಜ್ಞಾಪನಾ ಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಮತ್ತೊಮ್ಮೆ ರೈತರಿಗೆ ಸರ್ಕಾರ ಪತ್ರ ಬರೆದಿದೆ. ಈ ಪತ್ರದ ಕುರಿತು ಸದ್ಯಕ್ಕೆ ರೈತ ಸಂಘಗಳು ತಮ್ಮ ನಿರ್ಧಾರವನ್ನು ವ್ಯಕ್ತಪಡಿಸಿಲ್ಲ.












Click it and Unblock the Notifications